ಸುಳ್ಳನ್ನು ಸತ್ಯ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ: ಬಲ್ಲಾಹುಣಿಸಿ ರಾಮಣ್ಣ

KannadaprabhaNewsNetwork | Published : Feb 9, 2024 1:46 AM

ಸಾರಾಂಶ

ಕಾಂಗ್ರೆಸ್ ಅಕ್ಕಿ ಕುರಿತು ಭಂಡತನದ ಪ್ರಚಾರವನ್ನು ಮಾಡಿದೆ. ಸುಳ್ಳನ್ನು ಸತ್ಯ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎಂದು ಬಲ್ಲಾಹುಣ್ಸಿ ರಾಮಣ್ಣ ತಿಳಿಸಿದರು.

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ರಾಜ್ಯದ ಜನತೆಯನ್ನು ಯಾಮಾರಿಸಿ ಅಧಿಕಾರ ಪಡೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಾಟೀಲ್ ಚನ್ನಬಸವನಗೌಡ ಆರೋಪಿಸಿದರು.

ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣಮಂಟಪದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಮತ್ತು ಗ್ರಾಮ ಅಭಿಯಾನ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ಯಾರಂಟಿಗಳನ್ನು ನೀಡುವ ಭರದಲ್ಲಿ ಕಾಂಗ್ರೆಸ್ ಅಭಿವೃದ್ಧಿಯನ್ನು ಮರೆತಿದೆ. ರಾಜ್ಯ ಸರ್ಕಾರ ಲೋಕಸಭೆ ಚುನಾವಣೆ ಬಳಿಕ ಪತನಗೊಳ್ಳಲಿದೆ. ಹಂಪಿ ಉತ್ಸವ ಸರಿಯಾಗಿ ಆಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಸಜ್ಜಿತ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ. ಅವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಕಾಂಗ್ರೆಸ್ ಅಕ್ಕಿ ಕುರಿತು ಭಂಡತನದ ಪ್ರಚಾರವನ್ನು ಮಾಡಿದೆ. ಸುಳ್ಳನ್ನು ಸತ್ಯ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ದೇಶದ ೮೦ ಕೋಟಿ ಜನರಿಗೆ ಕೇಂದ್ರದ ಅಕ್ಕಿ ಸಿಗ್ತಿದೆ. ಮೇಕ್ ಇನ್ ಇಂಡಿಯಾ, ಮುದ್ರಾ ಯೋಜನೆ, ರೈಲ್ವೆ ಅಭಿವೃದ್ಧಿ, ಜನೌಷಧ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಒಳತಿಕ್ಕಾಟಗಳು ಪ್ರಾರಂಭವಾಗಿದ್ದು, ಅಧಿಕಾರವನ್ನು ಪೂರ್ಣಗೊಳಿಸುವುದಿಲ್ಲ ಎಂದರು.

ಇದೇ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರಾಗಿ ತಾಪಂ ಮಾಜಿ ಸದಸ್ಯ ಬೆಣ್ಣಿಕಲ್ಲು ಪ್ರಕಾಶ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ವೀರೇಶ್ವರ ಸ್ವಾಮಿ ಪಕ್ಷದ ಧ್ವಜ ಹಸ್ತಾಂತರಿಸಿದರು. ಯುವ ಮೋರ್ಚಾದ ರಾಜಲಕ್ಷ್ಮಿ ಉಪನ್ಯಾಸ ನೀಡಿದರು.

ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪೂಜಪ್ಪ, ತಾಪಂ ಮಾಜಿ ಸದಸ್ಯ ನೇತಾಜಿಗೌಡ, ಗ್ರಾಮಚಲೋ ಸಂಚಾಲಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಭದ್ರವಾಡಿ ಚಂದ್ರಶೇಖರ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೃಷ್ಣನಾಯ್ಕ, ಮಂಡಲ ಸಂಚಾಲಕ ನರೇಗಲ್ ಮಲ್ಲಿಕಾರ್ಜುನ, ಕೊಟ್ರೇಶ, ಕೊಟ್ಟೂರು ನಗರಘಟಕ ಅಧ್ಯಕ್ಷ ಭರಮನಗೌಡ, ಮಾಜಿ ಅಧ್ಯಕ್ಷ ನರೇಗಲ್ ಕೊಟ್ರೇಶ, ಮುಖಂಡರಾದ ರಾಘವೇಂದ್ರಶೆಟ್ಟಿ, ಮಲ್ಲಿಕಾರ್ಜುನ, ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ, ಮಾಲವಿ ಮಂಜುನಾಥ ನಿರ್ವಹಿಸಿದರು.

Share this article