ಕನ್ನಡಪ್ರಭ ವಾರ್ತೆ ಕಲಬುರಗಿ
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣದಲ್ಲಿ ಕುಟುಂಬದ ಅವಲಂಬಿತ ಸದಸ್ಯರಿಗೆ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು-1995 ರನ್ವಯ ಜಿಲ್ಲಾ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ದೌರ್ಜನ್ಯ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಪ್ರಕರಣದಲ್ಲಿ ಉದ್ಯೋಗಕ್ಕೆ ಬಾಕಿ ಇರುವ ಕಡತಗಳನ್ನು ಒಂದು ವಾರದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸಕ್ತ ಸಾಲಿನಲ್ಲಿ ಪರಿಹಾರಕ್ಕೆ ಅನುದಾನ ಅವಶ್ಯಕತೆ ಇದ್ದಲ್ಲಿ ತಮಗೆ ತಿಳಿಸಿದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡಿ ಅನುದಾನ ತರಿಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರೀತಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಕಮಲಾಪೂರ ತಾಲೂಕಿನ ಸ್ವಂತ ಗ್ರಾಮದ ಸರ್ವೇ ನಂ.323 ಭೋವಿ ಜನಾಂಗದವರು ವಾಸಿಸುವ ಜಮೀನಿನ ಸರ್ವೇ ಕುರಿತು ಕಮಲಾಪೂರ ತಹಸೀಲ್ದಾರರಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದುಕೊಂಡರು .
ಭೋವಿ ಜನಾಂಗದವರು ತಮ್ಮ ಮನೆಗಳು ವಾಸಿಸಲು ಯಾವುದೇ ತೊಂದರೆ ನೀಡುತ್ತಿಲ್ಲ ಸದರಿ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿ ಭೋವಿ ಜನಾಂಗದವರಿಂದ ಅರ್ಜಿಯನ್ನು ಪಡೆದು ಸಕ್ರಮಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕಮಲಾಪೂರ ತಹಸೀಲ್ದಾರ್ ಮಹ್ಮದ್ ಮೂಸಿನ್ ಸಭೆಯ ಗಮನಕ್ಕೆ ತಂದರು.7 ದಿನಗಳ ಒಳಗೆ ಈ ಸಂಬಂಧ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿ ಕಮಲಾಪುರ ತಹಸೀಲ್ದಾರರವರಿಗೆ ಸೂಚಿಸಿದರು. ಸಮಿತಿ ಸದಸ್ಯ ಚನ್ನಪ್ಪ ಸುರಪೂರಕರ ಮಾತನಾಡಿ, ಎಸ್.ಸಿ. ಮತ್ತು ಎಸ್.ಟಿ. ಜನಾಂದವರಿಗೆ ಸಿಗುವ ಸೌಲಭ್ಯಗಳು ಮತ್ತು ಅಸ್ಪಶ್ಯತೆ ನಿವಾರಣೆಗೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ವಿವರ ನೀಡಬೇಕೆಂದರು.
ಅನುಸೂಚಿತ ಜಾತಿ ಅನುಸೂಚಿತ ಪಂಗಡ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಗಳು ನೀಡಿದ ಪರಿಹಾರ ಕುರಿತು ಮಾಹಿತಿ ಪಡೆದುಕೊಂಡರು. ಈ ಕಾಯ್ದಿ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 253 ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಆರೋಪಿಯ ಶಿಕ್ಷೆಯಾಗಿದ್ದು, ಒಟ್ಟು 6 ಪ್ರಕರಣಗಳು ತನಿಖಾ ಹಂತದಲ್ಲಿ ಇವೆ ಮತ್ತು ಒಟ್ಟು 7 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ. ಕಲಬುರಗಿ ದಕ್ಷಿಣ ಉಪವಿಭಾಗದಲ್ಲಿ ಎರಡು ಪ್ರಕರಣಗಳು ದಾಖಲಾಗಿ ತನಿಖಾ ಹಂತದಲ್ಲಿ ಇವೆ. ಕಲಬುರಗಿ ಸಬ್ ಅರ್ಬನ್ ಉಪ ವಿಭಾಗದಲ್ಲಿ 4 ಪ್ರಕರಣ ದಾಖಲಾಗಿದ್ದು ಪ್ರಕರಣಗಳು ತನಿಖಾ ಹಂತದಲ್ಲಿವೆ. ಪರಿಹಾರ ವಿಚಾರದಲ್ಲಿ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿಗೆ ಸೂಚನೆ ನೀಡಿದರು..ಜಿಪಂ ಸಿಇಒ ಭಂವರ ಸಿಂಗ್ ಮೀನಾ, ಸಮಾಜ ಕಲ್ಯಾಣ ಇಲಾಖೆ, ಜಂಟಿ ನಿರ್ದೇಶಕಿ ಪ್ರೀತಿ, ಡಿಯುಡಿಸಿ. ಯೋಜನಾ ನಿರ್ದೇಶಕ ಮುನ್ನವರ ದೌಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಪೋಲಿಸ್ ಇಲಾಖೆ ಅಧಿಕಾರಿಗಳು, ಸಮಿತಿ ಸದಸ್ಯರು ಹಾಜರಿದ್ದರು.