ಘೋಟ್ನೇಕರ ಸಂಗ ತೊರೆದು ಕಾಂಗ್ರೆಸ್ ಸೇರಲು ಸಜ್ಜಾದ ಪರಮಾಪ್ತರು

KannadaprabhaNewsNetwork | Published : Oct 20, 2024 1:48 AM

ಸಾರಾಂಶ

ಘೋಟ್ನೇಕರ ಅವರೊಂದಿಗೆ ಇದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂಬ ಸತ್ಯವನ್ನು ಮನಗಂಡು ನಾನು ನಮ್ಮ ಮಿತ್ರರೂ ಘೋಟ್ನೇಕರ ಅವರ ಸಖ್ಯವನ್ನು, ಜೆಡಿಎಸ್ ಪಕ್ಷವನ್ನು ಬಿಡಲು ನಿರ್ಧರಿಸಿದ್ದೇವೆ ಜೆಡಿಎಸ್ ಮುಖಂಡ ಸಂಜೀವ ಪಾಟೀಲ ಹೇಳಿದರು.

ಹಳಿಯಾಳ: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರ ಬೆಂಬಲಿಗರಾಗಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಅವರಿಗೆ ಹೆಗಲು ನೀಡಿದ್ದೇವೆ. ಆದರೆ, ಹಿರಿಯ ನಾಯಕ ದೇಶಪಾಂಡೆ ನಾಯಕತ್ವ, ವ್ಯಕ್ತಿತ್ವದ ಮುಂದೇ ಘೋಟ್ನೇಕರ ಏನೋ ಅಲ್ಲ. ದೇಶಪಾಂಡೆ ಎಂದಿಗೂ ಯಾರ ಕೆಡುಕನ್ನು ಭಯಸಿಲ್ಲ, ದ್ವೇಷದ ರಾಜಕಾರಣವನ್ನು ಮಾಡಲಿಲ್ಲ. ಆದರೆ ಘೋಟ್ನೇಕರ ಅದಕ್ಕೆ ತದ್ವಿರುದ್ಧವಾಗಿದ್ದರಿಂದ ಅವರನ್ನು ಬಿಟ್ಟು ದೇಶಪಾಂಡೆ ನಾಯಕತ್ವದಲ್ಲಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಘೋಟ್ನೇಕರ ಕಟ್ಟಾ ಬೆಂಬಲಿಗರಾಗಿರುವ ಜೆಡಿಎಸ್ ಮುಖಂಡರು ಹೇಳಿದ್ದಾರೆ.

ಶನಿವಾರ ಶಾಸಕ ದೇಶಪಾಂಡೆಯವರ ಕಾರ್ಯಾಲಯದಲ್ಲಿ ಜಂಟೀ ಸುದ್ದಿಗೋಷ್ಠಿಯಲ್ಲಿ ಘೋಟ್ನೇಕರ ಅವರನ್ನು ಹಾಗೂ ಪಕ್ಷವನ್ನು ತ್ಯಾಗಮಾಡುವ ತಮ್ಮ ದೃಢ ನಿಲುವನ್ನು ಜೆಡಿಎಸ್ ಮುಖಂಡ, ರೈತ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸಂಜೀವ ಪಾಟೀಲ, ನಿದೇರ್ಶಕ ಮಂಡಳಿ ಹಿರಿಯ ಸದಸ್ಯೆ ರೇಷ್ಮಾ ಪಾಟೀಲ ಹಾಗೂ ಯುವ ಮುಖಂಡ ಯಶ್ವಂತ ಪಟ್ಟೇಕರ ಬಹಿರಂಗಪಡಿಸಿದರು.

ಘೋಟ್ನೇಕರ ಸಹವಾಸ ಸಾಕು, ನಾನು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದವನು. ಕಾಂಗ್ರೆಸ್‌ನಿಂದ ನಾನು ಗ್ರಾಪಂ ಸದಸ್ಯನಾದೆ. ರೈತ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷನಾಗಿಯೂ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಘೋಟ್ನೇಕರ ಅವರ ಪ್ರಭಾವಕ್ಕೊಳಗಾಗಿ 2021ರಿಂದ ಕಾಂಗ್ರೆಸ್‌ನಿದ ಅಂತರ ಕಾಯ್ದುಕೊಂಡಿದ್ದೇ ನನ್ನ ದೊಡ್ಡ ತಪ್ಪು ಎಂದು ಅರಿವಾಗುತ್ತದೆ ಎಂದು ಹೇಳಿದರು.

ಘೋಟ್ನೇಕರ ಅವರೊಂದಿಗೆ ಇದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂಬ ಸತ್ಯವನ್ನು ಮನಗಂಡು ನಾನು ನಮ್ಮ ಮಿತ್ರರೂ ಘೋಟ್ನೇಕರ ಅವರ ಸಖ್ಯವನ್ನು, ಜೆಡಿಎಸ್ ಪಕ್ಷವನ್ನು ಬಿಡಲು ನಿರ್ಧರಿಸಿದ್ದೇವೆ ಎಂದರು.

