ರಾಮಮೂರ್ತಿ ನವಲಿ ಗಂಗಾವತಿ
ಐತಿಹಾಸಿಕ ಆಂಜನೇಯ ಜನ್ಮಸ್ಥಳ ಪ್ರಗತಿಯತ್ತ ಸಾಗಿದ್ದು, ಇನ್ನೂ 6 ತಿಂಗಳಲ್ಲಿ ಭಕ್ತರಿಗೆ ವಾಸ್ತವ್ಯ ಮಾಡಲು ಸಮುಚ್ಚಯ ಕೇಂದ್ರ ಪೂರ್ಣಗೊಂಡು ವರದಾನವಾಗಲಿದೆ.ಕಳೆದ 2024-25ನೇ ಸಾಲಿನಲ್ಲಿ ಸರ್ಕಾರ ₹100 ಕೋಟಿ ಅನುದಾನ ನೀಡಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದು, ಬರುವ ಭಕ್ತರು ಸೇರಿದಂತೆ ವಿದೇಶಿ ಪ್ರವಾಸಿಗರಿಗೂ ಅನುಕೂಲವಾಗುವ ರೀತಿಯಲ್ಲಿ ಕಟ್ಟಡದ ಪ್ರಥಮ ಹಂತದಲ್ಲಿ ಸಮುಚ್ಚಯ ನಿರ್ಮಾಣವಾಗಲಿದೆ.
ಏನೇನು ನಿರ್ಮಾಣ?: ಅಂಜನಾದ್ರಿ ಬೆಟ್ಟದ ಕೆಳಗೆ ಕಟ್ಟಡಗಳ ನಿರ್ಮಾಣ ಕಾರ್ಯ ನಡೆದಿದೆ. ಮೊದಲನೇ ಹಂತದಲ್ಲಿ 12 ಕಾಮಗಾರಿಗಳು ನಡೆದಿದ್ದು, ಪ್ರವಾಸಿ ಮಂದಿರ, ಸಾರ್ವಜನಿಕ ಶೌಚಾಲಯ, ವಾಣಿಜ್ಯ ಮಳಿಗೆಗಳು ಡಿಸೆಂಬರ್ನಲ್ಲಿ ನಿರ್ಮಾಣವಾಗಲಿವೆ.ಭೋಜನದ ಹಾಲ್, ಸಮುದಾಯ ಭವನ, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಅಲ್ಲದೇ ವಾಣಿಜ್ಯ ಮಳಿಗೆ, ಸಾರ್ವಜನಿಕರಿಗೆ ಶೌಚಾಲಯ, ಸ್ನಾನದ ಘಟ್ಟ, ವಿಐಪಿಗಳಿಗೆ ಅತಿಥಿ ಗೃಹ ನಿರ್ಮಾಣ, ಸಿಬ್ಬಂದಿಗೆ 20 ವಸತಿ ಗೃಹಗಳು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಪ್ರವಾಸೋದ್ಯಮ ಇಲಾಖೆ ಕೈಗೊಂಡಿದೆ.
ಪ್ರದಕ್ಷಿಣ ಪಥ: ಆಂಜನೇಯ ಸ್ವಾಮಿಗೆ ಭಕ್ತಿ ಸಮರ್ಪಿಸುವ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಅಂಜನಾದ್ರಿ ಬೆಟ್ಟದ ಸುತ್ತಲು ಪ್ರದಕ್ಷಿಣ ಪಥ ನಿರ್ಮಾಣ ಕಾರ್ಯ ನಡೆದಿದೆ. ಬರುವ ಭಕ್ತರು ಎಡದಿಂದ ಹೋಗಿ ಬಲಗಡೆ ಬರುವ ಉದ್ದೇಶದಿಂದ ಈಗಾಗಲೇ ರಸ್ತೆ ನಿರ್ಮಾಣ ನಡೆದಿದ್ದು (ವಾಕಿಂಗ್ ಟೈಲ್ಸ್) ಹಾಕುವ ಕಾಮಗಾರಿ ನಡೆದಿದೆ. ಇನ್ನು ಕೆಲ ಪ್ರದೇಶದಲ್ಲಿ ಭೂ ಸ್ವಾಧೀನ ಆಗಬೇಕಾಗಿದ್ದರಿಂದ ಮಾರ್ಚ್ 2026ಕ್ಕೆ ಸಿದ್ಧಗೊಳ್ಳಲಿದೆ.ರೋಪ್ ವೇ: ಸಾರ್ವಜನಿಕ, ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ರೋಪ್ ವೇ ಅಭಿವೃದ್ಧಿಪಡಿಸಲಾಗುತ್ತದೆ. ರೈಟ್ಸ್ ಲಿಮಿಟೆಡ್ ಮುಂಬೈಗೆ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಚಿಕ್ಕರಾಂಪುರ ಗ್ರಾಮದಿಂದ ಸರ್ವೆ ನಂ. 55 ಮತ್ತು 52ರಲ್ಲಿ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆ ಬಹುತೇಕ ಮಾರ್ಚ್ 2026ಕ್ಕೆ ಪೂರ್ಣಗೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ. ಪ್ರವಾಸಿಗರಿಗೆ ಈ ಸೌಲಭ್ಯಗಳು ವರದಾನವಾಗಲಿದೆ.
ಅಂಜನಾದ್ರಿ ಬೆಟ್ಟದ ಕೆಳಗೆ ಸರ್ಕಾರ ನೀಡಿದ ಅನುದಾನದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಬರುವ ಡಿಸೆಂಬರ್ ಒಳಗೆ ಪ್ರವಾಸಿ ಮಂದಿರ, ವಾಣಿಜ್ಯ ಮಳಿಗೆ ಪೂರ್ಣಗೊಳ್ಳಲಿವೆ. ಪ್ರದಕ್ಷಿಣ ಪಥ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ ತಿಳಿಸಿದ್ದರು.