ರಾಜ್ಯ ಕಾಂಗ್ರೆಸ್‌ನಲ್ಲಿ 'ಸಿಎಂ'ಗಳ ಕಾಟ: ಮೋದಿ ವ್ಯಂಗ್ಯ

KannadaprabhaNewsNetwork |  
Published : Mar 19, 2024, 12:48 AM ISTUpdated : Mar 19, 2024, 12:02 PM IST
Narendra Modi in Telangana

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ''ಸಿಎಂ''ಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಇವರೆಲ್ಲರ ಮೇಲೆ ದೆಹಲಿಯಲ್ಲಿ ಕಲೆಕ್ಷನ್‌ ಮಿನಿಸ್ಟರ್‌(ಸಿಎಂ) ಕೂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಇವರೆಲ್ಲರ ಮೇಲೆ ದೆಹಲಿಯಲ್ಲಿ ಕಲೆಕ್ಷನ್‌ ಮಿನಿಸ್ಟರ್‌(ಸಿಎಂ) ಕೂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಸರ್ಕಾರ ನಡೆಸಲೂ ಅವರ ಬಳಿ ಹಣ ಇಲ್ಲ. ಇದರ ಜತೆಗೆ ಲೂಟಿ ವಿಚಾರದಲ್ಲೂ ರಾಜ್ಯ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ನಡೆಯುತ್ತಿದೆ. 

ಇಲ್ಲಿ ಸಿಎಂ ಆಗಲು ಕಾಯುತ್ತಿರುವವರು, ಸಿಎಂ ಸ್ಥಾನದ ಆಕಾಂಕ್ಷಿಗಳ ಜತೆಗೆ ಸೂಪರ್‌ ಸಿಎಂ ಹಾಗೂ ಶ್ಯಾಡೋ ಸಿಎಂ ಕೂಡ ಇದ್ದಾರೆ. ಇಷ್ಟೆಲ್ಲ ಸಿಎಂಗಳ ನಡುವೆ ದೆಹಲಿಯಲ್ಲಿ ಕಲೆಕ್ಷನ್‌ ಮಿನಿಸ್ಟರ್‌ (ಸಿಎಂ) ಕೂಡ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಜನಸೇವೆ ಮಾಡುವುದು ಕಾಂಗ್ರೆಸ್ ಗುರಿಯೇ ಅಲ್ಲ, ಬದಲಾಗಿ ಜನತೆಯನ್ನು ಲೂಟಿ ಮಾಡುವುದು, ತಮ್ಮ ಜೇಬು ತುಂಬಿಸಿಕೊಳ್ಳುವುದ ಅವರ ಧ್ಯೇಯ. 

ಕೇಂದ್ರ ಕಾಂಗ್ರೆಸ್‌ ನಾಯಕರು ಕರ್ನಾಟಕವನ್ನು ಎಟಿಎಂ ಆಗಿ ಮಾಡಿ ಮಾಡಿಕೊಂಡಿದ್ದಾರೆ. ಕರ್ನಾಟಕದ ಜನ ಭ್ರಷ್ಟಾಚಾರಕ್ಕೆ ಭಾರೀ ಬೆಲೆ ತೆರುತ್ತಿದ್ದಾರೆ. 

ಈ ಕಾರಣಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಸಾರ್ವಜನಿಕ ಆಕ್ರೋಶ ಇದೆ ಎಂದರು.ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ. 

ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಅವರ ವಾರಸುದಾರರಂತಿದ್ದಾರೆ. ಮೊದಲು ದೇಶವನ್ನು ಒಡೆದರು. ಧರ್ಮ, ಜಾತಿಯನ್ನು ಒಡೆದರು. ಈಗ ಮತ್ತೆ ದೇಶವನ್ನು ಒಡೆಯುವ ಅಪಾಯಕಾರಿ ಆಟಕ್ಕೆ ಇಳಿದಿದ್ದಾರೆ ಎಂದರು.

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಅವರ ಪ್ರತ್ಯೇಕ ರಾಜ್ಯದ ಹೇಳಿಕೆ ಕುರಿತೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಆ ರೀತಿಯ ಹೇಳಿಕೆ ನೀಡಿದ ಸಂಸದನನ್ನು ಉಚ್ಚಾಟನೆ ಮಾಡುವ ಬದಲು ಅವರನ್ನು ಕಾಂಗ್ರೆಸ್‌ ರಕ್ಷಿಸುತ್ತಿದೆ. 

ಕರ್ನಾಟಕ ಯಾವತ್ತೂ ಈ ರೀತಿಯ ರಾಜಕೀಯವನ್ನು ಸಹಿಸಿಕೊಳ್ಳುವುದಿಲ್ಲ. ಅಂಥವರನ್ನು ಈ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

ಸುಳ್ಳು ಹೇಳುವುದೇ ಅಜೆಂಡಾ: ಕಾಂಗ್ರೆಸ್‌ ಗೆ ಬೆಳಗಿನಿಂದ ಸಂಜೆಯವರೆಗೂ ಸುಳ್ಳು ಹೇಳುವುದೇ ಕೆಲಸವಾಗಿದೆ. ಅದೇ ಅವರ ಅಜೆಂಡಾ ಆಗಿದೆ. ಒಂದು ಸುಳ್ಳು ಮುಚ್ಚಲು ಮತ್ತೊಂದು ಸುಳ್ಳು, ಹೋದಲ್ಲಿ ಬಂದಲ್ಲಿ ಸುಳ್ಳು ಹೇಳುವುದು, ಸಿಕ್ಕಿಬಿದ್ದಾಗ ತಮ್ಮ ತಪ್ಪನ್ನು ಬೇರೊಬ್ಬರ ಮೇಲೆ ಹೊರಿಸುವುದು ಕಾಂಗ್ರೆಸ್ ಕೆಲಸ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಒಮ್ಮೆ ಕೇಂದ್ರ ಸರ್ಕಾರವನ್ನು ದೂಷಿಸಿದರೆ, ಮತ್ತೊಮ್ಮೆ ಮೋದಿಯನ್ನು ದೋಷಿಸುವುದೇ ಅವರ ಕಾಯಕವಾಗಿದೆ ಎಂದು ಮೋದಿ ಹೇಳಿದರು.

ಎಲ್ಲೆಡೆ ಬಿಜೆಪಿಗೆ ದೊರಕುತ್ತಿರುವ ಅಪಾರ ಬೆಂಬಲದಿಂದಾಗಿ ಐಎನ್‌ ಡಿಐಎ ಮೈತ್ರಿಕೂಟದ ನಿದ್ದೆ ಹಾರಿಹೋಗಿದೆ ಎಂದು ಛೇಡಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ‘ನಾಲ್ಮೂರು ಮೀರಿ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ಎನ್‌ಡಿಎ ಒಕ್ಕೂಡ ಬೆಂಬಲಿಸುವಂತೆ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