ಬೇವುಕಲ್ಲು ಗ್ರಾಪಂನಲ್ಲಿ ಪಂಚತಂತ್ರ ೨.೦ ಸಂಪೂರ್ಣ ಅನುಷ್ಠಾನ

KannadaprabhaNewsNetwork | Published : Mar 20, 2025 1:20 AM

ಸಾರಾಂಶ

ಗ್ರಾಪಂನ ಎಲ್ಲಾ ಸಭೆಗಳ ನಡಾವಳಿ ಪಂಚತಂತ್ರ ೨.೦ದಲ್ಲಿ ಅಳವಡಿಸಿದ ಮಂಡ್ಯ ಜಿಲ್ಲೆಯ ಏಕೈಕ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಬೇವುಕಲ್ಲು ಗ್ರಾಮ ಪಂಚಾಯ್ತಿ ಪಾತ್ರವಾಗಿದೆ. ಕೆಲವೊಂದು ನ್ಯೂನತೆಗಳಿದ್ದ ಪಂಚತಂತ್ರ ೧.೦ ತಂತ್ರಾಂಶವನ್ನು ಬದಲಾವಣೆ ಮಾಡಿದ ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತರಲಾಗಿದೆ.

ಎಚ್.ಕೆ.ಅಶ್ವತ್ಥ್ ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮ ಪಂಚಾಯ್ತಿಯ ಎಲ್ಲಾ ಸಭೆಗಳ ನಡಾವಳಿಯನ್ನು ಪಂಚತಂತ್ರ ೨.೦ದಲ್ಲಿ ಅಳವಡಿಸಿದ ಜಿಲ್ಲೆಯ ಏಕೈಕ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಬೇವುಕಲ್ಲು ಗ್ರಾಮ ಪಂಚಾಯ್ತಿ ಪಾತ್ರವಾಗಿದೆ.

ಕೆಲವೊಂದು ನ್ಯೂನತೆಗಳಿದ್ದ ಪಂಚತಂತ್ರ ೧.೦ ತಂತ್ರಾಂಶವನ್ನು ಬದಲಾವಣೆ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎರಡು ವರ್ಷದ ಹಿಂದೆ ಪಂಚತಂತ್ರ ೨.೦ ಅನ್ನು ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತಂದಿತು.

ಪಂಚತಂತ್ರ ಕಾರ್ಯವೈಖರಿ:

ಕಳೆದ ಸಾಲಿನಿಂದ ಪ್ರಮಖ ಬದಲಾವಣೆಯು ಪಂಚತಂತ್ರ ೨.೦ದಲ್ಲಿ ಆರಂಭಗೊಂಡಿತು. ಗ್ರಾಮ ಪಂಚಾಯ್ತಿಯಲ್ಲಿ ವಾರ್ಡ್ ಸಭೆ, ಗ್ರಾಮ ಸಭೆ, ಸಾಮಾನ್ಯ ಸಭೆ, ವಿಶೇಷ ಸಭೆ, ಕೆಡಿಪಿ ಸಭೆ, ಹಣಕಾಸು,ಲೆಕ್ಕಪತ್ರ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆ, ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಹೀಗೆ ವಿವಿಧ ಸಭೆಗಳನ್ನು ನಡೆಸಲು ಪಂಚತಂತ್ರ ೨.೦ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಸಭೆಯ ನಡವಳಿಗಳನ್ನು ಕೈ ಬರಹದಲ್ಲಿ ದಾಖಲಿಸಲಾಗುತ್ತಿತ್ತು. ಸಾರ್ವಜನಿಕರು ತಾವು ನೀಡಿದ ಅರ್ಜಿಗಳಿಗೆ ಸಭೆಯಲ್ಲಿ ಏನು ತೀರ್ಮಾನವಾಗಿದೆ?, ನನ್ನ ಖಾತೆಯ ಅರ್ಜಿ ಏನಾಯಿತು?, ನಾನು ಎನ್‌ಓಸಿ ನೀಡಲು ನೀಡಿದ ಅರ್ಜಿ ಕಥೆ ಏನು?, ಲೈಸೆನ್ಸ್ ಅರ್ಜಿ ಏನಾಗಿದೆ? ಎಂದು ತಿಳಿದುಕೊಳ್ಳಲು ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ವಿಚಾರಿಸಬೇಕಿತ್ತು. ಇಲ್ಲವೇ, ಸದಸ್ಯರಿಂದ ಮಾಹಿತಿ ಪಡೆಯಬೇಕಿತ್ತು. ಇದೆಲ್ಲಕ್ಕೂ ಅಂತ್ಯ ಹಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂತ್ರತಂತ್ರ ೨.೦ದಲ್ಲಿಯೇ ನಡಾವಳಿಯನ್ನು ದಾಖಲಿಸಲು ಮೀಟಿಂಗ್ ಮ್ಯಾನೇಜ್‌ಮೆಂಟ್ ಎಂಬ ಮ್ಯಾಡುಲ್‌ನ್ನು ತಂತ್ರಾಂಶದಲ್ಲಿ ಸೇರಿಸಿದೆ.

