ಪುರಸಭೆಯಲ್ಲಿನ ಭ್ರಷ್ಟಾಚಾರ, ಮುಖ್ಯಾಧಿಕಾರಿಯ ಸರ್ವಾಧಿಕಾರಿ ಧೋರಣೆಗೆ ಖಂಡನೆ

KannadaprabhaNewsNetwork |  
Published : May 26, 2026, 01:45 AM IST
25ಕೆಎಂಎನ್ ಡಿ14 | Kannada Prabha

ಸಾರಾಂಶ

ಜಿಲ್ಲಾಧಿಕಾರಿಗಳ ಆದೇಶವನ್ನೇ ತಿರುಚುತ್ತಿರುವ ಮುಖ್ಯಾಧಿಕಾರಿ ಕೆಳಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಬ್ಲಾಕ್ ಮೇಲೆ ಮಾಡುತ್ತಿದ್ದಾನೆ. ಈತ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದು, ಈತನ ಮೇಲೆ ಲೋಕಾಯುಕ್ತ ರೇಡ್ ಕೇಸ್ ಸೇರಿದಂತೆ ಹಲವು ಆರೋಪಗಳಿವೆ. ಜಿಲ್ಲಾಧಿಕಾರಿಗಳು ದಾಖಲೆ ಪರಿಶೀಲಿಸಿ ಕೆಲಸದಿಂದ ವಜಾಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಸಭೆಯಲ್ಲಿ ಭ್ರಷ್ಟಾಚಾರ, ಮುಖ್ಯಾಧಿಕಾರಿಯ ಸರ್ವಾಧಿಕಾರಿ ಧೋರಣೆ ಹಾಗೂ ನ್ಯಾಯಯುತವಾಗಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪಟ್ಟಣದ ನಿವಾಸಿಗಳು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪದ ವೃತ್ತದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಪಟ್ಟಣದ ನಿವಾಸಿಗಳು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿ ಬಳಿಕ ಪಟ್ಟಣದ ಪುರಸಭೆವರೆಗೂ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಿ ಮುಖ್ಯಾಧಿಕಾರಿ ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪುರಸಭೆಯಲ್ಲಿ ಕಂಡುಕೇಳರಿಯದಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಇಲ್ಲಿನ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಜನರಿಂದ ಸುಲಿಗೆ ಮಾಡಿ ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಆದೇಶವನ್ನೇ ತಿರುಚುತ್ತಿರುವ ಮುಖ್ಯಾಧಿಕಾರಿ ಕೆಳಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಬ್ಲಾಕ್ ಮೇಲೆ ಮಾಡುತ್ತಿದ್ದಾನೆ. ಈತ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದು, ಈತನ ಮೇಲೆ ಲೋಕಾಯುಕ್ತ ರೇಡ್ ಕೇಸ್ ಸೇರಿದಂತೆ ಹಲವು ಆರೋಪಗಳಿವೆ. ಜಿಲ್ಲಾಧಿಕಾರಿಗಳು ದಾಖಲೆ ಪರಿಶೀಲಿಸಿ ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಉಪ ವಿಭಾಗೀಯ ಕೇಂದ್ರ ಸ್ಥಾನವಾಗಿದ್ದರೂ ಸಣ್ಣ ಹಳ್ಳಿಯಂತಿದ್ದ ಪಟ್ಟಣವನ್ನು ನಾನು ಶಾಸಕನಾದ ಬಳಿಕ ಬಸ್ ನಿಲ್ದಾಣ, ಡಿಪೋ, ಕ್ರೀಡಾಂಗಣ, 100 ಹಾಸಿಗೆಯ ಆಸ್ಪತ್ರೆ, ಪಾರ್ಕ್‌ಗಳು, ಅಗ್ನಿಶಾಮಕ ಠಾಣೆ, ರಸ್ತೆಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಪಡಿಸಿದ್ದೇನೆ ಎಂದರು.

