ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೋಳಿ ಆಯ್ತು ಈಗ ತೆಂಗಿನೆಣ್ಣೆ ಗಲಾಟೆ!

KannadaprabhaNewsNetwork | Published : Nov 13, 2023 1:15 AM

ಸಾರಾಂಶ

ಕೆಎಸ್ಸ್‌ಆರ್ರ್‌ಟಿಸಿ ಬಸ್ಸ್‌ನಲ್ಲಿ ತೆಂಗಿನೆಣ್ಣೆ ಕೊಂಡೊಯ್ಯುತ್ತಿದ್ದ ಮಹಿಳೆ ಅರ್ಧದಲ್ಲೇ ಇಳಿಸಿದ ಕಂಡಕ್ಚರ್ರ್‌

ಬಂಟ್ವಾಳ: ಇತ್ತೀಚೆಗಷ್ಟೇ ಕೋಳಿ ಮಾಂಸ ಹಿಡಿದುಕೊಂಡಿದ್ದ ಪ್ರಯಾಣಿಕನನ್ನು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ‌ ಆಕ್ಷೇಪ ವ್ಯಕ್ತಪಡಿಸಿ, ಚಾಲಕ ಬಸ್ನ ಠಾಣೆಗೆ ಕರೆದೊಯ್ದ ಘಟನೆ ಮಾಸುವ ಮುನ್ನವೇ ತೆಂಗಿನೆಣ್ಣೆ ವಿಚಾರದಲ್ಲಿ ಹೊಸ ವಾಗ್ವಾದವೊಂದು ಬಿ.ಸಿ. ರೋಡಿನಲ್ಲಿ ಭಾನುವಾರ ನಡೆದಿದೆ.

ಘಟನೆ ವಿವರ: ತೆಂಗಿನ ಎಣ್ಣೆಯನ್ನು ಹಿಡಿದುಕೊಂಡು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನುಬಸ್ ನಿರ್ವಾಹಕ ಇಳಿಸಿದ ಘಟನೆ ನಡೆದಿದೆ. ಮಂಗಳೂರು – ಹಾಸನ ಬಸ್‌ನಲ್ಲಿ ಮಂಗಳೂರಿನಿಂದ ಹಾಸನಕ್ಕೆ ಮಹಿಳೆಯೊಬ್ಬರು ಪ್ರಯಾಣ ಬೆಳೆಸಿದ್ದರು.

ಮಹಿಳೆಯ ಕೈಯಲ್ಲಿ ಚೀಲವೊಂದಿದ್ದು, ಅದರಲ್ಲಿ ಮೂರು ಕ್ಯಾನ್ ತೆಂಗಿನ ಎಣ್ಣೆ ಇತ್ತು. ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ತೆಂಗಿನ ಎಣ್ಣೆಯನ್ನು ನೋಡಿ ಇದು ಏನಮ್ಮಾ ಅಂತ ಕೇಳಿದ್ದಾರೆ.‌‌‌ ಅದು ಮೇಲ್ನೋಟಕ್ಕೆ ತೆಂಗಿನ ಎಣ್ಣೆ ಎಂಬುದು ಖಾತ್ರಿಯಾದರೂ ಕಂಡಕ್ಟರ್ ಪ್ರಶ್ನಿಸಿದ್ದಕ್ಕೆ ಕೋಪದಲ್ಲಿ ಮಹಿಳೆ, ‘ಇದು ಬಾಂಬ್’ ಅಂತ ಹೇಳಿದ್ದಾರೆ. ಅದು ತೆಂಗಿನಎಣ್ಣೆ ಎಂದು ತಿಳಿದ ನಿರ್ವಾಹಕ ಯಾವುದೇ ಆಯಿಲ್ ಪದಾರ್ಥಗಳನ್ನು ಬಸ್‌ನಲ್ಲಿ ಕೊಂಡು ಹೋಗುವಂತಿಲ್ಲ ಎಂದು ಮಹಿಳೆಯಲ್ಲಿ ವಾಗ್ವಾದ ನಡೆಸಿದ್ದಾನೆ. ಆದರೆ ಮಹಿಳೆ ಇವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪಟ್ಟು ಬಿಡದ ಕಂಡೆಕ್ಟರ್ ಮಂಗಳೂರಿನಿಂದ ಬಿ.ಸಿ.ರೋಡು ತಲುಪುತ್ತಿದ್ದಂತೆ ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಬಸ್‌ನಿಂದ ಇಳಿಸಿದ್ದಾನೆ.

