ಕನ್ನಡಪ್ರಭ ವಾರ್ತೆ ಶಿಕಾರಿಪುರ
ಬಂದ್ ಕರೆ ಹಿನ್ನಲೆಯಲ್ಲಿ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟು, ಹೋಟೆಲ್ ಮಾಲಿಕರು ಸ್ಪಂದಿಸಿ ಸಂಪೂರ್ಣ ವಹಿವಾಟು ಸ್ಥಗಿತಗೊಳಿಸಿದ್ದರು. ಬಸ್ ಸಂಚಾರ, ಶಾಲಾ ಕಾಲೇಜು, ಖಾಸಗಿ-ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಸ್ಥೆಗಳಿಗೆ ಬಂದ್ ನಿಂದ ವಿನಾಯಿತಿಯಿಂದಾಗಿ ಎಂದಿನಂತೆ ಕಾರ್ಯ ನಿರ್ವಹಿಸಿದ್ದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ವಿರಳವಾಗಿದ್ದರು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾಕಾರರು ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಗೋ ಕಳ್ಳರನ್ನು ಬಂಧಿಸಿ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಆಗ್ರಹಿಸಿ ಘೋಷಣೆ ಹಾಕಿದರು.ನಂತರದಲ್ಲಿ ಶಿರಾಳಕೊಪ್ಪ ವೃತ್ತದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದ ರಾಘವೇಂದ್ರ ಮಾತನಾಡಿ, ಸಮಸ್ತ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಗೋವುಗಳನ್ನು ಕದ್ದೊಯ್ಯುತ್ತಿದ್ದವರನ್ನು ತಡೆಯಲು ಯತ್ನಿಸಿದ ಹಿಂದೂ ಕಾರ್ಯಕರ್ತರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ವಿರುದ್ದ ದೌರ್ಜನ್ಯ ಹತ್ಯೆ ಸಾಮಾನ್ಯವಾಗಿದ್ದು, ಇದವರೆಗೂ ನಡೆದ ಹಲವು ಕಾರ್ಯಕರ್ತರ ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಹಲವು ಆರೋಪಿಗಳನ್ನು ಬಂಧಿಸಲಾಗದೆ, ಹಿಂದೂಗಳ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ ಎಂದು ಕಿಡಿಕಾರಿದರು.
ತಾಲೂಕಿನ ಮೂಲಕ ಕಸಾಯಿಖಾನೆಗಳಿಗೆ ಗೋವುಗಳನ್ನು ಕಡಿಯಲು ಸಾಗಿಸುತ್ತಿರುವುದು ಹೆಚ್ಚಾಗಿದ್ದು, ಒ.ಸಿ ಮಟ್ಕಾ ಜೂಜಾಟ ಮತ್ತಿತರ ಅಕ್ರಮ ಚಟುವಟಿಕೆ ವಿಪರೀತವಾಗಿದೆ. ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಗೋರಕ್ಷಕರ ವಿರುದ್ದ ಸರಣಿ ದಾಳಿಗಳು ನಡೆಯುತ್ತಿದ್ದು, ಸ್ವಾಭಿಮಾನಿ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಶಿಕಾರಿಪುರ ಪಾಕಿಸ್ತಾನದಲ್ಲಿಲ್ಲ ಭಾರತದಲ್ಲಿಯೇ ಇದೆ. ಇಲ್ಲಿನ ಹಿಂದೂಗಳು ಎಚ್ಚೆತ್ತುಕೊಂಡರೆ ಸಚಿವ ಮಧು ಬಂಗಾರಪ್ಪರವರಿಗೆ ಉಳಿಗಾಲವಿಲ್ಲ, ಗೋವಿನ ಶಾಪ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಗೂ ಬಿಟ್ಟಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಅಧಿಕಾರ ಶಾಶ್ವತವಲ್ಲ, ಕಾಲ ಬದಲಾಗಬಹುದು ಎಂಬುದನ್ನು ಪೊಲೀಸ್ ಇಲಾಖೆ ಮತ್ತು ಸಚಿವರು ಅರಿಯಬೇಕು ಎಂದು ಹೇಳಿದರು.