ನರಗುಂದ: ಏಕಾಗ್ರತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ, ಪುನಃ ಪುನಃ ಓದಿ ಬರೆಯುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ಅವರು ತಾಲೂಕಿನ ಬನಹಟ್ಟಿ ಗ್ರಾಮದ ಪಬ್ಲಿಕ ಪ್ರೌಢ ಶಾಲೆಯಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟ ಮಕ್ಕಳ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರದ್ಧೆ,ಉತ್ಸಾಹದಿಂದ ಬುದ್ಧಿ ಉಪಯೋಗಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಬೇಕು. ಅದನ್ನೇ ಆತ್ಮವಿಶ್ವಾಸ ಎಂದು ಕರೆಯುತ್ತಾರೆ.ಅಧ್ಯಯನ ನಿರತರಾದಾಗ ಸಮಯಕ್ಕೆ ಆದ್ಯತೆ ಕೊಡಬೇಕು. ವಿನಾ ಕಾರಣ ಸಮಯ ಹಾಳು ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಸಿ ಗ್ರೇಡ್ ವಿದ್ಯಾರ್ಥಿಗಳಿಗಾಗಿ ತಾಲೂಕಿನಲ್ಲಿ ಪರಿಣಾಮ ಸುಧಾರಣೆಗಾಗಿ ಕೇಂದ್ರ ಸ್ಥಾಪಿಸಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲಾಗುತ್ತಿದೆ. ಪಾಲಕರ ಸಭೆಯನ್ನು ಕರೆದು ಮಕ್ಕಳ ಬಗ್ಗೆ ನಿರಂತರ ಕಾಳಜಿ ವಹಿಸುವಂತೆ ಮಾಡಲಾಗಿದೆಎಂದು ತಿಳಿಸಿದರು.
ಕ.ವಿ.ವ. ಸಂಘದ ಕಾರ್ಯಕ್ರಮ ಸಂಯೋಜಕ ವೀರಣ್ಣ ಒಡ್ಡೀನ ಮಾತನಾಡಿ, ಅಧ್ಯಯನ ಒಂದು ವೃತ ಇದ್ದಂತೆ. ವಿದ್ಯಾರ್ಥಿಗಳು ವೃತಧಾರಕರಾಗಿ ಅಧ್ಯಯನ ಮಾಡಬೇಕು. ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಅಧ್ಯಯನ ಮಾಡಬೇಕು. ಓದಿನ ಜತೆಗೆ ಬರವಣಿಗೆಗೂ ಮಹತ್ವ ನೀಡಬೇಕು ಎಂದರು.ಡಿಮ್ಹಾನ್ಸ ಮನೋ ಆರೋಗ್ಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಮ್ಮ ಜೀವನದ ಮಹತ್ವದ ತಿರುವು. ಆತ್ಮವಿಶ್ವಾಸ, ಛಲ, ಬದ್ಧತೆಯಿಂದ ಅಧ್ಯಯನ ಮಾಡಿದರೆ ಜೀವನದಲ್ಲಿ ಸಾಧನೆ ಮಾಡಬಹುದು. ಮುಖ್ಯವಾಗಿ ಓದಲು ಹಸಿವು ಮತ್ತು ಆಸಕ್ತಿ ಮುಖ್ಯ. ಪರೀಕ್ಷೆ ಬಗ್ಗೆ ವಿನಾಕಾರಣ ಭಯ ಪಡದೆ ಅಧ್ಯಯನ ಮಾಡಬೇಕು. ಭಯವು ನಿಮ್ಮ ಶಕ್ತಿ ಸಾಮರ್ಥ್ಯ ಕುಗ್ಗಿಸುತ್ತದೆ ಎಂದರು.
ಪ್ರಾಚಾರ್ಯ ಕೆ.ಎಂ.ಹುದ್ದಾರ, ಉಪ ಪಾಚಾರ್ಯ ಎಸ್.ವೈ. ಪಾಟೀಲ, ಗೀತಾ ಪೂಜಾರ, ಸಿ.ಜಿ. ಖಾನಾಪೂರ, ಪರಮೇಶ, ಕವಿತಾ ಸಿರಿಯಣ್ಣವರ, ಅನ್ನಪೂರ್ಣಾ, ಸಂಗನಗೌಡ ಪಾಟೀಲ, ಎಸ್.ಎನ್. ಗಡೇಕಾರ, ಕೆ.ಪಿ.ಎಸ್. ಪ್ರೌಢ ಶಾಲೆಯ ಶಿಕ್ಷಕರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ, ಸಿಬ್ಬಂದಿ ಇದ್ದರು.