ಗುತ್ತಿಗೆದಾರನಿಂದ ಲಂಚ: ಸಿಕ್ಕಿ ಬಿದ್ದ ಕಂಪ್ಯೂಟರ್ ಆಪರೇಟರ್, ಸೆಕ್ಷನ್ ಆಫೀಸರ್

KannadaprabhaNewsNetwork | Published : Jan 2, 2025 12:30 AM

ಸಾರಾಂಶ

Computer operator, section officer caught taking bribe from contractor

-1,20,000 ರು. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ

-----

ಕನ್ನಡಪ್ರಭ ವಾರ್ತೆ ಭದ್ರಾವತಿ

ಗೊಂದಿ ಬಲದಂಡೆ ನಾಲೆ ಕಾಮಗಾರಿಗೆ ಸಂಬಂಧ ಇ-ಟೆಂಡರ್ ವಿಚಾರದಲ್ಲಿ ಕಾಮಗಾರಿ ಬಿಲ್ ಮಂಜೂರು ಮಾಡುವ ವೇಳೆ ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಕಂಪ್ಯೂಟರ್ ಆಪರೇಟರ್ ಮತ್ತು ಸೆಕ್ಷನ್ ಆಫೀಸರ್ ಬುಧವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಕರ್ನಾಟಕ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿಯ ತಾಲೂಕಿನ ಗೊಂದಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್ ಕರೆದಿದ್ದು, ಲೋಕೋಪಯೋಗಿ ದ್ವಿತೀಯ ದರ್ಜೆ ಗುತ್ತಿಗೆದಾರ (ಪಿಡಬ್ಲ್ಯೂಡಿ ಕ್ಲಾಸ್-೦೨) ವಿ. ರವಿ ಅವರು ೨೦೨೩ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಇ-ಟೆಂಡರ್ ಪಡೆದಿದ್ದರು. ಈ ಕಾಮಗಾರಿ ಒಟ್ಟು ಮೊತ್ತ ಜಿಎಸ್‌ಟಿ ಸೇರಿ ೯,೧೬,೯೯೯ ರು. ಗಳಾಗಿದ್ದು, ೨೦೨೪ನೇ ಜನವರಿ ತಿಂಗಳಲ್ಲಿ ಕಾಮಗಾರಿ ಮುಕ್ತಾಯ ಮಾಡಿದ್ದರು.

ಕಾಮಗಾರಿ ಬಿಲ್ ಮಂಜೂರು ಮಾಡುವಂತೆ ಕಚೇರಿಗೆ ಅನೇಕ ಬಾರಿ ರವಿ ಅಲೆದಾಡಿದ್ದು,ಶಾದರೆ, ಟೆಂಡರ್ ಹಣ ಬಿಡುಗಡೆ ಆಗಿಲ್ಲ. ಡಿ.೨೭ ರಂದು ಡಿ.ಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಗಮದ ಕಛೇರಿಯಲ್ಲಿದ್ದ ಸೆಕ್ಷನ್ ಆಫೀಸರ್ ಟಿ. ಕೊಟ್ರಪ್ಪ ಅವರನ್ನು ಭೇಟಿ ಮಾಡಿ, ತಮ್ಮ ಕಾಮಗಾರಿ ಬಿಲ್ ಮಂಜೂರು ಮಾಡುವಂತೆ ರವಿ ಕೇಳಿದ್ದಾರೆ. ಆದರೆ ಕೊಟ್ರಪ್ಪರವರು ಬಿಲ್ ಮಂಜೂರು ಮಾಡಲು ಲಂಚ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

೧,೨೦,೦೦೦ ನೀಡಿದರೆ ಮಾತ್ರ ಮಂಜೂರು ಮಾಡುವುದಾಗಿ ಕೊಟ್ರಪ್ಪ ತಿಳಿಸಿದ್ದಾರೆ. ಈ ಹಿನ್ನಲೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ಲೋಕಾಯುಕ್ತರ ತಂಡ ರಚಿಸಲಾಗಿತ್ತು. ಬುಧವಾರ ಸಂಜೆ ೪.೩೦ರ ಸಮಯದಲ್ಲಿ ಕೊಟ್ರಪ್ಪ(ಪ್ರಬಾರ ಎ.ಇ.ಇ) ಮತ್ತು ಅವರ ಕಛೇರಿಯ ಕಂಪ್ಯೂಟರ್ ಆಪರೇಟರ್ ಅರವಿಂದ್‌ ಅವರು ೧,೨೦,೦೦೦ ರು. ಲಂಚದ ಹಣ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್ ಮಂಜುನಾಥ ಚೌದರಿ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಲೋಕಾಯುಕ್ತ ಪೊಲೀಸ್ ಠಾಣೆ ನಿರೀಕ್ಷಕ ವೀರಬಸಪ್ಪ.ಎಲ್.ಕುಸಲಾಪುರ, ಎಚ್.ಎಸ್ ಸುರೇಶ್, ಪ್ರಕಾಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಎಂ. ಮಂಜುನಾಥ್, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್, ದೇವರಾಜ್, ಪ್ರಕಾಶ್, ಆದರ್ಶ, ಎನ್. ಪುಟ್ಟಮ್ಮ., ಅಂಜಲಿ, ಗಂಗಾಧರ ಮತ್ತು ಪ್ರದೀಪ್‌ ಪಾಲ್ಗೊಂಡಿದ್ದರು.

-----

ಡಿ೧-ಬಿಡಿವಿಟಿ೨

ಕೊಟ್ರಪ್ಪ

----

ಡಿ೧-ಬಿಡಿವಿಟಿ೨(ಎ)

ಆರವಿಂದ್

Share this article