ಕಾಂಗ್ರೆಸ್‌ ಸರ್ಕಾರ ಬಡವರ ಪರ: ಶಾಸಕ ದೇಶಪಾಂಡೆ

KannadaprabhaNewsNetwork |  
Published : May 18, 2025, 11:45 PM IST
18ಎಚ್.ಎಲ್.ವೈ-1: ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 20ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಗ್ರಾಮ ಪಂಚಾಯತ ನೂತನ ಕಟ್ಟಡ ಕಾಮಗಾರಿಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರ ಪರವಾಗಿಯೇ ಶ್ರಮಿಸುತ್ತಿದೆ

ಹಳಿಯಾಳ: ದೇಶದಲ್ಲಿನ ಕಡು ಬಡವರಿಗೆ ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿ ಪರಿಣಮಿಸಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರ ಪರವಾಗಿಯೇ ಶ್ರಮಿಸುತ್ತಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಗ್ರಾಮ ಪಂಚಾಯತ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೆರಿಸಿ ಅವರು ಮಾತನಾಡಿದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಬಡ ಕುಟುಂಬಗಳಿಗೆ 100 ದಿನ ಉದ್ಯೋಗ ನೀಡಿ ಜನರ ಕೈಗೆ ಕೆಲಸವನ್ನು ನೀಡುವುದರ ಜೊತೆಯಲ್ಲಿ ಈ ಯೋಜನೆಯಡಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಉದ್ಯೋಗದ ಜೊತೆಯಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಮೂಹಿಕ ಸಹಭಾಗಿತ್ವದ ಪರಿಕಲ್ಪನೆಯನ್ನು ಮೂಡಿಸುವಲ್ಲಿ ಈ ಯೋಜನೆಯು ಯಶಸ್ವಿಯಾಗಿದೆ ಎಂದರು. ಯುವಕರು ತಮ್ಮ ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಚ್ಛತೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕರು ವಸತಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಟ್ಟಾ ವಿತರಿಸಿ, ಗುಣಮಟ್ಟದ ಮನೆ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ಶಿಥಿಲಾವ್ಯಸ್ಥೆಗೆ ತಲುಪಿರುವ ಗ್ರಾಮದಲ್ಲಿನ ಆರೋಗ್ಯ ಇಲಾಖೆಯ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಇಒ ವಿಲಾಸರಾಜ್, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಜಿಪಂ ಎಇಇ ಸತೀಶ್ ಆರ್, ಮಂಗಳವಾಡ ಗ್ರಾಪಂ ಅಧ್ಯಕ್ಷ ತಾನಾಜಿ ಬನೋಶಿ, ಉಪಾಧ್ಯಕ್ಷೆ ಅನುಸೂಯಾ ಮೇತ್ರಿ, ಸದಸ್ಯರಾದ ಸಂಭಾಜಿ ವಾಲೇಕರ, ಪಾಂಡುರಂಗ ಕಮ್ಮಾರ, ಹೊಳೆಪ್ಪಾ ಗುಂಡುಪಕರ, ಮಂಜುನಾಥ ಪಾಟೀಲ, ಸಾವಿತ್ರಿ ವಾಲೇಕರ, ಪಾಂಡುರಂಗ ಚೋರಲೇಕರ, ಸವಿತಾ ಪಾಟೀಲ, ಯಲ್ಲವವಾ ಮಡಿವಾಳ, ಮಾಸಾಬಿ ತಂಬೋಲಿ, ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಗ್ರಾಮ ಆಡಳಿತಾಧಿಕಾರಿ ಸಂತೋಷ ಮಠಪತಿ, ಪಿಡಿಒ ಸತೀಶ್ ಪೂಜಾರ ಹಾಗೂ ಗ್ರಾಮದ ಹಿರಿಯರು ಇದ್ದರು.

PREV