ಕನ್ನಡಪ್ರಭ ವಾರ್ತೆ ಕಲಬುರಗಿ
ಇತ್ತ ಯುವನಿಧಿ 3 ಸಾವಿರ ರು. ಹಣದಿಂದ ನೌಕರಿ ಅರ್ಜಿ ಹಾಕುತ್ತಿರೋದಾಗಿ ಮೇಘರಾಜ್ ಹೇಳಿದಾಗಲೂ ಸಭಾಂಗಣದಲ್ಲಿ ಕರತಾಡನ ಕೇಳಿಬಂತು.
ಗುರುವಾರದಂದು ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜೊತೆಗಿನ ಸಂವಾದದಲ್ಲಿ ಕಂಡ ನೋಟಗಳಿವು.ಸಾವಳಿಗಿಯಿಂದ ಬಂದಿದ್ದ ರಾಧಾ ಅವರು ಕೂಲಿ ಕೆಲಸ ಮಾಡಿಕೊಂಡಿರುವ ಇವರು ಎರಡು ಮಕ್ಕಳಿಗೆ ಕಂಪ್ಯೂಟರ ಕ್ಲಾಸ್ಗೆ ಪ್ರವೇಶಾತಿ ಮಾಡಿಸಿದ್ದಾಳೆ. ಈ ಕೋರ್ಸಗೆ ೬ ತಿಂಗಳಿಗೆ ೮ ಸಾವಿರ ಫೀಜ್ ಇದೆ. ಕೂಲಿ ಮಾಡಿ ಬಂದ ಹಣದಿಂದ ಮನೆ ನಡೆಸುವುದೆ ಕಷ್ಟಕರವಾಗಿತ್ತು ಆದರೆ ಗೃಹ ಲಕ್ಷ್ಮೀ ಹಣದಿಂದ ಅನೂಕುಲವಾಗಿದೆ ಎಂದು ತಮ್ಮ ಮನದಾಳದ ಮಾತು ಬಿಚ್ಚಿಟ್ಟರು.
ಫಲಾನುಭವಿ ಅಮೀನಾ ಮಾತನಾಡಿ ತಾವೊಂದು ಖಾಸಗಿ ಸ್ಕೂಲ್ ಶಿಕ್ಷಕಿ ಆಗಿದ್ದೇನೆ. ಮನೆ ಹೆಣ್ಣು ಮಕ್ಕಳಿಗೆ 2 ಸಾವಿರ ಅಂದರೆ 2 ಲಕ್ಷ ಇದ್ದಂತೆ. ಇರೋ ಎರಡು ಹೆಣ್ಣು ಮಕ್ಕಳು 8ನೇ ತರಗತಿ ಓದುತ್ತಿದ್ದಾರೆ. ಅವರಿಗೆ ಸ್ಕೂಲ್ ಫೀಜ್ ಕಟ್ಟಲು ಆಗುತ್ತಿರಲಿಲ್ಲ. ಗೃಹಲಕ್ಷ್ಮೀ ಹಣದಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವಾಗಿದೆ ಎಂದರು.
