ಸಿದ್ದಾಪುರ (ಉತ್ತರ ಕನ್ನಡ): ದೇಶ, ಧರ್ಮ ಉಳಿಸಿಕೊಳ್ಳುವ ಚುನಾವಣೆ ಇದು. ನಮ್ಮಲ್ಲೂ ವೋಟ್ ಜಿಹಾದ್ ನಡೆದರೆ ಲವ್ ಜಿಹಾದ್ಗೆ ಬೆಂಬಲಿಸುವ ಕಾಂಗ್ರೆಸ್ ದೇಶದಲ್ಲೆಲ್ಲೂ ಗೆಲ್ಲೋದಿಲ್ಲ. ದೇಶ ಮತ್ತು ಧರ್ಮದ ಬಗ್ಗೆ ಅಭಿಮಾನವಿದ್ದವರು ಯಾರೂ ಕಾಂಗ್ರೆಸಿಗೆ ಮತ ಹಾಕೋದಿಲ್ಲ. ಕೇವಲ ಮತಾಂತರ, ಲವ್ ಜಿಹಾದ್ಗೆ ಬೆಂಬಲಿಸುವವರು ಮಾತ್ರ ಅದಕ್ಕೆ ಮತ ಹಾಕುತ್ತಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಜಾಗತಿಕವಾಗಿ ಭಾರತಕ್ಕೆ ಗೌರವ ದೊರೆಯುತ್ತಿದೆ. ಕಳೆದ ೧೦ ವರ್ಷಗಳಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭವ್ಯತೆಯ ಕಡೆಗೆ ಭಾರತ ಸಾಗುತ್ತಿದೆ. ನಾವು ತಪ್ಪು ಮಾಡಿದರೆ ಅದನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಮತದಾರರು ಮೈ ಮರೆಯದೇ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ದೇಶವನ್ನು ಎತ್ತಿಕಟ್ಟುವ ಶಕ್ತಿ ನಮ್ಮ ಮತಕ್ಕಿದೆ. ಭಾರತಕ್ಕೆ ಏನು ಅನುಕೂಲ ಎಂದು ನೋಡಿ ತೀರ್ಮಾನಿಸುವುದು ಪ್ರಸಕ್ತ ದೇಶದ ನೀತಿ. ಕಾಂಗ್ರೆಸಿನದು ರಿವರ್ಸ್ ಗೇರ್, ಅಂದರೆ ಮತ್ತೆ ಅಧಿಕಾರಕ್ಕೆ ಬಂದು ಲೂಟಿ ಹೊಡೆಯಬೇಕು ಎನ್ನುವುದು. ಇದು ಜಾತಿ ಗೆಲ್ಲಿಸುವ ಚುನಾವಣೆ ಅಲ್ಲ, ಭಾರತ ಗೆಲ್ಲಿಸುವ ಚುನಾವಣೆ. ಒಂದೊಂದು ಮತವೂ ಅಮೂಲ್ಯವಾಗಿದ್ದು, ಬಿಜೆಪಿ ಬೆಂಬಲಿತರಲ್ಲದೇ ಕಾಂಗ್ರೆಸಿಗರ ಮನೆಗೂ ಹೋಗಿ ಯಾಕೆ ಮೋದಿ ಪ್ರಧಾನಿಯಾಗಬೇಕು ಎನ್ನುವುದನ್ನು ಮನವರಿಕೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.ಜೆಡಿಎಸ್ ಜಿಲ್ಲಾ ಪ್ರಮುಖ ಉಪೇಂದ್ರ ಪೈ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಪ್ರಮುಖರಾದ ಗುರುಪ್ರಸಾದ ಹೆಗಡೆ, ಮಾರುತಿ ನಾಯ್ಕ ಹೊಸೂರು, ಎಂ.ಜಿ. ಹೆಗಡೆ, ಮಹಾಬಲೇಶ್ವರ ಹೆಗಡೆ, ತೋಟಪ್ಪ ನಾಯ್ಕ ಮುಂತಾದವರಿದ್ದರು.