- ಸ್ಥಳೀಯ ಸಂಸ್ಥೆಗಳು, ಪಾಲಿಕೆ ಹೊರ ಗುತ್ತಿಗೆ ತ್ಯಾಜ್ಯ ವಿಲೇ ವಾಹನ ನೌಕರರ ಪ್ರತಿಭಟನೆ
ರಾಜ್ಯ ಬಜೆಟ್ನಲ್ಲಿ ಪೌರ ಕಾರ್ಮಿಕರ ಮಾದರಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ತರುವ ಪ್ರಸ್ತಾಪ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ, ದಾವಣಗೆರೆ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದಿಂದ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನ ಎದುರು ಸಂಘಟನೆಗಳ ನೇತೃತ್ವದ ಪ್ರತಿಭಟನೆಯಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು. ಬಳಿಕ ಮುಖಂಡರ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.ಈ ಸಂದರ್ಭ ಸಂಘಟನೆ ಮುಖಂಡರು ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ವಿಭಾಗದಲ್ಲಿ ನೀರು ಪೂರೈಕೆ ಸಹಾಯಕರು, ಸ್ಯಾನಿಟರಿ ಸೂಪರ್ ವೈಸರ್, ಕಸದ ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್, ಒಳಚರಂಡಿ ಕಾರ್ಮಿಕರು, ತ್ಯಾಜ್ಯ ಸಹಾಯಕರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಕಾಲಕ್ಕೆ ಬಾರದ ವೇತನ, ಕೈಗೆ ಸೇರದ ಕನಿಷ್ಠ ವೇತನ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕಿರುಕುಳ ನಿತ್ಯದ ಸಂಗತಿಯಾಗಿದೆ. ತಕ್ಷಣ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಎಲ್ಲ ಕಾರ್ಮಿಕರಿಗೆ ಗುತ್ತಿಗೆ ಪದ್ಧತಿ ರದ್ದುಪಡಿಸಿ. ನೇರಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎಲ್ಲ ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ತರಬೇಕು. ಈ ಸಂಬಂಧ ಈಗಾಗಲೇ ಪಾಲಿಕೆ ಅಗತ್ಯ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದು, ಸೊಸೈಟಿ ಮಾದರಿ ಕೈ ಬಿಡಬೇಕು. 2 ಬಾರಿ ಕಾರ್ಮಿಕರನ್ನು ನೇರ ಪಾವತಿಗೆ ತರುವ ಪ್ರಸ್ತಾವನೆ ಹಿಂದಿರುಗಿಸಿರುವ ಹಣಕಾಸು ಇಲಾಖೆ ಈ ಬಜೆಟ್ನಲ್ಲಿ ಸೇರಿಸಲು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದೆ. ಈ ಸಂಬಂಧ ಸರ್ಕಾರ ಆಗತ್ಯ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು ಎಂದು ಆಗ್ರಹಿಸಿದರು.
- - - * ಬೇಡಿಕೆಗಳೇನೇನು?
- ಈವರೆಗೆ ಉಪಹಾರ ಜಾರಿಗೊಳಿಸದ ಅವಧಿಯ ಭತ್ಯೆಯನ್ನು ಚಾಲಕರ ಖಾತೆಗೆ ಪಾವತಿಸಬೇಕು.
- ಹೊರ ಗುತ್ತಿಗೆ ನೌಕರರಿಗೂ ಕಡ್ಡಾಯವಾಗಿ ಕಾರ್ಮಿಕ ಕಾಯ್ದೆ ಅನುಸಾರ ವಾರದ ರಜೆ ನೀಡಬೇಕು
- ಸ್ವಚ್ಛತಾ ಕಾರ್ಮಿಕರನ್ನು ಗೃಹಭಾಗ್ಯ ಯೋಜನೆಗೆ ಪರಿಗಣಿಸಲು ಸರ್ಕಾರ ಆದೇಶಿಸಿದ್ದು, ಜಿಲ್ಲಾಡಳಿತ ವಿಶೇಷ ಆದ್ಯತೆ ಮೇಲೆ ಈ ಕಾರ್ಮಿಕರಿಗೆ ವಸತಿ ಒದಗಿಸಬೇಕು
- ಪಾಲಿಕೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಸೊಸೈಟಿ ವ್ಯಾಪ್ತಿಗೆ ತರದೆ, ನೇರ ಪಾವತಿಗೆ ಪರಿಗಣಿಸಬೇಕು
-3ಕೆಡಿವಿಜಿ4, 5:
ದಾವಣಗೆರೆ ಡಿಸಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.