2022ರ ಜುಲೈ1 ರಲ್ಲಿ ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕಾರ್ಮಿಕರನ್ನು ನೇರಪಾವತಿಗೆ ತರಲು ಅಗತ್ಯ ತೀರ್ಮಾನಿಸಲಾಗಿತ್ತು. ಅದನ್ನು ಸರ್ಕಾರ ಜಾರಿಗೊಳಿಸಲಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರ ಚಾಲಕರು, ನೀರುಗಂಟೆಗಳು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯೂಜಿಡಿ ಕಾರ್ಮಿಕರು ಸೇರಿದಂತೆ ಎಲ್ಲ ಬಗೆಯ ಹೊರಗುತ್ತಿಗೆ ನೌಕರರನ್ನು ಸೇವಾ ಖಾಯಮಾತಿ ಮಾಡಿ ನೇರ ಪಾವತಿಗೆ ಒಳಪಡಿಸುವಂತೆ ಜಿಲ್ಲಾ ಮಟ್ಟದಲ್ಲಿ ನಗರದ ನಗರಸಭೆ ಕಚೇರಿ ಮುಂದೆ ಮಂಗಳವಾರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಸುರೇಶ್ ಬಾಬು ಮಾತನಾಡಿ, ಈವರೆಗೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರಕಾರದ ಸ್ಪಂದನೆ ಇಲ್ಲವಾಗಿದೆ ಎಂದರು.
ನೇರಪಾವತಿ ವ್ಯಾಪ್ತಿಗೆ ತರಲಿ
ಈ ನೌಕರರನ್ನು ನೇರ ಪಾವತಿಗೆ ತರುವುದರಿಂದ ಸರಕಾರಕ್ಕೆ ಜಿಎಸ್ ಟಿ ಉಳಿತಾಯದ ಜತೆಗೆ ನೌಕರರಿಗೆ ಸೇವಾಭದ್ರತೆ ದೊರಕಲಿದೆ. ಏಜನ್ಸಿಗಳ ಕಿರುಕಳವೂ ನಿಲ್ಲಲಿದೆ. ಇದಲ್ಲದೇ ಈ ಎಲ್ಲಾ ನೌಕರರು ಮುನಿಸಿಪಲ್ ಕಾಯ್ದೆ ಪ್ರಕಾರ ಪೌರಕಾರ್ಮಿಕರ ಆಗಿದ್ದಾರೆ. 2022ರ ಜುಲೈ1 ರಲ್ಲಿ ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕಾರ್ಮಿಕರನ್ನು ನೇರಪಾವತಿಗೆ ತರಲು ಅಗತ್ಯ ತೀರ್ಮಾನಿಸಲಾಗಿತ್ತು. ಆದರೆ ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ಈ ಯಾವ ತೀರ್ಮಾನವು ಜಾರಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.
ಸಂಘದ ಬೇಡಿಗಳು ಏನೇನು?
ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ದೋರಣೆಯನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗಳಾದ ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಹೊರಗುತ್ತಿಗೆ ನೌಕರರನ್ನು ನೇರವಾವತಿಗೆ ತರಲು ಬಜೆಟ್ನಲ್ಲಿ ಘೋಷಣೆ ಮಾಡಬೇಕು, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಅಗತ್ಯಕನುಗುಣವಾಗಿ ಪೌರಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು, ಸಂಕಷ್ಟ ಭತ್ಯೆಯನ್ನು ನೇರಪಾವತಿ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು. ಬಾಕೀ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಬಜೆಟ್ಟಿನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಕೇಂದ್ರಗಳಲ್ಲಿ ಫೆಬ್ರವರಿ 13 ಮತ್ತು 14 ರಂದು ಪ್ರತಿಭಟನೆ ನಡೆಸಿ, ಫೆಬ್ರವರಿ 15 ರಂದು ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಚಂದ್ರಶೇಖರ್,ರಾಜು, ಸುಹಾಸ್,ನಂದೀಶ್,ಮುನಿರಾಜು, ವೆಂಕಟರಾಮ್, ಗಣೇಶ್,ಹರೀಶ್, ಮುರಳಿ ಸಿ, ನವೀನ್ ಕುಮಾರ್. ಮುನಿರಾಜು, ಶಶಿಕುಮಾರ್ ನರಸಿಂಹಮೂರ್ತಿ, ರಘುನಂದನ್, ಶಿವರಾಜ್. ಲಕ್ಷ್ಮೀನಾರಾಯಣ್. ಲಕ್ಷ್ಮೀಪತಿ, ಶಶಿಂಧ್ರ, ಚಂದ್ರಶೇಖರ್.ವಿ, ಚಂದ್ರಶೇಖರ್.ಎ, ಬಾಬು, ಎನ್ ಪಿಳ್ಳಪ್ಪಯ್ಯ ಶ್ರೀನಿವಾಸ್.ಅರ್.ಎನ್, ಹರ್ಷವರ್ಧನ್, ಶ್ರೀನಿವಾಸಲು,ಮುಸ್ಮಿನ್,ಗಜೇಂದ್ರ ಸಿ.ಎನ್. ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.