ಮಳವಳ್ಳಿ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಎಕ್ಸ್ಪ್ರೆಸ್ ಫೀಡರ್ ಕಾಮಗಾರಿ, ಕಾಳಕೆಂಪನ ದೊಡ್ಡಿ- ಕಲ್ಲುವೀರನಹಳ್ಳಿ ಮತ್ತಿತಾಳೇಶ್ವರ ದೇವಸ್ಥಾನದ ಮಾರ್ಗವಾಗಿ ರಸ್ತೆ ಅಭಿವೃದ್ದಿಗೆ ಚಾಲನೆ ಸೇರಿದಂತೆ ಸುಮಾರು 11 ಕೋಟಿಗೂ ಹೆಚ್ಚು ಅನುದಾನದ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 17 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ಪಂಪ್ ಮೋಟಾರ್ ಹಾಗೂ ಇತರೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯ ನಾಗನೋಟ ಮುಂದುವರೆದಿದೆ. ಅಡುಗೆ ಮನೆ ಉದ್ಘಾಟನೆ, ಮಳವಳ್ಳಿ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಎಕ್ಸ್ಪ್ರೆಸ್ ಫೀಡರ್ ಕಾಮಗಾರಿ, ಕಾಳಕೆಂಪನ ದೊಡ್ಡಿ- ಕಲ್ಲುವೀರನಹಳ್ಳಿ ಮತ್ತಿತಾಳೇಶ್ವರ ದೇವಸ್ಥಾನದ ಮಾರ್ಗವಾಗಿ ರಸ್ತೆ ಅಭಿವೃದ್ದಿಗೆ ಚಾಲನೆ ಸೇರಿದಂತೆ ಸುಮಾರು 11 ಕೋಟಿಗೂ ಹೆಚ್ಚು ಅನುದಾನದ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ, ಕಾವೇರಿ ಜಲನಯನ ಅಚ್ಚಕಟ್ಟು ಪ್ರಾಧಿಕಾರ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಂದ ಹೆಚ್ಚಿನ ಅನುದಾನ ತರಲಾಗಿದೆ. ಜೊತೆಗೆ ಸಾರ್ವಜನಿಕರಿಗೆ ಸೌಲಭ್ಯ ವಿತರಣೆ ಮಾಡುತ್ತಾ ಮಳವಳ್ಳಿಯನ್ನು ಮಾದರಿ ಕ್ಷೇತ್ರಗಳನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮನ್ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ಆರ್.ಎನ್ ವಿಶ್ವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕ ಕೆ.ಜೆ.ದೇವರಾಜು, ದಿಲೀಪ್ಕುಮಾರ್, ಮಲ್ಲಯ್ಯ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಮಹೇಶ್, ಸಂತೋಷ್ ಕುಮಾರ್, ರೋಹಿತ್ಗೌಡ, ಕಿರಣ್ಶಂಕರ್ ಸೇರಿದಂತೆ ಇತರರು ಇದ್ದರು.
ಜಿಲ್ಲಾ ಗೃಹರಕ್ಷಕ ದಳದ ಚಿನ್ನದ ಪದಕ ಪುರಸ್ಕೃತರು
ಮಂಡ್ಯ: ಬೆಂಗಳೂರಿನ ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಆಕಾಡೆಮಿಯಿಂದ ಡಿ.15ರಿಂದ 26ರವರೆಗೆ ನಡೆದ ರಾಜ್ಯಮಟ್ಟದ ಪುರುಷರ ಗೃಹರಕ್ಷಕ ಅಧಿಕಾರಿಗಳ ತರಬೇತಿಯನ್ನು ಜಿಲ್ಲಾ ಗೃಹರಕ್ಷಕದಳದ ಸಿ.ಎಂ.ಲೋಕೇಶ್ (ಎಸ್.ಎಲ್) ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಅದೇ ರೀತಿ ಜಿಲ್ಲಾ ಗೃಹರಕ್ಷಕದಳದ ಎಚ್.ಎನ್. ಶ್ರೀನಿವಾಸ ಅವರು ಡಿ.15 ರಿಂದ ಡಿ.26ರವರೆಗೆ ದಾವಣಗೆರೆ ಜಿಲ್ಲೆ ದೇವರ ಬೆಳಕೆರೆಯ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಪುರುಷ ಗೃಹರಕ್ಷಕ ಪುನರ ಮನನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಈ ಇಬ್ಬರಿಗೂ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಅಧಿಕಾರಿಗಳಾದ ಕಮಾಂಡೆಂಟ್ ಡಿ.ವಿನೋದ್ ಖನ್ನಾ, ಡೆಪ್ಯುಟಿ ಕಮಾಂಡೆಂಟ್ ಎ.ಪುರುಷೋತ್ತಮ್ ರಾವ್, ಬೋಧಕ ವರ್ಗದವರು ಮತ್ತು ಕಚೇರಿ ಸಿಬ್ಬಂದಿ ಪ್ರಶಂಸಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.