ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್‍ಯಾಂಕ್ ಪಡೆದ ಧನಂಜಯಗೆ ಅಭಿನಂದನೆ

KannadaprabhaNewsNetwork |  
Published : Mar 09, 2026, 01:45 AM IST
8ಕೆಎಂಎನ್ ಡಿ15 | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಇಬ್ಬರು ಪ್ರತಿಭಾವಂತ ಯುವಕರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಇತಿಹಾಸ ದಾಖಲಿಸಿ ಪೋಷಕರು ಮತ್ತು ಜಿಲ್ಲೆಗೆ ಕೀರ್ತಿ ತಂದಿರುವುದು ಅತ್ಯಂತ ಶ್ಲಾಘನೀಯ. ಅಲ್ಲದೇ, ನನ್ನ ಕುಟುಂಬದ ಸದಸ್ಯರೇ ಮಹತ್ವದ ಸಾಧನೆ ಮಾಡಿರುವಷ್ಟು ಖುಷಿ ತಂದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜಿಲ್ಲೆಯ ಇಬ್ಬರು ಪ್ರತಿಭಾವಂತ ಯುವಕರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಇತಿಹಾಸ ದಾಖಲಿಸಿ ಪೋಷಕರು ಮತ್ತು ಜಿಲ್ಲೆಗೆ ಕೀರ್ತಿ ತಂದಿರುವುದು ಅತ್ಯಂತ ಶ್ಲಾಘನೀಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಕರಡಹಳ್ಳಿಯ ರೈತ ರಾಮಚಂದ್ರ ಮತ್ತು ಮಂಗಳಮ್ಮ ದಂಪತಿ ಪುತ್ರ ಆರ್.ಧನಂಜಯ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್‍ಯಾಂಕ್ ಪಡೆದು ತೇರ್ಗಡೆ ಹೊಂದಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಗ್ರಾಮದ ಧನಂಜಯ ಅವರ ನಿವಾಸಕ್ಕೆ ಭೇಟಿ ಕೊಟ್ಟು ಅಭಿನಂದಿಸಿದ ಬಳಿಕ ಮಾತನಾಡಿದರು.

ಈ ಹಿಂದೆ ತಾಲೂಕಿನ ಹೆರಗನಹಳ್ಳಿ ಎಚ್.ಎಲ್.ನಾಗೇಗೌಡರು ಐಎಎಸ್ ಅಧಿಕಾರಿಯಾಗಿದ್ದರು. ನಂತರದಲ್ಲಿ ತಾಲೂಕಿನ ಎ.ನಾಗತಿಹಳ್ಳಿಯ ನಿವೃತ್ತ ಡಿಡಿಪಿಐ ಗಂಗಾಧರಗೌಡರ ಪುತ್ರ ಎನ್.ಜಿ.ರವಿಕುಮಾರ್, ಪಿಟ್ಟೆಕೊಪ್ಪಲು ಗ್ರಾಮದ ವಿಶೇಷ ಚೇತನ ಗಿರೀಶ್, ಕರಡಹಳ್ಳಿ ಕೆ.ಎಸ್.ಚಂದನ್‌ಕುಮಾರ್ ಸೇರಿದಂತೆ ಹಲವರು ಐಎಎಸ್, ಐಪಿಎಸ್, ಐಆರ್‌ಎಸ್ ಅಧಿಕಾರಿಗಳಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಕರಡಹಳ್ಳಿ ಬಡಕುಟುಂಬದ ಮುಗ್ದ ರೈತ ರಾಮಚಂದ್ರ ಮತ್ತು ಮಂಗಳಮ್ಮ ಅನಕ್ಷರಸ್ಥರಾಗಿದ್ದರೂ ಕೂಡ ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗಬಾರದೆಂದು ಉತ್ತಮ ಸಂಸ್ಕಾರದೊಂದಿಗೆ ಎಲ್ಲವನ್ನೂ ತ್ಯಾಗ ಮಾಡಿದ್ದಕ್ಕೆ ಪ್ರತಿಫಲವೆಂಬಂತೆ ಆರ್.ಧನಂಜಯ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ದೇಶ ಸೇವೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಕಳೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರಡಹಳ್ಳಿ ಆರ್.ಧನಂಜಯ 554ನೇ ರ್‍ಯಾಂಕ್ ಮತ್ತು ಕೆ.ಆರ್.ಪೇಟೆ ತಾಲೂಕಿನ ಎ.ಎಸ್.ಮುತ್ತೇಶ್‌ಗೌಡ 622ನೇ ರ್‍ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ ಇಬ್ಬರು ಪ್ರತಿಭಾವಂತ ಯುವಕರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ನನ್ನ ಕುಟುಂಬದ ಸದಸ್ಯರೇ ಮಹತ್ವದ ಸಾಧನೆ ಮಾಡಿರುವಷ್ಟು ಖುಷಿ ತಂದಿದೆ ಎಂದರು.