ಶಕ್ತಿಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬಸ್ಸ ಸೌಲಭ್ಯ ಮಾಡಿಕೊಟ್ಟಿದಕ್ಕೆ ಕಲಬುರಗಿಯಿಂದ ಧರ್ಮಸ್ಥಳದ ವರೆಗೆ ಒಟ್ಟು ೨೧ ಜನ ಸೇರಿ ನಾವು ಗೃಹಲಕ್ಷ್ಮೀ ಹಣವನ್ನು ತೆಗೆದುಕೊಂಡು ಧರ್ಮಸ್ಥಳವನ್ನು ಕಣ್ಣಾರೆ ಕಂಡು ತುಂಬಾ ಖುಷಿ ಪಡೆದುಕೊಂಡಿದ್ದೇವೆ. ಯೋಜನೆಗಳು ಸತತವಾಗಿ ಜಾರಿ ಇದ್ದರೆ ಬಡಕುಟುಂಬಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ವಿಜಯಲಕ್ಷ್ಮೀ ಹೇಳಿದರೆ, ಯುವನಿಧಿ ಯೋಜನೆ ಮೇಘರಾಜ್ ಬಿಎಂಟಿಸಿ ಅಪ್ಲೀಕೇಶನ್ ತುಂಬುವುದಕ್ಕೆ, ಕೋಚಿಂಗ್ ಪಡೆಯಲು ಅನುಕೂಲವಾಗಿದೆ ಎಂದ.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಮಾತನಾಡಿ, ಯಾರಾದರೂ ಯೋಜನೆಯಿಂದ ಬಿಟ್ಟು ಹೋದರೆ ಅಂಥಹವರ ಹೆಸರು ನೋಂದಣಿ ಮಾಡಿಸಿ ಲಾಭ ದೊರಕಿಸಿಕೊಡಬೇಕು'''''''' ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸಿ.ಇ.ಓ. ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ, ಐದು ಗ್ಯಾರೆಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ಸಿದ್ದರಾಮಲು ಕುಂಬಾರ, ಸದಸ್ಯರಾದ ಶರಣು ಡೋಣಗಾಂವ್ ಸೇರಿದಂತೆ ಅಧಿಕಾರಿಗಳು ಮತ್ತು ಫಲಾನುಭವಿಗಳು ಸಂವಾದದಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, ಇದಕ್ಕೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್ಖಾನ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಗ್ಯಾರಂಟಿ ಸ್ಥಗಿತ ಮಾಡಬೇಕು ಎಂಬ ಶಾಸಕರ ಆಗ್ರಹವನ್ನು ತಳ್ಳಿ ಹಾಕಿದರು.
ಕಲಬುರಗಿ ಜಿಲ್ಲೆಯಲ್ಲಿ ಶೇ.96 ಸಾಧನೆ:
ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ಶೇ.96ರಷ್ಟು ಪಂಚಗ್ಯಾರಂಟಿಗಳ ಅನುಷ್ಠಾನವಾಗಿದ್ದು, ತಾಂತ್ರಿಕ ಸಮಸ್ಯೆಗಳಿಂದ ಶೇ.೪ ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಲಾಗುವುದು ಎಂದರು.ತಾಂತ್ರಿಕ ಸಮಸ್ಯೆಗಳಿಂದ ಕೆಲವರಿಗೆ ಯುವನಿಧಿ ಭತ್ಯೆ ಸಿಗದಿರುವುದಕ್ಕೆ ಕೇಳಲಾದ ಪ್ರಶ್ನೆಗೆ ಪ್ರತಿ ತಿಂಗಳು ಉದ್ಯೋಗ ದೊರೆತ್ತಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ಅಪ್ಲೋಡ್ ಮಾಡಿದರೆ ಮುಂದಿನ ತಿಂಗಳ ಭತ್ಯೆ ಸಿಗಲಿದೆ ಎಂದರು.
ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ಸಿದ್ದರಾಮಲು ಕುಂಬಾರ, ಸದಸ್ಯರಾದ ಶರಣು ಡೋಣಗಾಂವ್ ಇದ್ದರು.ಕಲಬುರಗಿ ಗ್ಯಾರಂಟಿ ಅನುಷ್ಠಾನ ನೋಟ
ಗೃಹಲಕ್ಷ್ಮೀ: ೫.೪೫ ಲಕ್ಷ ಫಲಾನುಭವಿಗಳಿಗೆ ೧೦೯ ಕೋಟಿ ರು. ಖರ್ಚು. ಗೃಹಜ್ಯೋತಿ: ೫.೪೯ ಲಕ್ಷ ಫಲಾನುಭವಿಗಳಿಗೆ ೨೭೯ ಕೋಟಿ ರು. ವೆಚ್ಚ, ಅನ್ನಭಾಗ್ಯ ಯೋಜನೆ ಅಡಿ ೩೧೪ ಕೋಟಿ ರು. ಡಿಬಿಟಿ ಮೂಲಕ ಹಣ ಸಂದಾಯ. ಮಹಿಳಾ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ೮.೨೮ ಕೋಟಿ ರು. ನಷ್ಟು ಟ್ರಿಪ್ಗಳಾಗಿದ್ದು, ೨೭೧ ಕೋಟಿ ರು. ವೆಚ್ಚ . ಯುವ ನಿಧಿ ಯೋಜನೆಯಡಿ ೧೨,೨೮೭ ಯುವಕರಿಗೆ ೨೬ ಲಕ್ಷ ರು. ಭತ್ಯೆ ಪಾವತಿಸಲಾಗಿದೆ.