ಕನ್ನಡಪ್ರಭ ವಾರ್ತೆ ತಿಪಟೂರು
ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಇಲ್ಲಿ ರಾಜಕೀಯ ಸಭೆ ಮಾಡಬೇಡಿ ಎಂದರೂ ಅತಿಕ್ರಮ ಪ್ರವೇಶ ಮಾಡಿ ಸಭೆಯನ್ನು ಮಾಡಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮೇಲಿರುವ ವೈಯಕ್ತಿಕ ದ್ವೇಷಕ್ಕೆ ಮಠಗಳ ಹೆಸರನ್ನು ಕೆಡಿಸಬೇಡಿ. ಜೋಶಿ ನಾವು ಕಂಡಂತೆ ವೀರಶೈವ ಸಮಾಜವನ್ನಾಗಲಿ, ವ್ಯಕ್ತಿಗಳನ್ನಾಗಿ ಕಡೆಗಣಿಸಿಲ್ಲ. ಸಂಸತ್ ಸಚಿವರಾಗಿ ದೇಶವನ್ನು ಪ್ರತಿನಿಧಿ ಸುವ ವ್ಯಕ್ತಿ. ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿ ಮಾಡುವ ಅವಕಾಶವನ್ನು ಇವರೊಬ್ಬರಿಗೆ ಮಾತ್ರ ಕೊಡಲಾಗಿದೆ.ನಿಮಗೆ ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ಕೊಡಿಸಬೇಕೆಂದರೆ ನೀವು ಕಾಂಗ್ರೆಸ್ ಪಕ್ಷದಿಂದ ಮೋಹನ್ ಲಿಂಬಿಕಾಯಿಗೆ ಕೊಡಿಸಬಹುದಿದ್ದು, ವೈಯಕ್ತಿಕ ದ್ವೇಷಕ್ಕೆ ಸಮಾಜವನ್ನು ಒಡೆಯುವ, ಸಾಮರಸ್ಯ ಕದಡುವ ಕೆಲಸ ಮಾಡಬೇಡಿ. ಚುನಾವಣೆ ಎಂದರೆ ಜಾತಿ, ಸಮಾಜ, ಪಕ್ಷ, ವ್ಯಕ್ತಿಯ ಚುನಾವಣೆಯಲ್ಲ. ದಿಂಗಾಲೇಶ್ವರ ಶ್ರೀಗಳು ವೈಯಕ್ತಿಕ ದ್ವೇಷಕ್ಕಾಗಿ ಇಂತಹ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ರಾಜ್ಯದಲ್ಲಿ ಸ್ವಾಮೀಜಿಗಳು ಚುನಾವಣೆಗೆ ನಿಲ್ಲುವಂತಹ ಕಾಲ ಇನ್ನೂ ಪರಿಪಕ್ವವಾಗಿಲ್ಲ. ಸ್ವಾಮೀಜಿಗಳು ಚುನಾವಣೆಯಲ್ಲಿ ನಿಂತು ತಮ್ಮ ಗೌರವ, ಸ್ವಾಭಿಮಾನಗಳನ್ನು ಕಳೆದು ಕೊಂಡಂತಹ ಉದಾಹರಣೆಗಳಿವೆ. ಅಂತಹದರಲ್ಲಿ ಸ್ವಾಮೀಜಿಗಳು ಚುನಾವಣೆಯಲ್ಲಿ ನಿಲ್ಲುತ್ತೇವೆಂದು ಹೇಳುವುದು ಹಾಸ್ಯಾಸ್ಪದ. ಒಂದು ವೇಳೆ ನೀವು ನಿಲ್ಲಬೇಕೆಂಬ ಬಯಕೆ ಇದ್ದರೆ ನಿಮ್ಮ ಮಠದಲ್ಲಿ ಪತ್ರಿಕಾಗೋಷ್ಠಿ, ರಾಜಕೀಯ ಸಭೆ ಇಟ್ಟುಕೊಳ್ಳಲಿ. ಅದರ ಬದಲು ಬೇರೆ ಮಠಕ್ಕೆ ಬಂದು ಹೆಸರು ಕೆಡಿಸುವ, ಮಠದ ಗೌರವ ಕಳೆಯುವ ಕೆಲಸ ಮಾಡಿ ಎಂದರು.