ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರು ಎರಡು ಹಂತಗಳಲ್ಲಿ ಶುದ್ಧೀಕರಿಸಿ ಅವಳಿ ಜಿಲ್ಲೆಗಳಲ್ಲಿ ಕೆರೆಗಳಿಗೆ ಹರಿಸಲಾಗುತ್ತಿದ್ದು, ಇದರ ಪ್ರಮುಖ ಉದ್ದೇಶ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಾಗಿದೆ. ಆದರೆ ಮೂರನೇ ಹಂತ ಶುದ್ಧೀಕರಣ ದುಬಾರಿಯಾಗಲಿದ್ದು, ಇದು ಎಲ್ಲಾ ಸರ್ಕಾರಗಳಿಗೂ ತಿಳಿಸಿದೆಯೆಂದು ಡಾ.ಎಂ.ಸಿ. ಸುಧಾಕರ್ ಹೇಳಿದರು.ತಾಲೂಕಿನ ವೀರಪಲ್ಲಿ, ನಲ್ಲರಾಳ್ಳಪಲ್ಲಿ, ಬೂಪನಹಳ್ಳಿ, ಮಿಂಡಗಲ್, ದಿಗುವಗೊಲ್ಲಹಳ್ಳಿ, ವೇಗಲಹಳ್ಳಿ, ಬ್ರಾಹ್ಮಣಹಳ್ಳಿ, ಏಟಿಗಡ್ಡಗೊಲ್ಲಹಳ್ಳಿ, ಯಸಗಲಹಳ್ಳಿ, ಕೋನಪಲ್ಲಿ, ಕರಿಯಪಲ್ಲಿ, ಕಾಚನಹಳ್ಳಿ ಸೇರಿ 12 ಸ್ಥಳಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣದ ಸ್ಥಳ ಪರಿಶೀಲನೆ ಮತ್ತು ಕಾಮಗಾರಿಗೆ ಪೂಜೆ ಭೂಮಿ ನೆರವೇರಿಸಿ ಮಾತನಾಡಿ, ನಾನು ಮಾಡುತ್ತಿರುವ ಹಲವು ಅಭಿವೃದ್ಧಿ ಕೆಲಸಗಳಲ್ಲಿ ಅತಿಹೆಚ್ಚು ತೃಪ್ತಿಯನ್ನು ಮತ್ತು ಸಂತೋಷವನ್ನು ನೀಡುತ್ತಿರುವ ಕಾಮಗಾರಿ ಈ ಚೆಕ್ ಡ್ಯಾಂಗಳ ನಿರ್ಮಾಣವಾಗಿದೆ. ಒಂದೊಮ್ಮೆ ಭರಪೂರ ಮಳೆ ಬಂದು ನೀರು ನಿಲುಗಡೆಗೊಂಡರೆ ಈ ಭಾಗದ ರೈತರ ಜೀವನ ಹಸನಾಗುತ್ತದೆಂಬ ಉದ್ದೇಶದಿಂದ 140 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಂಡಿದ್ದು ಇದರಲ್ಲಿ ಈಗಾಗಲೇ 89 ಕೋಟಿ ಹಣಕಾಸು ಬಿಡುಗಡೆಯಾಗಿದೆ. ಉಳಿದ 51 ಕೋಟಿ ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದರು.