ಆಗ ಮಹಿಳೆ, ನನಗೆ ನ್ಯಾಯ ಬೇಕು ಅಂತ ಸಂಚಾರ ನಿರ್ವಾಹಣೆಗಾಗಿ ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ವಿವೇಕ್ ರೈ ಅವರಲ್ಲಿ ಮನವಿ ಮಾಡಿಕೊಂಡರು.

ಮಹಿಳೆ ಬಸ್‌ನಿಂದ ಇಳಿದಿದ್ದಾರೆ, ಆದರೂ ಎಣ್ಣೆ ಕ್ಯಾನ್ ಮಾತ್ರ ಬಸ್‌ನೊಳಗೆ ಇತ್ತು. ಮಧ್ಯ ವಯಸ್ಸಿನ ಒಂಟಿ ಮಹಿಳೆಯಾಗಿರುವುದರಿಂದ ಬಸ್‌ನಿಂದ ಇಳಿಸಿದ ಕಂಡಕ್ಟರ್ ವರ್ತನೆ ಸರಿ ಕಾಣದೆ ಸಾರ್ವಜನಿಕರು ಕೂಡ ಜಮಾಯಿಸಿದ್ದರು. ಮಹಿಳೆ ನೀಡಿದ ದೂರಿನಂತೆ ಟ್ರಾಫಿಕ್ ಪೋಲೀಸ್ ವಿವೇಕ್ ಅವರು ಬಸ್ ಚಾಲಕನಲ್ಲಿ ಬಸ್‌ನ್ನು ಬದಿಗೆ ಸರಿಸಿ‌ ಸ್ವಲ್ಪ ಕಾಲ ನಿಲ್ಲುವಂತೆ ಕೇಳಿಕೊಂಡರು. ಬಳಿಕ ಘಟನೆಯಿಂದ ಮಹಿಳೆಗೆ ತೊಂದರೆಯಾಗುತ್ತದೆ ಎಂಬುದನ್ನು ಕಂಡೆಕ್ಟರ್ ಅವರಿಗೆ ತಿಳಿಸಿದರು. ಜೊತೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ. ರಾಮಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ. ಅವರು ಫೋನ್‌ ಮೂಲಕ ನಿರ್ವಾಹಕನಿಗೆ ಬುದ್ಧಿಮಾತು ಹೇಳಿದರು. ಬಳಿಕ ಸಂತ್ರಸ್ತ ಮಹಿಳೆಯನ್ನು ಅದೇ ಬಸ್‌ನಲ್ಲಿ ತೆಂಗಿನ ಎಣ್ಣೆ ಸಹಿತ ಹಾಸನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರಕಾರಿ ಬಸ್ ನಲ್ಲಿ ಯಾವ ವಸ್ತುಗಳನ್ನು ಕೊಂಡು ಹೋಗಬಹುದು? ಯಾವುದನ್ನು ಕೊಂಡು ಹೋಗುವಂತಿಲ್ಲ ಎಂಬುದರ ಬಗ್ಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ನ ಹೊರಗಡೆ ಅಥವಾ ಡಿಪೋಗಳಲ್ಲಿ ಜನರಿಗೆ ಕಾಣುವಂತೆ ಜಾಹೀರಾತುಗಳನ್ನು ಹಾಕಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

Share this article