ಇಎಸ್‌ಐಸಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಬಿ.ಗೋಪಿನಾಥ್ ಮನವಿ

KannadaprabhaNewsNetwork |  
Published : Nov 20, 2025, 12:15 AM IST
ಪೋಟೋ: 19ಎಸ್‌ಎಂಜಿಕೆಪಿ01ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಭೇಟಿ ನೀಡಿದ್ದ ಹುಬ್ಬಳ್ಳಿಯ ಇಎಸ್‌ಐಸಿ ಉಪವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ರಘುರಾಮನ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ರಾಗಿಗುಡ್ಡದಲ್ಲಿ 100 ಹಾಸಿಗೆಗಳ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆಸ್ಪತ್ರೆ ಮತ್ತು 32 ಸಿಬ್ಬಂದಿ ವಸತಿ ಗೃಹಗಳ ಕಾಮಗಾರಿಯನ್ನು 2026ರ ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಗಿಗುಡ್ಡದಲ್ಲಿ 100 ಹಾಸಿಗೆಗಳ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆಸ್ಪತ್ರೆ ಮತ್ತು 32 ಸಿಬ್ಬಂದಿ ವಸತಿ ಗೃಹಗಳ ಕಾಮಗಾರಿಯನ್ನು 2026ರ ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮನವಿ ಮಾಡಿದರು.

ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಭೇಟಿ ನೀಡಿದ್ದ ಹುಬ್ಬಳ್ಳಿಯ ಇಎಸ್‌ಐಸಿ ಉಪವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ರಘುರಾಮನ್ ಅವರಿಗೆ ಸನ್ಮಾನಿಸಿ ಮಾತನಾಡಿ,

ಎಸ್‌ಪಿಆರ್‌ಇಇ 2025 ಸ್ವಯಂ ನೋಂದಣಿ ಯೋಜನೆಯ ಪ್ರಯೋಜನವನ್ನು ಸಂಬಂಧಪಟ್ಟ ಎಲ್ಲರೂ ಪಡೆಯಬೇಕು. ಇಎಸ್‌ಐ ಕಾಯ್ದೆಯಡಿ ದಂಡವಿಲ್ಲದೆ ಸ್ವಯಂ ನೋಂದಣಿ ಯೋಜನೆ ಬಗ್ಗೆ ಮಾಹಿತಿ ಹೊಂದಬೇಕು ಎಂದು ತಿಳಿಸಿದರು.

ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿ ವೀಕ್ಷಣೆ ಹಾಗೂ ಇಎಸ್‌ಐಸಿ ಅನುಮೋದಿಸಿದ ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸಂಯೋಜಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಜಂಟಿ ನಿರ್ದೇಶಕ ರಘುರಾಮನ್ ಮಾತನಾಡಿ, ಎಸ್‌ಪಿಆರ್‌ಇಇ 2025 ಯೋಜನೆ ಇಎಸ್‌ಐ ಕಾಯ್ದೆಯಡಿಯಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ವಿಶೇಷ ಉಪಕ್ರಮವಾಗಿದೆ. ಈ ಯೋಜನೆಯು ಜುಲೈ 1 ರಿಂದ ಡಿಸೆಂಬರ್ 31ರವರೆಗೆ ಸಕ್ರಿಯವಾಗಿರುತ್ತದೆ ಎಂದು ಹೇಳಿದರು.

ನೋಂದಾಯಿಸದ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ, ಗುತ್ತಿಗೆ ಮತ್ತು ತಾತ್ಕಾಲಿಕ ಕೆಲಸಗಾರರು ಸೇರಿದಂತೆ ತಪಾಸಣೆ ಅಥವಾ ಹಿಂದಿನ ಬಾಕಿಗಳ ಬೇಡಿಕೆಗಳನ್ನು ಎದುರಿಸದೆ ನೋಂದಾಯಿಸಿಕೊಳ್ಳಲು ಒಂದು ಬಾರಿ ಅವಕಾಶ ಒದಗಿಸುತ್ತದೆ. ಈ ಯೋಜನೆಯು ಹಿಂದಿನಿಂದ ಬರುವ ದಂಡಗಳ ಭಯವನ್ನು ತೆಗೆದುಹಾಕುವ ಮೂಲಕ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮೂಲಕ ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುತ್ತದೆ. ನಿರ್ದಿಷ್ಟ ಸಮಯದೊಳಗೆ ನೋಂದಣಿ ಮಾಡದಿದ್ದರೆ ಕಾನೂನು ಕ್ರಮ ಮತ್ತು ಹಳೆಯ ಬಾಕಿಗಳ ಬೇಡಿಕೆಗೆ ಕಾರಣವಾಗಬಹುದು ಎಂದು ತಿಳಿಸಿದರು.

ಸಾಗರ ರಸ್ತೆ ಕೈಗಾರಿಕಾ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ ಮಾತನಾಡಿ, ಯೋಜನೆ ಬಗ್ಗೆ ಹೆಚ್ಚು ಪ್ರಚಾರ ನಡೆಸಬೇಕು. ದಂಡವಿಲ್ಲದೆ ನೊಂದಣಿಗೆ 2026ರ ಮಾರ್ಚ್ 31ರವರೆಗೆ ಅವಕಾಶ ನೀಡಬೇಕು ಎಂದರು.

ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಇಎಸ್‌ಐ ಔಷಧಾಲಯ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಅಡಕೆ ಹಾಳೆ ತಯಾರಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಇಎಸ್‌ಐ ನೋಂದಣಿಯಲ್ಲಿನ ಸಮಸ್ಯೆಗಳ ಪರಿಹಾರದ ಬಗ್ಗೆ ಗಮನ ಸೆಳೆದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕ ಡಾ. ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ಪ್ರದೀಪ್ ವಿ ಯಲಿ, ಇಎಸ್‌ಐಸಿ ಬ್ರಾಂಚ್ ಮ್ಯಾನೇಜರ್ ಆಶಾದೇವಿ ಹಾಗೂ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ
ಸಂಪುಟ ಸಭೆಯಲ್ಲಿ ಚರ್ಚಿಸಿ ರಿತ್ತಿ ಕುಟುಂಬಕ್ಕೆ ನೆರವು: ಸಚಿವ ಎಚ್.ಕೆ ಪಾಟೀಲ