ಗದಗ: ಕಳೆದ 15 ವರ್ಷಗಳಿಂದ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ ನಡೆಯದಿರುವುದರಿಂದ ಮುಸ್ಲಿಂ ಸಮುದಾಯದ ಪ್ರಗತಿ ನಿರೀಕ್ಷಿಸಿದ ರೀತಿಯಲ್ಲಿ ಆಗಿಲ್ಲ. ಆ ಹಿನ್ನೆಲೆಯಲ್ಲಿ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಗದಗ-ಬೆಟಗೇರಿ ಮುಸ್ಲಿಂ ಸಮುದಾಯ ನಿಯೋಜಿತ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ಮುಸ್ಲಿಂ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಈ ಚುನಾವಣೆ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ಗೌರವ ಹೆಚ್ಚಿಸುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಮುಂದಾಗಬೇಕಿದೆ. ಇನ್ನು 7 ದಿನಗಳ ಒಳಗೆ ಚುನಾವಣೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ವಕೀಲ ಮುಕ್ತಾರ ಮೌಲ್ವಿ ಮಾತನಾಡಿ, ಕಳೆದ 15 ವರ್ಷಗಳಿಂದ ಈ ಸಂಸ್ಥೆಗೆ ಚುನಾವಣೆ ನಡೆಯದಿರುವುದು ದುರದೃಷ್ಟಕರ ಸಂಗತಿ. ಚುನಾವಣೆ ವಿಳಂಬದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ತಕ್ಷಣವೇ ಚುನಾವಣೆ ಘೋಷಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕರೀಮಸಾಬ ಸುಣಗಾರ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರೆ ಸಮುದಾಯದ ಬೆಳವಣಿಗೆಯೂ ಸಾಧ್ಯ. ಪ್ರಜಾಪ್ರಭುತ್ವ ಮೊಟಕುಗೊಳಿಸಿದರೆ ಸಮುದಾಯದ ಪ್ರಾಬಲ್ಯ ನಾವೇ ಕುಗ್ಗಿಸಿದಂತಾಗುತ್ತದೆ. ಮುಸ್ಲಿಂ ಸಮುದಾಯದ ಪ್ರಗತಿ ಹಾಗೂ ಪ್ರಾಬಲ್ಯಕ್ಕಾಗಿ ಎಲ್ಲರೂ ಒಟ್ಟಾಗಿರೋಣ. ಚುನಾವಣೆಯನ್ನು ಘೋಣೆ ಮಾಡಿದರೆ ಅವರ ಅವರ ಸಾಮರ್ಥ್ಯ ತಿಳಿಯಲಿದೆ. ತಕ್ಷಣವೇ ಚುನಾವಣೆ ಘೋಷಣೆಗೆ ಗದಗ ಜಿಲ್ಲಾ ವಕ್ಫ್ ಬೋರ್ಡ್ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಅಬ್ದುಲ್ ರಾಟಿ, ಹಾಜಿ ಅಲಿ ಕೊಪ್ಪಳ, ಶಿರಾಜ ಕದಡಿ, ಚಾಂದಸಾಬ್ ಕೊಟ್ಟೂರ, ಅಬ್ದುಲ ರಜಾಕ್ ಶಿರಹಟ್ಟಿ, ರಿಯಾಜ್ ಡಾಲಾಯತ್, ಯುಸೂಫ್ ಡಂಬಳ, ತನ್ವೀರ್ ರೋಣ, ಮುಜಾಫರ ಮುಲ್ಲಾ, ಮುಸ್ತಕೀಮ ಶಿರಹಟ್ಟಿ, ಜವುಳ ಕರೀಮ, ದಾದಾಪೀರ ಕೊಟ್ಟೂರ, ಮೌಲಾಸಾಬ ಗಚ್ಚಿ, ಮೆಹಬೂಬ ಸಾಬ ಮುಲ್ಲಾ, ಮಲಿಕಸಾಬ ಭಾವಿಕಟ್ಟಿ, ದಾದಾಸಾಬ, ತೌಸಿಪ್ ನರಗುಂದ ಇದ್ದರು.