ಕಾರವಾರ: ಕಳೆದ ಎರಡು ತಿಂಗಳಿನಿಂದ ದಣಿವರಿಯದೆ ಇಡೀ ಉತ್ತರಕನ್ನಡ ಕ್ಷೇತ್ರ ಸಂಚರಿಸಿ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಸದ್ಯ ಖಾನಾಪುರದ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಮಂಗಳವಾರವಷ್ಟೇ ಮತದಾನ ಮುಗಿದಿದೆ. ಮತದಾರರು ತಮ್ಮ ಅಭಿಪ್ರಾಯಗಳನ್ನು ಮತಯಂತ್ರದಲ್ಲಿ ಭದ್ರವಾಗಿಸಿದ್ದಾರೆ. ಜೂ. 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ದಿನದವರೆಗೆ ಮತಗಟ್ಟೆ ಓಡಾಟ, ಕಾರ್ಯಕರ್ತರ ಭೇಟಿ, ದೇಗುಲಗಳ ಭೇಟಿ ನಡೆಸುತ್ತಿದ್ದ ಡಾ. ಅಂಜಲಿ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ.
ಮತದಾನ ಮುಗಿದಿರುವುದರಿಂದ ಸದ್ಯ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದಾರೆ. ಹೀಗಾಗಿ ಖಾನಾಪುರದ ಡಾ. ಅಂಜಲಿ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಆಪ್ತರು, ಕುಟುಂಬಸ್ಥರು ಭೇಟಿ ನೀಡಿ ಮಾತಿಗಿಳಿಯುತ್ತಿದ್ದಾರೆ. ಬಂದವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅಲ್ಲದೇ ಪತ್ರಿಕೆಗಳ ಓದುವತ್ತ ಹೆಚ್ಚು ಗಮನ ಹರಿಸುತ್ತಿರುವುದು ಕಂಡುಬಂತು.