2006ರ ನನ್ನ ಶಾಸಕರ ಅವಧಿಯಲ್ಲಿ ಪಟ್ಟಣದ 550ಕ್ಕೂ ಅಧಿಕ ನಿವೇಶನ ಹಂಚಿಕೆ ಮಾಡಿದ್ದೇನೆ. ಅರ್ಜಿದಾರದ ಅರ್ಜಿ ಶುಲ್ಕವನ್ನು ಸಹ ನನ್ನ ಶಾಸಕರ ಸಂಬಳದಿಂದಲೇ ಭರಿಸಿಕೊಟ್ಟಿದ್ದೇನೆ. ಇದೀಗ ಹಂಚಿಕೆ ಮಾಡಲು ಮುಂದಾಗಿರುವ 175 ನಿವೇಶನಗಳನ್ನು ಸಹ ನಾವೇ ಗುರುತಿಸಿ ಇಟ್ಟಿದ್ದೇವು. 175 ಸೈಟು ಹಂಚಿಕೆ ಬದಲು ಮತ್ತಷ್ಟು ಬಡ ಜನರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಚಂದ್ರೆ ಬಡಾವಣೆ ಬಳಿ ಸುಮಾರು 25 ಎಕರೆ ಸರಕಾರಿ ಜಮೀನನ್ನು ಗುರುತಿಸಿ ನಿವೇಶನ ಮಾರ್ಪಾಡು ಮಾಡಲು ಮುಂದಾಗಿದ್ದೆ. ಬದಲಾದ ರಾಜಕೀಯದಿಂದ ಅದು ಸಾಧ್ಯವಾಗಲಿಲ್ಲ ಎಂದರು.

ಹಾಲಿ ಶಾಸಕರು ನ್ಯಾಯುತವಾಗಿ ನಿವೇಶನ ಹಂಚಿಕೆ ಮಾಡಬೇಕು, ಆಯಾ ಬಡಾವಣೆಯ ಬಡವರಿಗೆ ಸಲ್ಲಿಯೇ ನಿವೇಶನ ಹಂಚಿಕೆ ಮಾಡುವ ಕೆಲಸಕ್ಕೆ ಮುಂದಾಗಬೇಕು. ಶಾಸಕರಿಗೆ ಬಡವರ ಬಗ್ಗೆ ಕಳಕಳಿ ಇದ್ದರೆ ಈಗಾಗಲೆ ಗುರುತಿಸಿರುವ 25 ಎಕರೆ ಜಮೀನಿನಲ್ಲಿ ನಿವೇಶನ ರಚಿಸಿ ಒಟ್ಟಿಗೆ ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ಹಿಡಿತ ಇಲ್ಲದ ಕಾರಣ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅವರು ಒಂದು ತಿಂಗಳು ಅಮೇರಿಕದಲ್ಲಿ ಒಂದು ತಿಂಗಳು ಕ್ಷೇತ್ರದಲ್ಲಿ ಇದ್ದರೆ ಕ್ಷೇತ್ರವನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಟೀಕಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್ ಮಾತನಾಡಿ, ಪಟ್ಟಣದಲ್ಲಿ ಸಾವಿರಾರು ಮಂದಿ ಬಡವರಿದ್ದಾರೆ. ಶಾಸಕರು ನಿವೇಶನ ಹಂಚಿಕೆ ಮಾಡುವುದಾದರೆ ಮತ್ತಷ್ಟು ನಿವೇಶನಗಳನ್ನು ಗುರುತಿಸಿ ಎಲ್ಲರಿಗೂ ಹಂಚಿಕೆ ಮಾಡಬೇಕು. ಪುರಸಭೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಮುಖ್ಯಾಧಿಕಾರಿ ವಿರುದ್ದ ಶಿಸ್ತು ಕ್ರಮಜರುಗಿಸುವಂತೆ ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿಗೆ ರಜೆ ನೀಡಿ ಆತನ ವಿರುದ್ದ ಆರೋಪಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕಚೇರಿಗಳ ಅಧಿಕಾರಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಪುರಸಭೆ ಮಾಜಿ ಸದಸ್ಯರಾದ ಎಂ.ಗಿರೀಶ್, ಹಾರೋಹಳ್ಳಿ ಕೃಷ್ಣ, ಚಂದ್ರು, ಶಿವಕುಮಾರ್, ಜ್ಯೋತಿ ಲಕ್ಷ್ಮಿ. ಸುನೀತ, ಅರ್ಚನ ಚಂದ್ರು, ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕ ಪಿ.ಎಲ್.ಆದರ್ಶ, ರಾಮಕೃಷ್ಣೇಗೌಡ, ಚಿಕ್ಕಾಡೆ ಚೇತನ್, ಬೊಮ್ಮರಾಜು, ಮಾಣಿಕ್ಯನಹಳ್ಳಿ ಅಶೋಕ್, ಹೇಮಾವತಿ ರಾಜೇಶ್, ಎಚ್‌ಎಸ್‌ವಿ ಸ್ವಾಮೀಗೌಡ, ಬಕೋಡಿ, ರಾಚಯ್ಯ, ಟೌನ್‌ಚಂದ್ರು, ಪಟೇಲ್ ಮಹೇಶ್, ಪ್ರಶಾಂತ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ: ಮಧು
ಬಾಗೇಪಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