ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೇ ಅವಮಾನಿಸಿದ ಕಾಂಗ್ರೆಸ್: ಮಾಜಿ ಸಚಿವ ಮಹೇಶ್

KannadaprabhaNewsNetwork | Published : May 4, 2024 12:42 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ ಪಂಚ ಗ್ಯಾರಂಟಿಗಳು. ಆದರೆ, ಈ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಜನತೆ ಯೋಚಿಸಬೇಕು.

ಸಂಡೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡದೇ ಅವರನ್ನು ಅವಮಾನಿಸಿದ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಜನ್ಮಸ್ಥಳ ಸೇರಿದಂತೆ ಪಂಚತೀರ್ಥಗಳನ್ನು ಅಭಿವೃದ್ಧಿ ಪಡಿಸಿ ಗೌರವ ನೀಡಿದ ಬಿಜೆಪಿ ಗೆಲ್ಲಿಸುವಂತೆ ಮಾಜಿ ಸಚಿವ ಎನ್.ಮಹೇಶ್ ಮನವಿ ಮಾಡಿದರು.ಪಟ್ಟಣದ ಕಾರ್ತಿಕೇಯ ಘೋರ್ಪಡೆ ಅವರ ಬಂಗಲೆಯ ಆವರಣದಲ್ಲಿ ಶುಕ್ರವಾರ ಬಿಜೆಪಿ ಸಂಡೂರು ಮಂಡಲದಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಸಮಾವೇಶ ಹಾಗೂ ಮತದಾನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ ಪಂಚ ಗ್ಯಾರಂಟಿಗಳು. ಆದರೆ, ಈ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಜನತೆ ಯೋಚಿಸಬೇಕು. ಗಂಡು ಮಕ್ಕಳಿಂದ ಕಸಿದು ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿದ್ದ ₹೨೫,೦೦೦ ಕೋಟಿಯನ್ನು ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಳಸುತ್ತಿದೆ. ಜನತೆ ತಮ್ಮ ಆಲೋಚನಾ ಕ್ರಮ ಬದಲಾಯಿಸಿಕೊಳ್ಳದಿದ್ದರೆ, ಬದುಕು ಬದಲಾಗುವುದಿಲ್ಲ. ನರೇಂದ್ರ ಮೋದಿ ದೇಶದ ಅರ್ಥ ವ್ಯವಸ್ಥೆಯನ್ನು ಪ್ರಪಂಚದಲ್ಲಿ ಐದನೇ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ವಿಶ್ವದಲ್ಲಿಯೇ ಬಲಿಷ್ಟ ರಾಷ್ಟ್ರವನ್ನಾಗಿಸುವ ಗುರಿ ಹಾಕಿಕೊಂಡಿದ್ದಾರೆ. ಮತದಾರರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ, ನರೇಂದ್ರಮೋದಿಯವರ ಕೈಯ್ಯನ್ನು ಬಲಪಡಿಸಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿಗಳು ಜನತೆಗೆ ಸರಿಯಾಗಿ ತಲುಪುತ್ತಿಲ್ಲ. ಚುನಾವಣೆಯ ನಂತರ ಇವು ನಿಲ್ಲಬಹುದು. ರಾಜ್ಯದಲ್ಲಿ ಹಣಕಾಸಿನ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ರಾಮಕೃಷ್ಣ, ಮುಖಂಡರಾದ ಯರ‍್ರಿಸ್ವಾಮಿ ಕರಡಿ, ಎಫ್.ಕುಮಾರನಾಯ್ಕ, ಸತೀಶ್ ಹೆಗಡೆ, ವೀರೇಶ್, ವಿ.ಶಂಕರ್, ಆರ್.ಟಿ. ರಘು, ದರೋಜಿ ರಮೇಶ್, ಚಂದ್ರಶೇಖರ, ರಾಜೇಶ್ ಹೆಗಡೆ, ಚಂದ್ರು, ತಾಯಪ್ಪ ಉಪಸ್ಥಿತರಿದ್ದರು.

Share this article