ಹೋರಾಟ ಮಾಡುವವರಲ್ಲಿ ಕೆಲವರಿಗೆ ಇದರ ಮೂಲ ಉದ್ದೇಶ ಕೊರತೆ ಮತ್ತು ಕೆಲವರಿಗೆ ರಾಜಕೀಯ ಪ್ರಲೋಪಗಳಿಗೆ ಒಳಗಾಗಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಾರೆ. ಇದರಲ್ಲಿ ವಾಸ್ತುಸ್ಥಿತಿಯನ್ನು ತಿಳಿದು ಹೋರಾಟ ಮಾಡಿದರೆ ಒಳಿತು. ಅವಳಿ ಜಿಲ್ಲೆಯಲ್ಲಿ ಯಾವುದೇ ನದಿಗಳು ಇಲ್ಲ. ಕೆಲವೊಂದು ನದಿಗಳು ಬಹಳ ಹಿಂದೆಯೆ ತಮ್ಮ ನೈಜ ಹರಿವನ್ನು ನಿಲ್ಲಿಸಿದ್ದು, ಒಂದೊಮ್ಮೆ ಈ ಭಾಗದಲ್ಲಿ ಹರಿಯುವ ಪಾಪಾಗ್ನಿ ಮತ್ತು ಕುಶಾವತಿ ಕಾಲುವೆಗಳಲ್ಲಿ 500 ಮೀಟರ್ಗೆ ಒಂದರಂತೆ ಚೆಕ್ಡ್ಯಾಂ ನಿರ್ಮಾಣ ಮಾಡುತ್ತಿದ್ದು, ಒಂದೊಮ್ಮೆ ಮಳೆ ಸಮರ್ಪಕವಾಗಿ ಸುರಿದರೆ ಇದರಿಂದ ಒಂದು ಚೆಕ್ ಡ್ಯಾಂ ಮತ್ತೊಂದು ಚೆಕ್ಡ್ಯಾಂಗೆ ಸಂಪರ್ಕವನ್ನು ಹೊಂದಿದ್ದು ಎತ್ತೇಚ್ಛ ನೀರು ನಿಲುಗಡೆಗೊಂಡು ಅಂತರ್ಜಲ ಮರುಪೂರಣಗೊಂಡು ರೈತರ ಕೊಳವೆಬಾವಿಗಳಿಗೆ ನೀರು ಲಭಿಸುತ್ತದೆ, ಇದರಿಂದ ವಿವಿಧ ಬೇಳೆಗಳನ್ನು ಬೆಳೆದು ಉತ್ತಮ ಆದಾಯವನ್ನು ಗಳಿಸಬಹುದಾಗಿದೆಯೆಂದರು.ಶಾಸಕನಾಗಿ ಮತ್ತು ಸಚಿವನಾಗಿ ನನಗೆ ಮತ ನೀಡಿದ ಕ್ಷೇತ್ರಕ್ಕೆ ಯಾವುದಾದರೂ ಶಾಶ್ವತವಾಗಿ ನಿಲ್ಲುವ ಯೋಜನೆಯೇ ಈ ಚೆಕ್ ಡ್ಯಾಂಗಳ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವುದರಲ್ಲಿ ಅದರಲ್ಲೂ ಬರಗಾಲಕ್ಕೆ ತುತ್ತಾಗಿರುವ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯ ಮೂಲಕ ರೈತರ ಮುಖದಲ್ಲಿ ಮಂದಹಾಸ ಕಾಣುವ ವಾತಾವರಣವನ್ನು ಕಲ್ಪಿಸಿರುವ ಚೆಕ್ಡ್ಯಾಂಗಳ ನಿರ್ಮಾಣವು ರೈತರಿಗೆ ವರದಾನವಾಗಲಿದೆ ಎಂದರು.
ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಮತ್ತು ಸಣ್ಣ ನೀರಾವರಿ ಇಲಾಖೆಯ ದೊಂದಿಗೆ ಇಷ್ಟೆಲ್ಲ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿದ್ದು, ಇದರಿಂದ ಜಲಸಂಪನ್ಮೂಲ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ರಿಗೆ ಮತ್ತು ಇತರೇ ಸಚಿವರಿಗೆ ನನ್ನ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಕಾಮಗಾರಿಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಗುಣಮಟ್ಟದೊಂದಿಗೆ ಮತ್ತು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಗಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜೇಂದರ್, ತಾ.ಪಂ. ಇಒ ಎಸ್.ಆನಂದ್, ಮುಖಂಡರಾದ ಸ್ಕೂಲ್ ಸುಬ್ಬಾರೆಡ್ಡಿ, ಮಾದಮಂಗಲ ಚಂದ್ರಪ್ಪ, ರಾಗುಟ್ಟಹಳ್ಳಿ, ರಘುನಾಥ್ರೆಡ್ಡಿ ಇದ್ದರು.