ಅದರಂತೆ ಗ್ರಾಮ ಪಂಚಾಯ್ತಿಯಲ್ಲಿ ಸಭೆಗಳನ್ನು ಆಯೋಜನೆ ಮಾಡುವಾಗ ಪಂಚತಂತ್ರ ೨.೦ನ ಮೀಟಿಂಗ್ ಮ್ಯಾನೇಜ್‌ಮೆಂಟ್ ಮ್ಯಾಡುಲ್‌ನಲ್ಲಿಯೇ ಸಭೆ ಕರೆಯಬೇಕಿದೆ. ಸದಸ್ಯರಿಗೆ ಸಭೆಗೆ ನೀಡುವ ಸೂಚನಾ ಪತ್ರವೂ ಮ್ಯಾಡುಲ್‌ನಲ್ಲಿಯೇ ಸಿದ್ಧವಾಗುತ್ತದೆ. ಮುಂಬರುವ ಸಭೆಗಳ ಬಗ್ಗೆ ಮಾಹಿತಿಯೂ ತಂತ್ರಾಂಶದಲ್ಲಿ ಲಭ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಸಾರ್ವಜನಿಕನೂ ಗ್ರಾಮ ಪಂಚಾಯ್ತಿಯಲ್ಲಿ ಸಭೆಯು ಯಾವ ದಿನ ನೆಡೆಯಲಿದೆ ಎಂದು ತಿಳಿಯಬಹುದು.

ಇನ್ನು ಸಭೆಯು ನಡೆಯುವ ದಿನ ಯಾವ ಯಾವ ಸದಸ್ಯರು ಹಾಜರಿದ್ದರು, ಯಾರು ಗೈರಾಗಿದ್ದರು ಎಂಬ ಮಾಹಿತಿಯು ಸಿಗಲಿದೆ. ನಿಗದಿತ ಕೋರಂ ಇಲ್ಲದೇ ಇದ್ದಲ್ಲಿ ಸಭೆಯನ್ನು ಆರಂಭ ಮಾಡಲು ಸಾಧ್ಯವಾಗುವುದಿಲ್ಲ. ಸಭೆ ಆರಂಭವಾದ ಮೇಲೆ ನಿಗದಿಪಡಿಸಿದ ಅಜೆಂಡಾಗಳಂತೆ ಚರ್ಚೆ ಆರಂಭವಾಗಬೇಕು. ಚರ್ಚೆಯ ವಿಷಯವನ್ನು ದಾಖಲಿಸುತ್ತಾ ಹೋಗಬೇಕು, ವಿಷಯಕ್ಕೆ ಸದಸ್ಯರ ಸಮ್ಮತಿ ಅಥವಾ ಅಸಮ್ಮತಿ ಪಡೆದು ಒಂದು ಅಜೆಂಡಾದಿಂದ ಮುಂದಿನ ಅಜೆಂಡಾಕ್ಕೆ ಚರ್ಚೆಗೆ ಹೋಗಬೇಕು. ಹೀಗೆ ಇಡೀ ಸಭೆಯ ಎಲ್ಲಾ ಅಜೆಂಡಾಗಳು ಮುಕ್ತಾಯವಾದ ಮೇಲೆ ಸಭೆಯಲ್ಲಿ ಹಾಜರಿರುವ ಸದಸ್ಯರ ಹೆಬ್ಬೆರಳಿನ ಗುರುತನ್ನು ಪಡೆದು ನಂತರ ಸಭೆ ಮುಕ್ತಾಯಗೊಳಿಸಬೇಕು.

ಕೊನೆಯಲ್ಲಿ ಅಧ್ಯಕ್ಷರ ಪಂಚತಂತ್ರ ಲಾಗೀನ್ ನಲ್ಲಿ ಡಿಜಿಟಲ್ ಸಹಿಯನ್ನು ದಾಖಲಿಸಿದ ಕ್ಷಣ ಮಾತ್ರದಲ್ಲಿ ಇಡೀ ಸಭೆಯ ನಡಾವಳಿಯು ಎಲ್ಲಾ ವಿವರಗಳೊಂದಿಗೆ ಪಂಚಪಂತ್ರ ೨.೦ ತಂತ್ರಾಂಶದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

ಇದರಿಂದ ಅರ್ಜಿ ನೀಡುವ ಸಾರ್ವಜನಿಕ ಗ್ರಾಮ ಪಂಚಾಯ್ತಿ ಮೆಟ್ಟಿಲನ್ನು ಏರದೆಯೇ ತನ್ನ ಅರ್ಜಿಯ ಬಗ್ಗೆ ಏನು ತೀರ್ಮಾನವಾಗಿದೆ ಎಂದು ತಿಳಿಯಬಹುದು. ಅಷ್ಟೇ ಅಲ್ಲದೇ, ಗ್ರಾಪಂ ನಿಯಮಾನುಸಾರ ನಡಾವಳಿ ದಾಖಲಿಸದಿದ್ದರೆ ವ್ಯಕ್ತಿಯು ಯಾರಿಗೆ ಮನವಿ ಸಲ್ಲಿಸಬೇಕೆಂದು ನಡಾವಳಿಯ ಕೊನೆಯಲ್ಲಿ ಮಾಹಿತಿಯು ಕೂಡ ಲಭ್ಯವಾಗುತ್ತದೆ.

ಬೇವುಕಲ್ಲು ಗ್ರಾಪಂ ಪ್ರಸ್ತುತ ಸಾಲಿನಲ್ಲಿ ಒಟ್ಟು ೨೮ ಸಭೆಗಳನ್ನು ಪಂಚತಂತ್ರ ೨.೦ದಲ್ಲಿ ವಿವರವಾಗಿ ದಾಖಲಿಸಿದೆ. ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಕೈಗೆಟುಕುವಂತೆ ಮಾಡಿದೆ.ಮೀಟಿಂಗ್ ಮ್ಯಾಡ್ಯೂಲ್‌ನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಎಲ್ಲಾ ಸಭೆಗಳು ನಡಾವಳಿ ಒಂದೇ ಕ್ಲಿಕ್‌ನಲ್ಲಿ ಸಿಗುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಪ್ರದೀಪ್‌ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ಸೇವೆಗಳನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕೆಲಸಕ್ಕೆ ಆಡಳಿತ ಮಂಡಳಿ ಸದಾ ಜೊತೆಯಾಗಿರುತ್ತದೆ.

-ಪ್ರತಿಭಾ, ಅಧ್ಯಕ್ಷರು, ಬೇವುಕಲ್ಲು ಗ್ರಾಮ ಪಂಚಾಯ್ತಿ

Share this article