ಕನ್ನಡಪ್ರಭ ವಾರ್ತೆ ವಿಜಯಪುರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಖುಕಾಸಿಂಗ್ ಜಾಧವ ಮಾತನಾಡಿ, ದೇವರನಿಂಬರಗಿ ಪಿಡಿಒ ಮೇಲೆ ಗ್ರಾ.ಪಂ. ಸದಸ್ಯರೋರ್ವರು ಹಲ್ಲೆ ನಡೆಸಿದ್ದಾರೆ, ಕರ್ತವ್ಯ ನಿರ್ವಹಣೆ ವೇಳೆಯಲ್ಲಿಯೇ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾರಕಾಸ್ತ್ರವನ್ನು ಪ್ರದರ್ಶಿಸಿ ಜೀವದ ಬೆದರಿಕೆ ಸಹ ಒಡ್ಡಿರುವುದು ಅತ್ಯಂತ ಆತಂಕ ಹಾಗೂ ಆಘಾತಕಾರಿ ಸಂಗತಿ. ಈ ರೀತಿಯಾದರೆ ಅಧಿಕಾರಿಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಪ್ರಶ್ನಿಸಿದರು. ಹಲ್ಲೆ ನಡೆಸಿರುವ ಗ್ರಾ.ಪಂ. ಸದಸ್ಯ ಕಳೆದ ಹಲವಾರು ದಿನಗಳಿಂದ ಪಿಡಿಒಗೆ ಕಿರುಕುಳ ನೀಡುತ್ತಲೇ ಇದ್ದಾನೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆ ವಿಷಯವಾಗಿ ಬೋಗಸ್ ಬಿಲ್ ಬರೆಯುವಂತೆ ಒತ್ತಡ ತರುತ್ತಿದ್ದಾನೆ. ಇದಕ್ಕೆ ಒಪ್ಪದೇ ಇರುವುದರಿಂದ ಪಿಡಿಒ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದರು. ಹಲ್ಲೆ ಮಾಡಿದ ಗ್ರಾಮ ಪಂಚಾಯತ ಸದಸ್ಯನ ಮೇಲೆ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಜರುಗಿಸಿ, ಸದರಿಯವರ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ಜಿ. ಪಾರೆ ಮಾತನಾಡಿ, ಜನರ ಆಶೋತ್ತರಗಳಿಗೆ ಜನಪ್ರತಿನಿಧಿಗಳೊಂದಿಗೆ ಪಿ.ಡಿ.ಒ ಅವರು ಸಾಕಷ್ಟ ಶ್ರಮ ವಹಿಸಿ ಕೆಲಸಮಾಡುತ್ತಿದ್ದಾರೆ. ಚುನಾಯಿತ ಅದಾಗ್ಯೂ ಕೂಡಾ ಕೆಲವು ಗ್ರಾಮ ಪಂಚಾಯತಿಗಳಲ್ಲಿ ಸದಸ್ಯರು ಮತ್ತು ಅಧ್ಯಕ್ಷರು ಬೋಗಸ್ ಬಿಲ್ ಮಾಡುವಂತೆ ಒತ್ತಡ ಹೇರುತ್ತಾರೆ. ಮಾಡದೇ ಇದ್ದಾಗ ಜೀವ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಹೀಗಾಗಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಎಸ್.ಆರ್. ಕಟ್ಟಿ, ಬಿ.ಎಂ. ಬಬಲಾದ, ಎಚ್.ಬಿ.ರಜಪೂತ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.