ಚನ್ನಪಟ್ಟಣ: ವಿರೋಧ ಪಕ್ಷದವರು ಕುಟುಂಬ ರಾಜಕಾರಣ ಅಂತಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ೧೨ಕ್ಕೂ ಹೆಚ್ಚು ಜನ ಅಪ್ಪ, ಅಣ್ಣ, ತಮ್ಮ ಸೇರಿದಂತೆ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ. ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರದ ಶಾಸಕರು ನಮ್ಮ ಪಕ್ಷ, ಅಭ್ಯರ್ಥಿಗಳ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾರೆ. ೨೦೧೯ರಲ್ಲಿ ನಾನೂ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ರಾಜಕೀಯ ಅನುಭವ ಪಡೆಯಲಿ ಅಂತ ನನಗೆ ಚುನಾವಣೆಗೆ ನಿಲ್ಲಿಸಿದ್ರು. ಆಗಲೂ ನನ್ನ ಪ್ರತಿಪಕ್ಷದವರ ವಿರುದ್ಧ, ಒಂದೇ ಒಂದು ಮಾತೂ ಮಾತನಾಡಲಿಲ್ಲ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಯಾಕೆ ಸೋತ್ರು ಅಂತ ಪ್ರಶ್ನೆ ಇದೆ. ನಾವು ಇದೇ ಬಿಡದಿಯಲ್ಲೇ ವಾಸ ಮಾಡ್ತಿದ್ದೇವೆ. ನಮ್ಮ ಚುನಾವಣಾ ಗುರುತಿನ ಚೀಟಿ ಕೂಡಾ ಇಲ್ಲಿಯೇ ಇದೆ. ನಾವು ರಾಮನಗರ ಬಿಟ್ಟು ಎಲ್ಲೂ ಹೋಗಲ್ಲ ಎಂದರು.
ವಿರೋಧ ಪಕ್ಷದವರು ಮತ್ತೊಬ್ಬ ಡಾ.ಮಂಜುನಾಥ್ ಅವರನ್ನ ನಿಲ್ಲಿಸಿದ್ದಾರೆ. ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಿರ್ಮಾಪಕರು, ನಟರು, ಡಾಕ್ಟರ್ ಎಲ್ಲರೂ ಒಂದಾಗಿದ್ದಾರೆ ಅಂದವ್ರೆ. ಒಂದಾಗಿರೋದು ನಾವಲ್ಲ ಕ್ಷೇತ್ರದ ಮತದಾರರು ಒಂದಾಗಿದ್ದಾರೆ ಎಂದು ತಿರುಗೇಟು ನೀಡಿದರು.