ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಪರೀಕ್ಷೆ ನಡೆಸಿದರೆ ಅಕ್ರಮ ಗ್ಯಾರಂಟಿ ಎಂದು ನಿರ್ಧಾರಕ್ಕೆ ಬಂದಿರುವ ಕೆಲವು ಏಜನ್ಸಿಗಳು ಪರೀಕ್ಷಾ ಕೇಂದ್ರಗಳನ್ನು ಒಂದೊಂದೊಂದಾಗಿ ಕಲಬುರಗಿಯಿಂದ ರದ್ದು ಮಾಡಿ ಬೇರೆಡೆ ಶಿಫ್ಟ್ ಮಾಡುತ್ತಿವೆ.
ತಾನು ನಡೆಸಿದ ಪರೀಕ್ಷೆಗಳಲ್ಲಿ ಬ್ಲೂ ಟೂತ್ ಬಳಸಿ ನಡೆದ ಅಕ್ರಮದ ಬೆನ್ನ ಹಿಂದೆಯೇ ಕೆಇಎ ತಾನು ನಡೆಸಲು ಮುಂದಾಗಿರುವ ಅಧ್ಯಾಪಕರ ಹುದ್ದೆ ಪರೀಕ್ಷೆಗಳನ್ನು ಕಲಬುರಗಿ ಹಾಗೂ ವಿಜಯಪುರದಿಂದ ಬೆಂಗಳೂರು, ತುಮಕೂರಿಗೆ ಬದಲಿಸಿದೆ.ಪಿಎಸ್ಐ ಮರು ಪರೀಕ್ಷೆ ಕೂಡ ಬೆಂಗಳೂರಿನಲ್ಲೆ ನಡೆಸೋದಕ್ಕೆ ಮುಂದಾದ ಬೆನ್ನಲ್ಲೆ, ಇದೀಗ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪರೀಕ್ಷೆಗೆ ಕಲಬುರಗಿ ಸೆಂಟರ್ ರದ್ದು ಮಾಡಿ ಬೆಂಗಳೂರಿಗೆ ಶಿಫ್ಟ್ ಮಾಡಿದೆ.
ಡಿ.31ರಂದು ನಡೆಯುವ ಪರೀಕ್ಷೆ ಜ.13ಕ್ಕೆ ಮುಂದೂಡಿ ಪರೀಕ್ಷಾ ಕೇಂದ್ರ ಬದಲು ಮಾಡಿ ಕೆಇಎ ಆದೇಶ ಹೊರಡಿಸಿದೆ. ಕೆ–ಸೆಟ್ಗೆ ಕಲ್ಯಾಣ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೂ ಕೂಡಾ ಪರೀಕ್ಷಾ ಅಕ್ರಮಗಳು ನಡೆಯುವ ಶಂಕೆಯಿಂದಾಗಿ ಪರೀಕ್ಷಾ ಕೇಂದ್ರವನ್ನೇ ಬೆಂಗಳೂರಿಗೆ ಸ್ಥಳಾಂತರ ಮಾಡಿ ಗಮನ ಸೆಳೆದಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಕಲಬುರಗಿಯಲ್ಲಿ ಆಗೋದೇ ಇಲ್ಲವೆಂಬ ತೀರ್ಮಾನಕ್ಕೆ ಏಜನ್ಸಿಗಳು ಬಂದಿವೆ ಎಂಬ ಮಾತಿಗೆ ಕೆಇಎ ನಿರ್ಧಾರ ತುಂಬಾ ಚರ್ಚೆಗೆ ಗ್ರಾಸವಾಗಿದೆ.ಸರಣಿ ಅಕ್ರಮಗಳಿಂದ ಅಪಖ್ಯಾತಿ ಪಡೆದ ಕಲಬುರಗಿಯಿಂದ ನೇಮಕಾತಿ ಪರೀಕ್ಷೆಗಳು ಕೇಂದ್ರಗಳು ಸ್ಥಳತಾರ ಆಗುತ್ತಿರೋದು ಕಲಬುರಗಿ ಬಗ್ಗೆ ಎಲ್ಲರೂ ಗಮನಿಸುವಂತೆ ಮಾಡಿದೆ.