ಮೊಬೈಲ್ ಮೂಲಕವೇ ಅಕ್ರಮಗಳ ಬಗ್ಗೆ ದೂರು ಸಲ್ಲಿಸಿ:ವೈಶಾಲಿ

KannadaprabhaNewsNetwork |  
Published : Mar 24, 2024, 01:34 AM IST
20ಜಿಡಿಜಿ13 | Kannada Prabha

ಸಾರಾಂಶ

ಮತದಾನದ ದಿನ ವಾಹನಗಳಲ್ಲಿ ಮತದಾರರನ್ನು ಕರೆತಂದು ಪ್ರಲೋಭನೆಗೊಳಿಸುವುದು, ಮತ ಹಾಕುವಂತೆ ಬೆದರಿಸುವುದು ಹಾಗೂ ನೀತಿ ಸಂಹಿತೆ ಪ್ರಕರಣ ಕಂಡು ಬಂದರೆ ಸಿವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಲು ಅವಕಾಶ

ಗದಗ: ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆ ಹಾಗೂ ತಡೆಗೆ ಸೀ ವಿಜಲ್ ಆ್ಯಪ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ. ಎಂ.ಎಲ್‌ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆಯ ಸಂದರ್ಭಗಳಲ್ಲಿ ಸ್ಪರ್ಧಿಸಿರುವ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಹಾಕುವಂತೆ ಆಮಿಷ ಒಡ್ಡಿದರೆ, ಹಣ, ಉಡುಗೊರೆ, ಕೂಪನ್‌ ವಿತರಣೆ, ಮದ್ಯದ ಆಸೆ ಮತ್ತು ಆಮಿಷೆ ಒಡ್ಡಿದರೆ ಮತದಾರರು ಸಿ ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು. ಜತೆಗೆ ಮತದಾರರಿಗೆ ಅನುಮತಿ ಇಲ್ಲದಿದ್ದರೂ ಪೊಸ್ಟರ್ ಮತ್ತು ಬ್ಯಾನರ್‌ಗಳನ್ನು ಅಂಟಿಸುವುದು, ಬಂದೂಕು ತೋರಿಸಿ ಬೆದರಿಕೆ ಹಾಕುವುದು, ಆಸ್ತಿ ವಿರೂಪಗೊಳಿಸುವುದು, ಧಾರ್ಮಿಕ ಅಥವಾ ಕೋಮು ಪ್ರಚೋದಿತ ಭಾಷಣ ಮಾಡಿದರೂ ಆ್ಯಪ್ ಮೂಲಕ ದೂರು ನೀಡಬಹುದು.

ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧವಿದ್ದರೂ ಪ್ರಚಾರ ಮಾಡುವುದು, ಮತದಾನದ ದಿನ ವಾಹನಗಳಲ್ಲಿ ಮತದಾರರನ್ನು ಕರೆತಂದು ಪ್ರಲೋಭನೆಗೊಳಿಸುವುದು, ಮತ ಹಾಕುವಂತೆ ಬೆದರಿಸುವುದು ಹಾಗೂ ನೀತಿ ಸಂಹಿತೆ ಪ್ರಕರಣ ಕಂಡು ಬಂದರೆ ಸಿವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಲು ಅವಕಾಶವಿದೆ. ಸಿವಿಜಲ್ ಮೂಲಕ ಸಲ್ಲಿಕೆಯಾಗುವ ದೂರುಗಳಿಂದ ಘಟನೆ ನಡೆದ ಸ್ಥಳದ ಮಾಹಿತಿ ಲಭ್ಯವಾಗುವುದರಿಂದ ಪ್ರಕರಣ ನಡೆದ ಸ್ಥಳಕ್ಕೆ ಅಧಿಕಾರಿಗಳು ತಲುಪಬಹುದು.

ಸಾರ್ವಜನಿಕರು ಪ್ಲೇ ಸ್ಟೋರ್‌ನಲ್ಲಿ ಸಿವಿಜಿಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಬಳಸಬಹುದು. ಅಕ್ರಮಗಳ ಕುರಿತು ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು. ಸಿವಿಜಲ್ ನಲ್ಲಿ ದಾಖಲಾಗುವ ದೂರು ಪರಿಶೀಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಗಳಿದ್ದು ಮತದಾನ ಮುಕ್ತಾಯವಾಗುವರೆಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರು ದಾಖಲಾದ ಕೂಡಲೇ ಪರಿಶೀಲಿಸಿ ದೂರು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ರವಾನಿಸಿ ದೂರಿನ ಕುರಿತು ತುರ್ತು ಕ್ರಮ ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಗರಿಷ್ಠ 100 ನಿಮಿಷಗಳ ಒಳಗೆ ದೂರು ಇತ್ಯರ್ಥಪಡಿಸಲಾಗುತ್ತದೆ.

ಸಾರ್ವಜನಿಕರು ಸಿ ವಿಜಿಲ್ ಆ್ಯಪ್ ಮಾತ್ರವಲ್ಲದೆ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಕರೆಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು. ಈ ಮೂಲಕ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಸಹಾಯವಾಣಿ ಸ್ಥಾಪನೆ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಜಿಲ್ಲೆಯಲ್ಲಿ ಅಹವಾಲು ಅಥವಾ ದೂರುಗಳನ್ನು ಸಲ್ಲಿಸಲು ಕಂಟ್ರೋಲ್ ರೂಂ ಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಕೆಳಕಂಡ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ (ಡಿಇಓ ಆಫೀಸ್) 08372-239177, 08372-1950, ಜಿಲ್ಲಾ ಪೊಲೀಸ್‌ ಕಂಟ್ರೋಲ್ ರೂಂ ಸಂಖ್ಯೆ 08372-238300, 9480804400, ಜಿಲ್ಲಾ ಅಬಕಾರಿ ಇಲಾಖೆಯ ಕಂಟ್ರೋಲ್ ರೂಂ ಸಂಖ್ಯೆ 08372-221129, 18004252329, ಜಿಲ್ಲಾ ವಾಣಿಜ್ಯ ತೆರಿಗೆ ಕಂಟ್ರೋಲ್ ರೂಂ ಸಂಖ್ಯೆ 9008937878, 08372-238307 ಈ ಮೇಲ್ಕಂಡ ಕಂಟ್ರೋಲ್ ರೂಂ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಂ.ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