ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ಮಂದಿರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ಭೇಟಿ ನೀಡಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ಭೇಟಿ ನೀಡಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಮಂದಿರದ ಅರ್ಚಕ ವೇ. ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಅನುವಂಶೀಯ ಉಪಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿಗುರೂಜಿ, ವೇ. ಶ್ರೀಪಾದ ಅಡಿ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ಸುಬ್ರಹ್ಮಣ್ಯ ಅಡಿ ಹಾಗೂ ಅರ್ಚಕ ವೃಂದವರು ಸಹಕರಿಸಿದರು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹೇಶ ಹಿರೇಗಂಗೆ, ವ್ಯವಸ್ಥಾಪಕ ಸುಬ್ರಹ್ಮ,ಣ್ಯ ಹೆಗಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ತಾಲೂಕಾ ಅಧ್ಯಕ್ಷ ಭುವನ ಭಾಗ್ವತ, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ಪೂಜೆ ನೆರವೇರಿಸಿದರು.
ಮುಖ್ಯಮಂತ್ರಿಯಾಗಲು ಪ್ರಾರ್ಥಿಸಿ ಆಶೀರ್ವದಿಸಿದ ಅರ್ಚಕರು: ಮಹಾಗಣಪತಿ ದೇವಾಲಯದಲ್ಲಿ ಅರ್ಚಕ ವೇ. ವಿಷ್ಣು ಶಂಕರಲಿಂಗ ಅವರು ಮುಂದಿನ ಬಾರಿ ಇಲ್ಲಿಗೆ ಬರುವಾಗ ಮುಖ್ಯಮಂತ್ರಿಯಾಗಿ ಬರಬೇಕು ಎಂದು ಪ್ರಾರ್ಥಿಸಿ, ಆಶೀರ್ವದಿಸಿದರು. ಮಹಾಬಲೇಶ್ವರ ಮಂದಿರದಲ್ಲಿ ಆರತಿ ಮಾಡಿ ಪ್ರಸಾದ ಸ್ವೀಕರಿಸುವ ವೇಳೆ ವೇ. ರಾಜಾರಾಮ ಹಿರೇಗಂಗೆ ಅವರು ಮುಖ್ಯಮಂತ್ರಿ ಪದವಿ ದೊರೆತು ನಾಡಿನ ಜನತೆಯ ಸೇವೆ ಮಾಡುವ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸಿದರು. ಇದರಂತೆ ಮಹಾಬಲೇಶ್ವರ ಮಂದಿರದಲ್ಲಿ ಅರ್ಚಕ ವೃಂದದವರು ಸಹ ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಪೂಜೆ ಸಲ್ಲಿಸಿ ಆಶೀರ್ವದಿಸಿದರು.ತಾಮಗ್ರಗೌರಿ ಮಂದಿರದ ವತಿಯಿಂದ ರಾಮಚಂದ್ರ ನಿರ್ವಾಣೇಶ್ವರ ಆತ್ಮೀಯವಾಗಿ ಸ್ವಾಗತಿಸಿ, ಪೂಜೆ ಬಳಿಕ ಗೌರವಿಸಿ ಮುಖ್ಯಮಂತ್ರಿ ಪಟ್ಟ ದೊರೆಯಲಿ ಎಂದು ಆಶಿಸಿದರು.
ಮಹಾಗಣಪತಿಯಲ್ಲಿ ಬಲಗಡೆಗೆ ಬಿದ್ದ ಪ್ರಸಾದ: ಮಹಾಗಣಪತಿ ಮಂದಿರದಲ್ಲಿ ಪೂಜೆ ನೆರವೇರಿಸುತ್ತಿರುವ ವೇಳೆ ಗಣೇಶನಿಗೆ ಅರ್ಪಿಸಿದ ಹೂವು ಬಲಗಡೆಯಿಂದ ಕೆಳಗೆ ಬಿದ್ದು ಪ್ರಸಾದವಾಗಿದ್ದು, ಶಿವಕುಮಾರ ಅವರಿಗೆ ದೇವರ ಅಭಯ ದೊರೆತಿದೆ.ಅಭಿಮಾನಿಗಳ ದಂಡು: ದೇವಾಲಯಕ್ಕೆ ಪ್ರವೇಶಿಸುತ್ತಿರುವಂತೆ ದೇವರ ದರ್ಶನಕ್ಕೆ ಬಂದ ಭಕ್ತರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಾ ಡಿ.ಕೆ. ಶಿವಕುಮಾರ ಅವರತ್ತ ಬಂದು ಪೋಟೋ ತೆಗೆದುಕೊಳ್ಳಲು ಮುಗಿಬಿದ್ದರು.