ಎಲ್ಲ ಹುದ್ದೆ ನನಗಿರಲಿ:

ಹಿರಿಯ ನಾಯಕ ದೇಶಪಾಂಡೆಯವರ ಆಶೀರ್ವಾದದಿಂದ ಎರಡೂ ಬಾರಿ ವಿಧಾನಪರಿಷತ್ ಸದಸ್ಯರಾಗಿ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ನಿದೇಶಕರಾಗಿ ಉನ್ನತ ಹುದ್ದೆ ಅನುಭವಿಸಿದ ಘೋಟ್ನೇಕರ ಅವರು ತನ್ನ ಬೆಂಬಲಿಗರಿಗೆ ಅವಕಾಶ ನೀಡದೇ ತಾವೇ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅತೀ ಕನಿಷ್ಟ ಮಟ್ಟಕ್ಕೆ ಇಳಿಯುತ್ತಾರೆ ಎಂದು ಆರೋಪಿಸಿದರು.

ಎಲ್ಲ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ತನಗೇ ಬೇಕು. ಎಲ್ಲ ಯೋಜನೆಗಳು ತನ್ನ ಮೂಗಿನಡಿಯಲ್ಲಿಯೇ ನಡೆಯಬೇಕು, ಎಲ್ಲ ಹುದ್ದೆ, ನಿದೇರ್ಶಕ ಸ್ಥಾನ ಎಲ್ಲವೂ ತನಗೆ ಬೇಕು ಎನ್ನುವ ಅವರು ತಾನು, ತನ್ನ ಕುಟುಂಬ, ತನ್ನ ಮಗ ಇವರಷ್ಟೇ ಉದ್ಧಾರವಾಗಬೇಕೆಂಬ ಚಿಂತನೆ ಅವರದ್ದು. ನಾವು ಮಾತ್ರ ಅವರ ಪಲ್ಲಕ್ಕಿ ಹೊರಬೇಕು ಎಂಬ ಮನಸ್ಥಿತಿ ಇದ್ದು. ಇದನ್ನು ನೋಡಿಯೇ ನಾವು ಅವರ ಸಂಗವನ್ನೇ ಬಿಡುತ್ತಿದ್ದೇವೆ ಎಂದರು.

ಘೋಟ್ನೇಕರ ಅವರಿಗೆ ಯಾರನ್ನೂ ಬೆಳೆಸುವ ವಿಚಾರ ತಲೆಯಲ್ಲಿಯೇ ಇಲ್ಲ. ಇದು ಅವರೊಂದಿಗೆ ಇದ್ದವರಿಗೆ ಅರಿವಾಗಿದೆ, ಮುಂದಿನ ವಾರ ನಡೆಯುವ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ದೇಶಪಾಂಡೆಯವರ ನಾಯಕತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದರು.

ಯಾರೂ ಮಿತ್ರರಲ್ಲ, ಶತ್ರುಗಳೂ ಅಲ್ಲ:

ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ಮಾತನಾಡಿ ಘೋಟ್ನೇಕರ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾರನ್ನೂ ಬೆಳೆಸಲಿಲ್ಲ, ಎಲ್ಲರನ್ನು ತುಳಿಯುವ, ಶೋಷಿಸುವ ರಾಜಕಾರಣ ಮಾಡಿದರು. ಘೋಟ್ನೇಕರ ಅವರನ್ನು ಹೊರತು ಪಡಿಸಿ ಯಾರೂ ಬೇಕಾದರೂ ಬರಲಿ, ಅವರನ್ನು ಪಕ್ಷಕ್ಕೆ ಸೇಪಡೆ ಮಾಡಿಕೊಳ್ಳುತ್ತವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ರಾಜಕೀಯದಲ್ಲಿ ಯಾರೂ ಮಿತ್ರರು ಅಲ್ಲ ಶತ್ರುಗಳು ಅಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವರೆಲ್ಲರೂ ನಮ್ಮ ಪಕ್ಷದವರೇ. ಬ್ಯಾಂಕಿನಲ್ಲಿ, ಸೊಸೈಟಿಗಳಲ್ಲಿ ಪಡೆದ ಸಾಲ, ಇತರೇ ಆರ್ಥಿಕ ಕಾರಣಗಳಿಂದ ಅವರೆಲ್ಲರೂ ಘೋಟ್ನೇಕರ ಭಯದಿಂದ ಅವರ ಬಳಿಯಿದ್ದರಷ್ಟೇ. ಅವರೆಲ್ಲರೂ ಈಗ ಭಯಮುಕ್ತರಾಗಿ ಅಕ್ಟೋಬರ್ 28ರಂದು ದೇಶಪಾಂಡೆಯವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಅನಿಲ ಚೌಹಾಣ್‌, ಸದಸ್ಯ ನವೀನ ಕಾಟಕರ, ಮುಖಂಡರಾದ ಉಮೇಶ ಬೋಳಶೆಟ್ಟಿ, ರಾಮಕೃಷ್ಣ ಗುನಗಾ, ರೆಹೆಮಾನ ಜಂಬೂವಾಲೆ, ದೇಮಾಣಿ ಶಿರೋಜಿ, ಬಾಬು ಮಿರಾಶಿ, ಎಸ್.ಜಿ. ಮಾನಗೇ, ಅಣ್ಣಪ್ಪ ಹಾಗೂ ಇತರರು ಇದ್ದರು.

Share this article