ಎಸ್‌ಬಿಆರ್‌ ಸ್ಕಾಲರ್‌ಶಿಪ್‌, ಕಾಲೇಜು ಪ್ರವೇಶಕ್ಕೆ ಸ್ಪರ್ಧೆ

KannadaprabhaNewsNetwork | Updated : Feb 06 2024, 01:35 PM IST

ಸಾರಾಂಶ

ಈ ಪರೀಕ್ಷೆಯಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹೆಸರಲ್ಲಿ ಸ್ಕಾಲರ್‌ಶಿಪ್‌ ರೂಪದಲ್ಲಿ 2.5 ಕೋಟಿ ರುಪಾಯಿಗಳನ್ನು ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿಯ ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾವಿರಾರು ಮಕ್ಕಳು ಪಾಲ್ಗೊಂಡು ಗಮನ ಸೆಳೆದರು. ಈ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 2500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಈ ಪರೀಕ್ಷೆಯಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹೆಸರಲ್ಲಿ ಸ್ಕಾಲರ್‌ಶಿಪ್‌ ರೂಪದಲ್ಲಿ 2.5 ಕೋಟಿ ರುಪಾಯಿಗಳನ್ನು ನೀಡಲಾಗುತ್ತಿದೆ.

ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎಸ್.ಬಿ.ಆರ್. ಪಿಯು ಕಾಲೇಜು ಮತ್ತು ಎಸ್.ಬಿ.ಆರ್. ಪಬ್ಲಿಕ್ ಶಾಲೆಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. 10ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಪ್ರಶ್ನೆ-ಪತ್ರಿಕೆಯನ್ನು ಸಿದ್ಧಪಡಿಸಲಾಗಿತ್ತು. ಪ್ರಶ್ನೆ ಪತ್ರಿಕೆಯು 16 ವರ್ಷನ್‍ಗಳಿಂದ ಕೂಡಿದ್ದು, ಪಾರದರ್ಶಕವಾಗಿ ಪ್ರವೇಶ ಪರೀಕ್ಷೆ ನಡೆಸಲಾಯಿತು.

ಪಾಲಕರಿಗಾಗಿ ಎಸ್.ಬಿ.ಆರ್. ಮೈದಾನದಲ್ಲಿ ಪೆಂಡಾಲ್ ನಿರ್ಮಿಸಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜಿನ ಮುಖ್ಯ ಪ್ರವೇಶ ದ್ವಾರದಿಂದ ಪರೀಕ್ಷಾ ಕೋಠಡಿಯವರೆಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಹೆಲ್ಪ್‌ಡೆಸ್ಕ್‌ ವ್ಯವಸ್ಥೆ ಮಾಡಲಾಗಿತ್ತು. ಮುಂಚಿತವಾಗಿ ಆನ್‌ಲೈನ್‌ ರಿಜಿಸ್ಟ್ರೇಶನ್ ಮಾಡಿಸದೇ ಬಂದ ವಿದ್ಯಾರ್ಥಿಗಳಿಗೆ ಸ್ಪಾಟ್ ರೆಜಿಸ್ಟ್ರೇಶನ್ ವ್ಯವಸ್ಥೆ ಕೂಡಾ ಮಾಡಿಸಲಾಗಿತ್ತು.

ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್ ಸರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ ಜಿ. ಹೊಗಾಡೆಯವರ, ಗುರುವೃಂದದವರ ಹಾಗೂ ಎಲ್ಲ ಸಿಬ್ಬಂದಿ ವೃಂದದವರ ಒಗ್ಗಟ್ಟಿನಿಂದ ಇಂದಿನ ಪರೀಕ್ಷೆ ವ್ಯವಸ್ಥಿತವಾಗಿ ನಡೆಯಿತು. ಪ್ರವೇಶ ಪರೀಕ್ಷೆಯ ಫಲಿತಾಂಶವು ಫೆ.8ರಂದು ಸಂಜೆ 5ರ ನಂತರ ಪ್ರಕಟಸಲಾಗುತ್ತದೆ. ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

Share this article