ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದಿಂಡಗೂರು ಗ್ರಾಮದ ಬಾರೆಯ ಪಕ್ಕದಲ್ಲಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆಯ ಸೇತುವೆಯ ಸಮೀಪದಲ್ಲಿ ಮಳೆಯ ನೀರು ನಿಂತು ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಇದರಿಂದ ಇದೇ ರಸ್ತೆಯಲ್ಲಿರುವ ಸಂತ್ಯಮ್ಮ ದೇವಾಲಯಕ್ಕೆ ತೆರಳುವ ಭಕ್ತರಿಗೆ ಸಾಕಷ್ಟು ತೊಂದರೆ ಆಗುತ್ತಿರುವುದಲ್ಲದೆ, ದಿಂಡಗೂರು ಸಾತೇನಹಳ್ಳಿ, ದೇವಗೆರೆ, ಕಲ್ಕೆರೆ ಗ್ರಾಮಸ್ಥರು ಸಹ ಈ ರಸ್ತೆಯಲ್ಲಿ ಸಂಚಾರ ಮಾಡಲು ಹರಸಾಹಸ ಪಡುತ್ತಿದ್ದರು.
ಇದನ್ನು ರಿಪೇರಿ ಮಾಡಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರೂ ಯಾರೂ ಸಹ ಇತ್ತ ಗಮನಹರಿಸಲಿಲ್ಲ. ಈ ಬಗ್ಗೆ ದಿಂಡಗೂರು ಗ್ರಾಮಸ್ಥರು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಆನಂದ್ಗೌಡ ಅವರ ಗಮನಕ್ಕೆ ತಂದಾಗ, ಆನಂದ್ಗೌಡರವರು ಎರಡು ಲಕ್ಷ ರು ವೆಚ್ಚ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ.ಇದರಿಂದಾಗಿ ದಿಂಡಗೂರು ಗ್ರಾಮಸ್ಥರು ಹಾಗೂ ಸುಮಾರು ಹತ್ತಕ್ಕೂ ಹೆಚ್ಚು ಶಾಲಾ ವಾಹನಗಳು ಮತ್ತು ಪಕ್ಕದ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ. ಈ ಬಗ್ಗೆ ಗ್ರಾಮಸ್ಥರು, ನಮ್ಮ ಅನುಕೂಲಕ್ಕಾಗಿ ಸ್ವಂತ ಹಣ ವ್ಯಯಿಸಿ ಮೇರುತ್ವ ಮೆರೆದ ಅನಂದ್ಗೌಡರಿಗೆ ಚಿರಋಣಿಯಾಗಿರುವುದಾಗಿ ಹೇಳಿ ಮುಖಂಡ ಆನಂದ್ಗೌಡರನ್ನು ಸನ್ಮಾನಿಸಿದರು.