ಕನ್ನಡಪ್ರಭ ವಾರ್ತೆ ಕುಶಾಲನಗರ ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ ಎನಿಸಿಕೊಂಡಿದೆ ಎಂದು ಮಾಜಿ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಪಕ್ಷದ ಕಾರ್ಯಕರ್ತರೊಂದಿಗೆ ಕುಶಾಲನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯದ ಯಾವುದೇ ನಗರ ಪಟ್ಟಣಗಳ ರಸ್ತೆಗಳು ಸೇರಿದಂತೆ ಹೆದ್ದಾರಿ ರಸ್ತೆಗಳ ನಿರ್ವಹಣೆ, ಅಭಿವೃದ್ಧಿ ಕಾಮಗಾರಿ ನಡೆಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತಾಳುತ್ತಿದೆ. ರಸ್ತೆಗಳು ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಹಿಂದಿನ ಸರ್ಕಾರ ತಮ್ಮ ಅವಧಿಯಲ್ಲಿ ಕೊಡಗು ಜಿಲ್ಲೆಗೆ ರಸ್ತೆ ಅಭಿವೃದ್ಧಿಗಾಗಿ 300 ಕೋಟಿ ರು. ಗಳನ್ನು ಬಿಡುಗಡೆ ಮಾಡಿತ್ತು . ಪ್ರಸಕ್ತ ಸರ್ಕಾರ ಪುಕ್ಕಟೆ ಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ರಂಜನ್ ಅವರು ಅರಣ್ಯೀಕರಣ ಹೆಸರಿನಲ್ಲಿ ಏಕಾಏಕಿ ಸಿ ಅಂಡ್ ಡಿ ಲ್ಯಾಂಡ್ ವರ್ಗಾವಣೆ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು. ತಮ್ಮ ಅವಧಿಯಲ್ಲಿ ನಿರ್ಮಾಣಗೊಂಡ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮಗಳ ಸಂದರ್ಭ ಕನಿಷ್ಠ ಮಾಜಿ ಶಾಸಕರನ್ನು ಆಹ್ವಾನಿಸುವ ಕನಿಷ್ಠ ಕಾಳಜಿ ಕೂಡ ಈಗಿನ ಆಡಳಿತಕ್ಕೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಕುಶಾಲನಗರ ಪ್ರವಾಸಿ ಮಂದಿರ ರಸ್ತೆಯಲ್ಲಿ ರಂಜನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಪಕ್ಷದ ಪ್ರಮುಖರು ಗುಂಡಿ ಮುಚ್ಚುವ ಕಾರ್ಯ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿದರು. ನಂತರ ಕುಶಾಲನಗರ ಮಡಿಕೇರಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಂಡಲ ಅಧ್ಯಕ್ಷರಾದ ಎಂ ಎಲ್ ಗೌತಮ್, ಕುಶಾಲನಗರ ನಗರಾಧ್ಯಕ್ಷ ಎಂ ಎಂ ಚರಣ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್, ಕೆ ಟಿ ಗಿರೀಶ್ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್, ಪ್ರಮುಖರಾದ ಎಂ ಡಿ ಕೃಷ್ಣಪ್ಪ, ಎಂ ಎನ್ ಕುಮಾರಪ್ಪ, ಪುಂಡರಿಕಾಕ್ಷ, ವೈಶಾಕ್, ಸಚಿನ್ ಎಂ ವಿ ನಾರಾಯಣ, ಶರತ್ ನವನೀತ್, ಅವಿನಾಶ್, ಶಿವರಾಜ್, ಸುಮನ್ ಪುರಸಭೆ ಸದಸ್ಯರಾದ ಅಮೃತರಾಜ್ ಮತ್ತಿತರರು ಇದ್ದರು.