ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ 68 ವರ್ಷಗಳ ವಯೋಮಾನದ ವೆಂಕಟಲಕ್ಷ್ಮಮ್ಮ ತಮಗೆ ಆಶ್ರಯ ಕಲ್ಪಿಸುವಲ್ಲಿ ಮಗ ಅಶೋಕ್ ಅಸಡ್ಡೆ ಧೋರಣೆ, ಅವಾಚ್ಯ ಶಬ್ದಗಳಿಂದ ನಿಂದನೆಯ ವಿರುದ್ಧ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹೆತ್ತ ತಾಯಿ ಆರೈಕೆಗೆ ಅಸಡ್ಡೆ ತೋರಿದ ಮಗನಿಗೆ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು 10 ಸಾವಿರ ರು. ನೀಡುವುದರ ಜತೆಗೆ ಸ್ವಾಧೀನಾನುಭವದಲ್ಲಿರುವ ಮನೆಯನ್ನು ಬಿಟ್ಟು ಕೊಡಲು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು ಆದೇಶಿಸಿದೆ.

ಹಿರಿಯ ನಾಗರಿಕರ ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಸಂರಕ್ಷಣಾ ಕಾಯ್ದೆ 2007 ರ ಜೀವನ ನಿರ್ವಹಣೆ ಕಲಂ 23 ರ ಅಡಿಯಲ್ಲಿ ಜಿಲ್ಲೆಯ ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ 68 ವರ್ಷಗಳ ವಯೋಮಾನದ ವೆಂಕಟಲಕ್ಷ್ಮಮ್ಮ ತಮಗೆ ಆಶ್ರಯ ಕಲ್ಪಿಸುವಲ್ಲಿ ಮಗ ಅಶೋಕ್ ಅಸಡ್ಡೆ ಧೋರಣೆ, ಅವಾಚ್ಯ ಶಬ್ದಗಳಿಂದ ನಿಂದನೆಯ ವಿರುದ್ಧ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೂರಿನ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ ಡಿ.ಎಚ್‌. ಅಶ್ವಿನ್‌ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ತೊಂದರೆ ಅನುಭವಿಸಲಾಗುತ್ತಿದೆ. ಯಾವುದೇ ಆಶ್ರಯವಿಲ್ಲದೇ ಒಬ್ಬಂಟಿ ಜೀವನ ನಡೆಸಬೇಕಾಗಿದೆ. ಮನೆಯನ್ನು ಮಗ ಅಶೋಕ ತನ್ನ ಹೆಸರಿಗೆ ಮಾಡಿಸಿಕೊಂಡ ಬಳಿಕ ಪಾಲನೆ ಮಾಡುತ್ತಿಲ್ಲ. ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸುವಲ್ಲೂ ಕಡೆಗಣಿಸಲಾಗಿದೆ ಎಂದು ವೆಂಕಟಲಕ್ಷ್ಮಮ್ಮ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳು ಆರೋಪಿಗೆ ನೋಟಿಸ್‌ ನೀಡಿ, ವಿಚಾರಣೆ ಕೈಗೊಂಡರು.

ವೃದ್ಧೆಯ ಅಳಲನ್ನು ಆಲಿಸಿದ ನ್ಯಾಯಾಲಯವು ಆರೋಪಿ ಯಾವುದೇ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ಸಂತ್ರಸ್ಥೆಗೆ ನ್ಯಾಯ ಒದಗಿಸಿದೆ. ಎದುರುದಾರ ನಾದ ಮಗ ಅಶೋಕ್ ಯಾವುದೇ ಕಾರಣಕ್ಕು ಮೇಲ್ಮನವಿದರರಾದ ವೆಂಕಟಲಕ್ಷ್ಮಮ್ಮರನ್ನು ನಿರ್ಲಕ್ಷಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮಾನಸಿಕ, ದೈಹಿಕ ಹಿಂಸೆ ನೀಡುವುದನ್ನು ನಿರ್ಬಂಧಿಸಿದೆ.