ತೊದಲುವವರಿಗೆ ಸೂಕ್ತ ಚಿಕಿತ್ಸೆ, ತರಬೇತಿ ನೀಡಿದರೆ ಎಲ್ಲರಂತೆ ಮಾತನಾಡಲು ಸಾಧ್ಯ

KannadaprabhaNewsNetwork |  
Published : May 04, 2024, 12:42 AM IST
20 | Kannada Prabha

ಸಾರಾಂಶ

ತೊದಲಿನ ಸಮಸ್ಯೆ ವಂಶವಾಹಿಯಿಂದ ಬರುತ್ತದೆ. ಯಾವ ವಸ್ತು ಎಷ್ಟು ತೂಕವಿದೆ, ಎಷ್ಟು ಬಲ ಹಾಕಬೇಕೆಂಬ ಪ್ರಜ್ಞೆಯನ್ನು ಮಿದುಳು ಹೊಂದಿರುತ್ತದೆ. ಮಿದುಳಿನ ನರವ್ಯೂಹದಲ್ಲಿ ಸಮಸ್ಯೆ ಬಂದರೆ ಮಾತಿನ ಚಲನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಮಾತು, ಪದಕ್ಕೆ ಬಳಸಬೇಕಾದ ಶಕ್ತಿಯ ಬಗ್ಗೆ ತರಬೇತಿಯನ್ನು ಪಡೆದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ

- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್)

ಫೋಟೋ- 3ಎಂವೈಎಸ್20

----

ಕನ್ನಡಪ್ರಭ ವಾರ್ತೆ ಮೈಸೂರು

ತೊದಲುವ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ, ತರಬೇತಿ ನೀಡಿದರೆ ಎಲ್ಲರಂತೆ ಮಾತನಾಡಲು ಸಾಧ್ಯ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ತಜ್ಞ ಪ್ರೊ.ಎಂ. ಸಂತೋಷ್‌ತಿಳಿಸಿದರು.

ನಗರದ ಎಂಜಿ ರಸ್ತೆಯಲ್ಲಿರುವ ರಾಜೇಂದ್ರ ಭವನದಲ್ಲಿ ಜೆಎಸ್‌ಎಸ್‌ವಾಕ್ ಮತ್ತು ಶ್ರವಣ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ತೊದಲುವಿಕೆ ಚಿಕಿತ್ಸಾ ವಿಧಾನದಲ್ಲಿನ ಪ್ರಗತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ತೊದಲುವಿಕೆಯ ಸಮಸ್ಯೆಯು ನೂರು ಜನರಲ್ಲಿ ಇಬ್ಬರಿಗೆ ಇರುತ್ತದೆ. ಸಿನಿಮಾ, ನಾಟಕಗಳಲ್ಲಿಯೂ ತೊದಲಿನ ಸಮಸ್ಯೆಯವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ತೊದಲಿನ ಸಮಸ್ಯೆ ವಂಶವಾಹಿಯಿಂದ ಬರುತ್ತದೆ. ಯಾವ ವಸ್ತು ಎಷ್ಟು ತೂಕವಿದೆ, ಎಷ್ಟು ಬಲ ಹಾಕಬೇಕೆಂಬ ಪ್ರಜ್ಞೆಯನ್ನು ಮಿದುಳು ಹೊಂದಿರುತ್ತದೆ. ಮಿದುಳಿನ ನರವ್ಯೂಹದಲ್ಲಿ ಸಮಸ್ಯೆ ಬಂದರೆ ಮಾತಿನ ಚಲನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಮಾತು, ಪದಕ್ಕೆ ಬಳಸಬೇಕಾದ ಶಕ್ತಿಯ ಬಗ್ಗೆ ತರಬೇತಿಯನ್ನು ಪಡೆದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ತೊದಲುವಿಕೆ ಬಗೆಗಿನ ಮೂಢನಂಬಿಕೆ ಹಾಗೂ ಆಚರಣೆಗಳು ಪೀಡಿತರ ಆತ್ಮವಿಶ್ವಾಸವನ್ನು ಕುಂದಿಸಿವೆ. ಸಮಸ್ಯೆ ಪೀಡಿತರನ್ನು ಆಸ್ಪತ್ರೆ ಹಾಗೂ ಚಿಕಿತ್ಸೆ ತರಬೇತಿ ಕೇಂದ್ರಕ್ಕೆ ಕರೆದೊಯ್ಯದೇ ಧಾರ್ಮಿಕ ಕೇಂದ್ರಕ್ಕೆ ಕರೆದುಕೊಂಡು ಹೋಗುವುದು, ನಾಲಿಗೆ ಲೇಹ್ಯ ಹಚ್ಚಿಸುವ ಪರಿಪಾಠವನ್ನು ಆರಂಭಿಸುತ್ತಾರೆ. ಇದರಿಂದ ಯಾವುದೇ ಪರಿಹಾರ ಅಸಾಧ್ಯ ಎಂದು ಅವರು ಹೇಳಿದರು.

ವೈದ್ಯರೂ ತೊದಲುವ ಸಮಸ್ಯೆಯುಳ್ಳವರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಮಕ್ಕಳಿದ್ದಾಗಲೇ ಸಮಸ್ಯೆ ಗುರುತಿಸಿ ತರಬೇತಿ ಚಿಕಿತ್ಸೆ ಕೊಡಿಸಿದರೆ ಶೇ.100 ರಷ್ಟು ಬಗೆಹರಿಸಲು ಸಾಧ್ಯ. ನುರಿತ ವಾಕ್ ತಜ್ಞರನ್ನು ಭೇಟಿಯಾಗಬೇಕು. ಸಂಪೂರ್ಣ ಗುಣ ಪಡಿಸಲು ಪೋಷಕರೂ ಕಾಳಜಿ ವಹಿಸುವುದು ಅಗತ್ಯ ಎಂದರು.

ಆರಂಭದಲ್ಲಿಯೇ ಚಿಕಿತ್ಸೆ ನೀಡದಿದ್ದರೆ ವಯಸ್ಕರಾದಾಗ ಹೆಚ್ಚು ಸಮಯ ಬೇಕಾಗುತ್ತದೆ. ತೊಂದರೆಗೆ ಒಳಗಾದವರಲ್ಲಿ ಆತ್ಮವಿಶ್ವಾಸ ಇರುವುದಿಲ್ಲ. ಜೀವನದಲ್ಲಿ ಏನೂ ಸಾಧನೆ ಮಾಡಲಿಲ್ಲವೆಂಬ ಕೊರಗಿರುತ್ತದೆ. ಮಾನಸಿಕ ಖಿನ್ನತೆ, ಭಯದಿಂದ ಇರುತ್ತಾರೆ. ಹೀಗಾಗಿ, ಅವರಲ್ಲಿ ನಡವಳಿಕೆಯ ಬಗ್ಗೆಯೂ ಥೆರಪಿಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಜೆಎಸ್‌ಎಸ್‌ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಬಿ. ಮಂಜುನಾಥ, ಜೆಎಸ್‌ಎಸ್‌ವಾಕ್ ಮತ್ತು ಶ್ರವಣ ಸಂಸ್ಥೆಯ ‍ಪ್ರಾಂಶುಪಾಲೆ ಡಾ.ಆರ್. ಸುಮಾ, ಡಾ.ಎಸ್‌.ವಿ. ನರಸಿಂಹನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