ಸಂಡೂರು: ತಮ್ಮನ್ನು ರಿಜೆಕ್ಟೆಡ್ ಪೀಸ್ಗಳೆಂದು ಜರಿದ ಕಾಂಗ್ರೆಸ್ನವರು ಡಿಫೆಕ್ಟ್ ಪೀಸ್ಗಳು. ಮುಂದಿನ ಚುನಾವಣೆಯಲ್ಲಿ ಇವರನ್ನು ಜನತೆ ಗುಜರಿಗೆ ಹಾಕುತ್ತಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ನೀವೆ ಟೈಮ್ ಫಿಕ್ಸ್ ಮಾಡಿ: ನನಗೆ ವಿಧಾನಸಭಾ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾಂಗ್ರೆಸ್ನವರು ಒತ್ತಾಯಿಸುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರಪಯೋಗ ಮಾಡಿಕೊಂಡ ಚುನಾವಣೆ ಗೆದ್ದಿರುವ ಕಾಂಗ್ರೆಸ್ನವರು ದಿನಾಂಕ ಹಾಗೂ ಟೈಮ್ ಫಿಕ್ಸ್ ಮಾಡಲಿ. ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರು ಹಾಗೂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು ಸ್ಪೀಕರ್ಗೆ ರಾಜೀನಾಮೆ ನೀಡಲಿ. ನಾನು ಅವರೊಂದಿಗೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಸವಾಲು ಹಾಕಿದರು.
ಭಿಕ್ಷೆ ನೀಡಿದ್ದು ಬಿಜೆಪಿ: ಶಾಸಕ ನಾಗೇಂದ್ರಗೆ ರಾಜಕೀಯ ಭಿಕ್ಷೆ ನೀಡಿದ್ದು ಬಿಜೆಪಿ. ವಾಲ್ಮೀಕಿ ನಿಗಮದ ₹೧೮೭ ಕೋಟಿ ಹಣ ಲೂಟಿ ಹೊಡೆದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾದಲ್ಲಿ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಇದೀಗ ಈ ಹಣದಲ್ಲಿ ಕೆಲ ಭಾಗ ಮುಂಬೈಗೂ ಹೋಗಿದೆ ಎಂಬುದು ಗೊತ್ತಾಗಿದೆ. ಈ ಹಣ ಸ್ವೀಕರಿಸಿದ್ದ ನವಿಮುಂಬೈನ ನೇಹಾ ಕಲಾಮ್ ಮನ್ಸೂರಿ, ಜೌಹಾರ್ ಕಲಾಮ್ ಮನ್ಸೂರಿ ಹಾಗೂ ಕಲಾಮ್ ಶಕುರ್ ಮನ್ಸೂರಿ ಬಂಧನದ ಭೀತಿಯಲ್ಲಿ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಸೆ.೭ರಿಂದ ೯ರವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿನ ಹಳೆ ದರೋಜಿ, ಹೊಸದರೋಜಿ ಹಾಗೂ ಕುಡುತಿನಿ ಕ್ಷೇತ್ರಗಳಲ್ಲಿ ಪಾದಯಾತ್ರೆ ಸಾಗಲಿದೆ. ಸೆ. ೧೦ ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶ ಯಶಸ್ವಿಗೊಳಿಸಲು ಕ್ಷೇತ್ರದ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಹನುಮಂತಪ್ಪ, ಉಡೇದ ಸುರೇಶ್, ತಿರುಮಲ ಹಾಗೂ ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿದರು.