ಭದ್ರಾವತಿಯಲ್ಲಿ ಕವಿ ಎಚ್ಎಸ್‌ವಿಗೆ ನೋಟಿನ ಮೂಲಕ ಸಂತಾಪ

KannadaprabhaNewsNetwork | Published : Jun 2, 2025 12:10 AM
ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ಡಾ. ಎಚ್.ಎಸ್.ವೆಂಕಟೇಶ್‌ ಮೂರ್ತಿ ಅವರ ನಿಧನಕ್ಕೆ ನಗರದ ಹವ್ಯಾಸಿ ಹಿರಿಯ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಕಾರ ಗಣೇಶ್‌ರವರು ೧೦ ರು. ಮುಖಬೆಲೆ ನೋಟಿನ ಮೂಲಕ ಸಂತಾಪ ಸೂಚಿಸಿದ್ದಾರೆ.

ನುಡಿನಮನ । ಹಿರಿಯ ಸಾಹಿತಿ ನಿಧನಕ್ಕೆ ಹವ್ಯಾಸಿ ಹಿರಿಯ ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ ಕಂಬನಿ । ವಿಶಿಷ್ಟ ರೂಪದಲ್ಲಿ ಶ್ರದ್ಧಾಂಜಲಿ

ಕನ್ನಡಪ್ರಭ ವಾರ್ತೆ ಭದ್ರಾವತಿ

ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ಡಾ. ಎಚ್.ಎಸ್.ವೆಂಕಟೇಶ್‌ ಮೂರ್ತಿ ಅವರ ನಿಧನಕ್ಕೆ ನಗರದ ಹವ್ಯಾಸಿ ಹಿರಿಯ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಕಾರ ಗಣೇಶ್‌ರವರು ೧೦ ರು. ಮುಖಬೆಲೆ ನೋಟಿನ ಮೂಲಕ ಸಂತಾಪ ಸೂಚಿಸಿದ್ದಾರೆ.

ವೆಂಕಟೇಶ ಮೂರ್ತಿಯವರ ಜನ್ಮದಿನ ಹಾಗು ಮರಣ ದಿನಾಂಕದ ೧೦ ರು. ಮುಖ ಬೆಲೆ ನೋಟಿನ ಮೂಲಕ ವಿಶಿಷ್ಟವಾಗಿ ಸಂತಾಪ ಸೂಚಿಸಿದ್ದಾರೆ. ಗಣೇಶ್‌ರವರು ರಾಜಕೀಯ ಹಾಗು ಸಿನಿಮಾ ನಾಯಕರು, ವಿಜ್ಞಾನಿಗಳು, ಮಠಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬದಂದು ೧೦ ರು. ಮುಖ ಬೆಲೆಯ ಅವರ ಜನ್ಮ ದಿನದ ನೋಟು ನೀಡಿ ಶುಭ ಹಾರೈಸುವುದು, ನಿಧನ ಹೊಂದಿದ ಸಂದರ್ಭದಲ್ಲಿ ಆ ದಿನಾಂಕದ ನೋಟುಗಳ ಮೂಲಕ ಸಂತಾಪ ಸೂಚಿಸುವುದು. ಅಲ್ಲದೆ ಪ್ರಮುಖ ಘಟನಾವಳಿಗಳ ಸಂದರ್ಭದಲ್ಲಿ ಆ ದಿನಾಂಕದ ನೋಟುಗಳ ಮೂಲಕ ಸ್ಮರಿಸಿಕೊಳ್ಳುವುದನ್ನು ಇವರು ರೂಢಿಸಿಕೊಂಡು ಬಂದಿದ್ದಾರೆ.

ವೆಂಕಟೇಶ್‌ ಮೂರ್ತಿಯವರಿಗೆ ಉಕ್ಕಿನ ನಗರದ ನಂಟು :

ಹಿರಿಯ ಸಾಹಿತಿ ವೆಂಕಟೇಶ ಮೂರ್ತಿ ಅವರಿಗೂ ಉಕ್ಕಿನ ನಗರಕ್ಕೂ ಅವಿನಾಭಾವ ಸಂಬಂಧವಿದ್ದು, ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುವ ಮೂಲಕ ತಮ್ಮ ನೆನಪುಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ.

ವೆಂಕಟೇಶ್‌ ಮೂರ್ತಿಯವರು ಪಾಲಿಟೆಕ್ನಿಕ್ ಶಿಕ್ಷಣ ಪಡೆದ ನಂತರ ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯಲ್ಲಿ ಕ್ರಾಫ್ಟ್ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡು ಮನೆ ಮಾತಾಗಿದ್ದರು. ವೆಂಕಟೇಶ್ ಮೂರ್ತಿ ಅವರಿಗೂ ಉಕ್ಕಿನ ನಗರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇಂದಿಗೂ ಉಳಿದುಕೊಂಡು ಬಂದಿದೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ಹವ್ಯಾಸಿ ಹಿರಿಯ ಅಂಚೆ ಚೀಟಿ ಸಂಗ್ರಹಕಾರ ಗಣೇಶ್‌ ವಿಶೇಷವಾಗಿ ಸಂತಾಪ ಸೂಚಿಸಿದ್ದಾರೆ.