ಡಿ.ಕೆ.ಶಿವಕುಮಾರ್ ಅವರು ಜನವರಿಯಲ್ಲಿ ಸಿಎಂ ಆಗುತ್ತಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಪುನರುಚ್ಚರಿಸಿದ್ದಾರೆ. ಭಗವಂತನ ಆಶೀರ್ವಾದದಿಂದ ಜ.6 ಅಥವಾ ಜ.9ಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು 200 ಪರ್ಸೆಂಟ್ ಕನ್ಫರ್ಮ್ ಎಂದು ಪುನರುಚ್ಚರಿಸಿದರು.
ರಾಮನಗರ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನವರಿಯಲ್ಲಿ ಸಿಎಂ ಆಗುತ್ತಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಭಗವಂತನ ಆಶೀರ್ವಾದದಿಂದ ಜ.6 ಅಥವಾ ಜ.9ಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು 200 ಪರ್ಸೆಂಟ್ ಕನ್ಫರ್ಮ್ ಎಂದು ಪುನರುಚ್ಚರಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನ ಇಲ್ಲ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನ ಇಲ್ಲ. ಇದು ನನ್ನ ಬಾಯಿಂದ ಬಂದ ವಿಚಾರವಲ್ಲ. ನಾವು ನಂಬುವ ಶರಣರು, ಶಕ್ತಿ ಪಡೆದವರು ಹೇಳಿರುವ ವಿಚಾರವಾಗಿದೆ ಎಂದರು.
ಇಕ್ಬಾಲ್ ಹುಸೇನ್ ಮಾತು ನಂಬಬೇಡಿ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಅವರು ಏನು ಬೇಕಾದರೂ ಹೇಳಲಿ, ಅವರು ನಮ್ಮ ನಾಯಕರು. ಅವರಿಗೆ ಅವರದ್ದೇ ಆದ ಒತ್ತಡ ಇರುತ್ತದೆ. ಹಾಗಾಗಿ ಅವರು ಏನಾದರೂ ಹೇಳಲಿ, ನಾವು ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ನನ್ನ ಮಾತಿಗೆ ಇಂದಿಗೂ ನಾನು ಬದ್ಧ ಎಂದು ಹೇಳಿದರು.
ಒಪ್ಪಂದ ಆಗಿದ್ದರೆ ಮಾತ್ರ ನಮ್ಮ ನಾಯಕರು ಹೇಳಲು ಸಾಧ್ಯ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಹೈಕಮಾಂಡ್ ಅವಕಾಶ ಕೊಡುತ್ತಾ ಎಂದು ಮಾಧ್ಯಮದವರ ಪ್ರಶ್ನೆಗೆ, ಈಗಾಗಲೇ ಒಪ್ಪಂದ ಆಗಿದೆ ಅಂತ ನಮ್ಮ ನಾಯಕರೇ ಹೇಳಿದ್ದಾರಲ್ಲ. ಒಪ್ಪಂದ ಆಗಿದ್ದರೆ ಮಾತ್ರ ನಮ್ಮ ನಾಯಕರು ಹೇಳಲು ಸಾಧ್ಯ. ಒಪ್ಪಂದ ಆಗಿರಲಿಲ್ಲ ಅಂದರೆ ಯಾವುದೇ ಒಪ್ಪಂದ ಇಲ್ಲ ಅಂತ ಹೇಳುತ್ತಿದ್ದರು ಎಂದು ತಿಳಿಸಿದರು.
