ಎಸ್ಪಿಗೆ ಮನವಿ ಸಲ್ಲಿಕೆ । ಪೊಲೀಸ್ ಬಂಧನದ ವೇಳೆ ಮಾಧ್ಯಮಗಳಿಗೆ ಹೇಳಿಕೆ ಆರೋಪ । ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅಗ್ರಹ
ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ನಾಲ್ವರು ಸಚಿವರ ವಿರುದ್ಧ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿರುವ ಬಗ್ಗೆ ಕ್ರಮ ಕೈಗೊಂಡು ತನಿಖೆ ನಡೆಸುವಂತೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ಹಾಗೂ ಪಕ್ಷದ ಮುಖಂಡರಾದ ಬನವಾಸೆ ರಂಗಸ್ವಾಮಿ ಮಾತನಾಡಿ, ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ಪೆನ್ಡ್ರೈವ್ ವಿಚಾರಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿರುದ್ಧ ಇದೇ ಪೆನ್ಡ್ರೈವ್ ವಿಚಾರವಾಗಿ ಆರೋಪ ಮಾಡಿರುವ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ವಿರುದ್ಧ ಸಹ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಆರೋಪಿ ದೇವರಾಜೇಗೌಡ ಈಗಾಗಲೇ ದಸ್ತಗಿರಿ ಆಗಿದ್ದಾರೆ. ಮೂರು ದಿನಗಳ ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಬಳಿಕ ಕಳೆದ ಮೂರು ದಿನಗಳ ಹಿಂದೆ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಲು ದೇವರಾಜೇಗೌಡ ಅವರನ್ನು ಕರೆತಂದ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ನಾಲ್ವರು ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದರು.ಅಲ್ಲದೆ ೧೦೦ ಕೋಟಿ ರು. ಆಫರ್ ಕೊಟ್ಟಿದ್ದರು. ೫ ಕೋಟಿ ರು. ಅಡ್ವಾನ್ಸ್ ಆಗಿ ಕಳುಹಿಸಿದ್ದರು ಎಂದು ಮಾಡಿರುವ ಆರೋಪವು ಕೇವಲ ಕಲ್ಪಿತವಾದ ಮತ್ತು ಸೃಷ್ಟಿ ಮಾಡಿದ ಹೇಳಿಕೆಯಾಗಿದೆ. ಈ ರೀತಿ ಹೇಳಿಕೆ ನೀಡಲು ಈ ವ್ಯಕ್ತಿಗೆ ಪ್ರೇರಣೆ ನೀಡಿದವರು ಅಥವಾ ಆತನ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿರುವ ವ್ಯಕ್ತಿ ಯಾರು? ಇದರಲ್ಲಿ ಯಾರ ಕೈವಾಡ ಇದೆ ಎಂದು ತಿಳಿಯಬೇಕಿದೆ ಎಂದು ಒತ್ತಾಯಿಸಿದರು.
‘ಈ ರೀತಿ ಹೇಳಿಕೆ ನೀಡಲು ಪ್ರೇರಣೆ ನೀಡಿದವರು ಯಾರೆಂದು ಗೊತ್ತಾಗಬೇಕಾಗಿದೆ. ಜೈಲಿನಲ್ಲಿದ್ದ ಕಾಲಕ್ಕೆ ಮತ್ತು ಪೊಲೀಸ್ ಕಸ್ಟಡಿಯಲ್ಲಿದ್ದ ಕಾಲಕ್ಕೆ ದೇವರಾಜೇಗೌಡರನ್ನು ಯಾರು ಯಾರು ಭೇಟಿ ಮಾಡಿದ್ದಾರೆ. ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪ್ರಭಾವಿ ವ್ಯಕ್ತಿಗಳು ಯಾರು? ಯಾವ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂಬ ಬಗ್ಗೆ ಕೂಲಂಕಶವಾಗಿ ತನಿಖೆ ಕೈಗೊಂಡು ನಿಜಾಂಶವನ್ನು ತಿಳಿಯಬೇಕು’ ಮನವಿ ಮಾಡಿದರು.ಸುಳ್ಳು ಹೇಳಿಕೆಗಳನ್ನು ಹೇಳುವ ಮೂಲಕ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಈ ವ್ಯಕ್ತಿಯನ್ನು ಬ್ರೈನ್ ಮ್ಯಾಪಿಂಗ್ ಮಾಡುವ ಮೂಲಕ ಸತ್ಯಾಂಶ ತಿಳಿಯಬೇಕು. ಮಾಧ್ಯಮಗಳಿಗೆ ಹೇಳಿಕೆ ನೀಡಲು ಅನುವು ಮಾಡಿಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಕೂಡ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ ಬನವಾಸೆ, ಗೊರೂರು ರಂಜಿತ್, ರಘು, ಚಂದ್ರಶೇಖರ್, ಶಿವಕುಮಾರ್, ಅಶು ಆಸೀಪ್, ಸುಜೀತ್ ನಾರಾಯಣ್, ಪ್ರಕಾಶ್ ಇದ್ದರು. ನ್ಯಾಯಾಂಗ ಬಂಧನಕ್ಕೆ ದೇವರಾಜೇಗೌಡಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡರನ್ನು ಪೆನ್ಡ್ರೈವ್ ಪ್ರಕರಣದಡಿ ವಿಚಾರಣೆಗೆಂದು ವಶಕ್ಕೆ ಪಡೆದಿದ್ದ ಎಸ್ಐಟಿ ಸೋಮವಾರ ಅವಧಿ ಮುಗಿದ ಕಾರಣ ನ್ಯಾಯಾಲಯದ ಸುಪರ್ದಿಗೆ ವಹಿಸಿದೆ.ವಕೀಲ ದೇವರಾಜೇಗೌಡ ಅವರ ವಿರುದ್ಧ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯದ ಕಾರಣಕ್ಕಾಗಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಬಳಿಕ ಹೊಳೆನರಸೀಪುರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ನಂತರದಲ್ಲಿ ಸಂಸದ ಪ್ರಜ್ವಲ್ ಅವರ ರಾಸಲೀಲೆ ಪ್ರಕರಣದಡಿ ಪೆನ್ಡ್ರೈವ್ ಪ್ರಚಾರದ ಆರೋಪದಲ್ಲಿ ಎಸ್ಐಟಿ ತಂಡ ದೇವರಾಜೇಗೌಡರನ್ನು ವಶಕ್ಕೆ ಪಡೆದಿತ್ತು. ಅವಧಿ ಮುಗಿದ ಕಾರಣಕ್ಕೆ ಎಸ್ಐಟಿ ದೇವರಾಜೇಗೌಡರನ್ನು ಹಾಸನದ 5 ನೇ ಅಧಿಕ ಸಿವಿಲ್ ನ್ಯಾಯಾಲಯದ ಎದುರು ಹಾಜರುಪಡಿಸಿತು. ಮೇ.24 ವರೆಗೆ ದೇವರಾಜೇಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪೊಲೀಸರು ದೇವರಾಜೇಗೌಡ ಅವರನ್ನು ಜಿಲ್ಲಾ ಉಪ ಕಾರಾಗೃಹಕ್ಕೆ ಕರೆದೊಯ್ದರು.