ಕೊಪ್ಪಳ: ನಗರದ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರವನ್ನು ನೆಲಸಮಗೊಳಿಸಿ, ಕಾಲೇಜು ಆವರಣವನ್ನು ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಕ್ರಮವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಘಟಕ ಸೋಮವಾರ ತಹಸೀಲ್ದಾರ್ ರಾಜು ಫಿರಂಗಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಕಾಲೇಜು ಆವರಣದ ಮುಂಭಾಗದಲ್ಲಿ ನಗರಸಭೆ, ಪಿಕಾರ್ಡ್, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜತೆಗೆ ಬಾಲಕಿಯರ, ಬಾಲಕರ ಹಾಗೂ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸಂಬಂಧಿಸಿದ ಕಟ್ಟಡಗಳ ಹೆಸರಿನಲ್ಲಿ ಅನಗತ್ಯ ನಿರ್ಮಾಣಗಳು ನಡೆದಿರುವುದರಿಂದ ಕಾಲೇಜಿನ ವಿಶಾಲ ಮೈದಾನ ಬಹುತೇಕ ಕಣ್ಮರೆಯಾಗಿದೆ ಎಂದು ಹೇಳಿದರು.
ಮೈದಾನದಲ್ಲಿದ್ದ ಕಲಾ ರಂಗಮಂದಿರ ಅನೇಕ ರಂಗಭೂಮಿ ಕಲಾವಿದರನ್ನು ರೂಪಿಸಿದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಂತಹ ರಂಗಮಂದಿರವನ್ನು ನಗರಸಭೆ ಫುಡ್ ಕೋರ್ಟ್ ನಿರ್ಮಾಣದ ಹೆಸರಿನಲ್ಲಿ ಬುಲ್ಡೋಜರ್ ಮೂಲಕ ನೆಲಸಮಗೊಳಿಸಿರುವುದು ಖಂಡನೀಯ. ಈ ಕ್ರಮದ ಹಿಂದೆ ರಾಜಕೀಯ ಪ್ರಭಾವವಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಸರ್ಕಾರದ ಇತರ ಯೋಜನೆಗಳಿಗೆ ಹಳೆಯ ಐಬಿ ಸೇರಿದಂತೆ ಪರ್ಯಾಯ ಜಾಗಗಳಿದ್ದರೂ ಸರ್ಕಾರಿ ಕಾಲೇಜು ಆವರಣವನ್ನೇ ಬಳಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗೆ ಧಕ್ಕೆ ಉಂಟುಮಾಡಲಿದೆ. ರಂಗಮಂದಿರ ಧ್ವಂಸದಿಂದ ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ತೀವ್ರ ಆತಂಕ ಉಂಟಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ನಾಗರಾಜ ಯು., ಬಸವರಾಜ ಮರಕುಂಬಿ, ಹುಸೇನಪ್ಪ ಕೆ., ರಮೇಶ್ ಡಿ. ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.