ಪರೀಕ್ಷೆಗೆ ಭಯಬೇಡ, ಆರೋಗ್ಯದ ಕಡೆಗೂ ಗಮನ ಹರಿಸಿ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Mar 09, 2026, 01:45 AM IST
8ಕೆಎಂಎನ್ ಡಿ12 | Kannada Prabha

ಸಾರಾಂಶ

ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ ಹಾಗೂ ಬಿಸಿಯೂಟ ನೀಡಲಾಗುತ್ತಿದೆ. ನಿಮ್ಮ ತಂದೆ ತಾಯಂದಿರಿಗೆ ಮನವರಿಕೆ ಮಾಡಿಕೊಟ್ಟು ನೆರೆಹೊರೆಯ ಮಕ್ಕಳನ್ನು ಸಂಬಂಧಿಕರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ತಿಳಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗುವ ಜೊತೆಗೆ ಆರೋಗ್ಯ ಹಾಳಾಗದಂತೆ ಊಟ, ನಿದ್ದೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಮೂರು ಕೊಠಡಿಗಳ ಮುಂದುವರೆದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ವಿದ್ಯಾರ್ಥಿಗಳ ಜೊತೆ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ, ಈ ಶಾಲೆಗಳಲ್ಲಿ ಸಿಗುತ್ತಿರುವ ಸೌಲಭ್ಯ ಖಾಸಗಿ ಶಾಲೆಗಳಲ್ಲಿ ಇಲ್ಲ ಎಂಬುದನ್ನು ಪೋಷಕರು ಅರಿಯಬೇಕು ಎಂದರು.

ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ ಹಾಗೂ ಬಿಸಿಯೂಟ ನೀಡಲಾಗುತ್ತಿದೆ. ನಿಮ್ಮ ತಂದೆ ತಾಯಂದಿರಿಗೆ ಮನವರಿಕೆ ಮಾಡಿಕೊಟ್ಟು ನೆರೆಹೊರೆಯ ಮಕ್ಕಳನ್ನು ಸಂಬಂಧಿಕರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ತಿಳಿಸಬೇಕು ಎಂದರು.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಗ್ರಾಮೀಣ ಪ್ರದೇಶದ ಮಕ್ಕಳು ಇತರೆ ಖಾಸಗಿ ಶಾಲೆ ಮಕ್ಕಳಿಗೆ ಪೈಪೋಟಿ ನೀಡುವಂತಾಗಲಿ ಎಂಬ ದೂರ ದೃಷ್ಟಿಯ ನಿಟ್ಟುಕೊಂಡು ಕಲಿಕಾ ಯಂತ್ರ ವಿತರಿಸಿದ್ದೇನೆ. ಭವಿಷತ್ತಿನ ಪ್ರಜೆಗಳಾದ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಪ್ರಯತ್ನಿಸಿದ್ದೇನೆ. ಅದನ್ನು ಸದುಪಯೋಗ ಮಾಡಿಕೊಂಡು ಇನ್ನು ಹತ್ತು ದಿನಗಳಲ್ಲಿ ನಿಮ್ಮ ಆರೋಗ್ಯ ಹಾಳಾಗದಂತೆ ಊಟ ನಿದ್ದೆ ಗೂ ಗಮನ ನೀಡಿ ಪರೀಕ್ಷೆ ಭಯ ಬಿಟ್ಟು ಅಭ್ಯಾಸ ಮಾಡಿ ಉತ್ತಮ ಫಲಿತಾಂಶದೊಂದಿಗೆ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಮುಖಂಡರಾದ ಕುಂತೂರ್ ಗೋಪಾಲ್, ಚಂದ್ರಕುಮಾರ್, ಮರಿಸ್ವಾಮಿ, ಜೀವನ್ ಕುಮಾರ್, ಮುಖ್ಯ ಶಿಕ್ಷಕರಾದ ಕುಳ್ಳಪ್ಪ ಸೇರಿದಂತೆ ಇತರರು ಇದ್ದರು.

ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕಾರ್ಯಕ್ರಮಗಳು ಸಹಕಾರಿ: ಮಂಜುನಾಥ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ವೈಜ್ಞಾನಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲೂಕಿನ ವಿಠಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಮಹಾಸಭೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನದ ಫಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಹೊಸ ಆವಿಷ್ಕಾರಗಳೊಂದಿಗೆ ನಾಗರಿಕ ಸಮಾಜಕ್ಕೆ ಅಗತ್ಯ ಸಂಶೋಧನೆಗಳನ್ನು ಮಾಡುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳನ್ನು ಹೆಣ್ಣು- ಗಂಡು ಎಂದು ಭೇದ- ಭಾವ ಮಾಡದೆ ಪೋಷಕರು ಸಮಾನವಾಗಿ ಶಿಕ್ಷಣ ಕೊಡಿಸಿ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ವಿಠಲಾಪುರ ಕ್ಲಸ್ಟರ್ ವ್ಯಾಪ್ತಿಯ ಸಿಆರ್‌ಪಿ ಮಹೇಶ್ ಮಾತನಾಡಿ, ಹಳ್ಳಿಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಸರ್ಕಾರ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಪೋಷಕರು ಶಾಲೆ ಮತ್ತು ತಮ್ಮ ಮಕ್ಕಳ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಿ ಸಾಧನೆಗೆ ನೆರವಾಗಬೇಕು ಎಂದು ತಿಳಿಸಿದರು.

ಇಸಿಒ ಸುರೇಶ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯ ಸಾಮರ್ಥ್ಯ ಅನಾವರಣ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ತರಬೇತಿ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೈಲೇಂದ್ರ, ಉಪಾಧ್ಯಕ್ಷೆ ಭುವನೇಶ್ವರಿ, ಸದಸ್ಯರಾದ ಯೋಗೇಶ್, ಪ್ರಸನ್ನ, ರಮೇಶ್, ಸುಪ್ರೀತಾ, ಸೌಮ್ಯ, ರಜನಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ, ಸಹಶಿಕ್ಷಕರಾದ ರಾಮಕೃಷ್ಣೇಗೌಡ, ಸೌಮ್ಯ, ಚಂಚಲಾ, ಗಿರೀಶ್, ಗೀತಾ, ನಿಶ್ಚಿತಾ, ದಾಕ್ಷಾಯಿಣಿ, ದಿವ್ಯಾ, ಶೃತಿ, ಸುಪ್ರಿಯಾ ಹಾಗೂ ರಕ್ಷಿತಾ ಸೇರಿದಂತೆ ಶಾಲಾ ಮಕ್ಕಳ ನೂರಾರು ಪೋಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರಿಗೆ ಪ್ರೋತ್ಸಾಹ ಬೇಕು, ಕನಿಕರವಲ್ಲ: ಶೀಲಾ
ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್‍ಯಾಂಕ್ ಪಡೆದ ಧನಂಜಯಗೆ ಅಭಿನಂದನೆ