ಈ ಇಬ್ಬರು ಪ್ರತಿಭಾವಂತ ಸಾಧಕರಿಗೆ ಜಿಲ್ಲಾಡಳಿತದಿಂದ ಸನ್ಮಾನ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಸಚಿವರು, ಜನ್ಮ ಕೊಟ್ಟ ತಂದೆ ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ಆರ್.ಧನಂಜಯ ಮತ್ತು ಎ.ಎಸ್.ಮುತ್ತೇಶ್‌ಗೌಡ ಅವರಿಗೆ ರಾಜ್ಯದಲ್ಲಿಯೇ ಕೆಲಸ ಮಾಡುವ ಅವಕಾಶ ದೊರಕಲಿ ಎಂದು ಆಶಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 622ನೇ ರ್‍ಯಾಂಕ್ ಪಡೆದು ತೇರ್ಗಡೆ ಹೊಂದಿರುವ ಕೆ.ಆರ್.ಪೇಟೆ ತಾಲೂಕಿನ ಎ.ಎಸ್. ಮುತ್ತೇಶ್‌ಗೌಡ ಅವರ ನಿವಾಸಕ್ಕೆ ಮಾ.14ರ ಶನಿವಾರ ಭೇಟಿಕೊಟ್ಟು ಅಭಿನಂದಿಸಲಾಗುವುದು ಎಂದರು.

ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಪೋಷಕರಾದ ಮಂಗಳಮ್ಮ ಮತ್ತು ರಾಮಚಂದ್ರ, ಗ್ರಾಪಂ ಮಾಜಿ ಸದಸ್ಯ ಸಿಂಗಾರಿಗೌಡ, ಮನ್ಮುಲ್ ಮಾಜಿ ನಿರ್ದೇಶಕ ತಟ್ಟಹಳ್ಳಿ ನರಸಿಂಹಮೂರ್ತಿ, ಮುಖಂಡರಾದ ಕೆ.ಆರ್.ದಯಾನಂದ್, ಎಸ್.ಗೋವಿಂದಯ್ಯ, ವೆಂಕಟೇಶ್, ಜಯಬೋರೇಗೌಡ, ದೇವೇಗೌಡ, ರಾಮಣ್ಣ, ರಾಜಪ್ಪ, ಕೆ.ಎಂ.ನಾಗರಾಜು, ಕೆ.ಎಂ.ರಾಮು, ರವಿ, ಕುಮಾರ್‌, ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರಿಗೆ ಪ್ರೋತ್ಸಾಹ ಬೇಕು, ಕನಿಕರವಲ್ಲ: ಶೀಲಾ
ಪರೀಕ್ಷೆಗೆ ಭಯಬೇಡ, ಆರೋಗ್ಯದ ಕಡೆಗೂ ಗಮನ ಹರಿಸಿ: ಪಿ.ಎಂ.ನರೇಂದ್ರಸ್ವಾಮಿ