ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್ ಸಚಿವೆ ಶೋಭಾ ಕರಂದ್ಲಾಜೆ ಆರೋಪ

KannadaprabhaNewsNetwork |  
Published : Jan 08, 2024, 01:45 AM ISTUpdated : Jan 08, 2024, 03:14 PM IST
ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ  ಅವರು ಚಿಕ್ಕಮಗಳೂರಿನಲ್ಲಿ ಭಾನುವಾರ ಮನೆ ಮನೆಗೆ ತೆರಳಿ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆಯನ್ನು ಹಂಚಿದರು. | Kannada Prabha

ಸಾರಾಂಶ

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ದೇಶದಲ್ಲಿ ಕೋಮುದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್ ಮಾಡಿದಂತಿದೆ. ಬಿ.ಕೆ.ಹರಿಪ್ರಸಾದ್ ಹೇಳಿಕೆ ಇದರ ಒಂದು ಝಲಕ್ ಆಗಿದೆ ಎಂದು ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ದೇಶದಲ್ಲಿ ಕೋಮುದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್ ಮಾಡಿದಂತಿದೆ. ಬಿ.ಕೆ.ಹರಿಪ್ರಸಾದ್ ಹೇಳಿಕೆ ಇದರ ಒಂದು ಝಲಕ್ ಆಗಿದೆ ಎಂದು ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನಗರದ ವಿಜಯಪುರ ಬಡಾವಣೆಯಲ್ಲಿ ಭಾನುವಾರ ಅಯೋಧ್ಯೆ ಮಂತ್ರಾಕ್ಷತೆ ಮತ್ತು ಆಹ್ವಾನ ಪತ್ರಿಕೆಯನ್ನು ಮನೆ ಮನೆಗೆ ವಿತರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ ಮಾನಸಿಕ ಸ್ಥಿತಿಯೇ ಕೋಮು ಗಲಭೆ ಸೃಷ್ಟಿಸುವುದು. ಪಿಎಫ್‌ಐ ನಂತಹ ದೇಶದ್ರೋಹಿಗಳ. ಭಯೋತ್ಪಾದಕರ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಭಯೋತ್ಪಾದಕ ದಾಳಿ ನಡೆದಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯದ ಪ್ಲಾನ್‌ನ ಪ್ರಕರಣಗಳು ಮಂಗಳೂರು, ಬಳ್ಳಾರಿ, ಪುತ್ತೂರು, ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತಿಲ್ಲ. ಆ ಮೂಲಕ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ನಿರಂತರವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕನಸು ನನಸು:

ಲಕ್ಷಾಂತರ ಜನರ ರಾಮಮಂದಿರದ ಕನಸು ಈಗ ನನಸಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಜನ ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಕಳೆದ 500 ವರ್ಷಗಳಿಂದ ರಾಮಮಂದಿರಕ್ಕಾಗಿ ಹೋರಾಟ ನಡೆಯುತ್ತಿದೆ. ಆ ಹೋರಾಟ ಈಗ ಮುಗಿದು ಅಯೋಧ್ಯೆಯಲ್ಲಿ ಒಂದು ಸುಂದರ ಮಂದಿರ ನಿರ್ಮಾಣವಾಗಿದೆ ಎಂದರು. ಕಳಂಕಿತ, ಅಪಮಾನದ ಸಂಕೇತವಾದ ಬಾಬರಿ ಮಸೀದಿಯನ್ನು ಜನರೇ ಉರುಳಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಬೇಕೆಂಬುದು ರಾಮಭಕ್ತರ ಅಪೇಕ್ಷೆಯಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸಿತ್ತು . ಪ್ರತಿ ಪಕ್ಷಗಳು ವಕೀಲರ ಮೂಲಕ ರಾಮನ ವಿರುದ್ಧವಾಗಿ ವಾದಮಂಡನೆ ಮಾಡಿದರು. ನರೇಂದ್ರಮೋದಿ ನೇತೃತ್ವದ ಸರ್ಕಾರ ಸುಪ್ರೀಂಗೆ ಸರಿಯಾದ ಮಾಹಿತಿ ಒದಗಿಸಿದ ಪರಿಣಾಮ ಈಗ ಭವ್ಯರಾಮಮಂದಿರ ಆಗಿದೆ. ಜ.22 ರಂದು ಅದರ ಉದ್ಘಾಟನೆ ಆಗಲಿದೆ. ಎಲ್ಲರನ್ನೂ ಅಯೋಧ್ಯೆಗೆ ಕರೆಯಲಾಗಲ್ಲ . ಹೀಗಾಗಿ ತಮ್ಮೂರಿನ ದೇವಸ್ಥಾನಗಳಲ್ಲಿ ಮಂತ್ರಾಕ್ಷತೆ ಇಟ್ಟು ಪೂಜಿಸಬೇಕು. ತಮ್ಮ ಮನೆಗಳಲ್ಲಿ ದೀಪ ಹಚ್ಚಿ ರಾಮ ನಾಮ ಜಪಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ನಗರ ಅಧ್ಯಕ್ಷ ಮಧುಕುಮಾರ ರಾಜ್ ಅರಸ್, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ದೇವರಾಜ್‌ ಶೆಟ್ಟಿ, ಸುಮಂತ್ ಹಾಗೂ ಕಾರ್ಯಕರ್ತರು ಹಾಜರಿದ್ದರು.----- ಬಾಕ್ಸ್‌ ----

ಪವಿತ್ರ ಮಂತ್ರಾಕ್ಷತೆ ಹಂಚಿದ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮನೆ ಮನೆಗೆ ತೆರಳಿ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆ ಹಂಚಿದ್ದಾರೆ.

ಶನಿವಾರ ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ಹಂಚಿದರು. ಭಾನುವಾರ ವಿವಿಧ ಕಾರ್ಯಕ್ರಮಗಳಿಗಾಗಿ ತಾಲೂಕಿಗೆ ಆಗಮಿಸಿದ್ದ ಅವರು, ಅಯೋಧ್ಯೆಯಿಂದ ಬಂದಿರುವ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆಯನ್ನ ಮನೆ ಮನೆಗೆ ಹೋಗಿ ವಿತರಿಸಿದ್ದಾರೆ.

ಇದಕ್ಕೂ ಮುನ್ನ ಮುಗುಳುವಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಕರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿದರು.

ಮಂತ್ರಾಕ್ಷತೆ ನೀಡಲು ಮನೆ ಬಾಗಿಲಿಗೆ ಬಂದ ಕೇಂದ್ರ ಸಚಿವರಿಗೆ ಮುತ್ತೈದೆಯರು ಆರತಿ ಎತ್ತಿ ಸ್ವಾಗತಿಸಿದರು. ಮಂತ್ರಾಕ್ಷತೆ ನೀಡಿ ಇದೇ 22ಕ್ಕೆ ರಾಮಮಂದಿರ ಉದ್ಘಾಟನೆಯಂದು ನಿಮ್ಮ ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಇರಲಿದೆ. ರಾಮಮಂದಿರ ಉದ್ಘಾಟನೆ ನೇರಪ್ರಸಾರ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿದೆ. ಸಂಜೆ ನಿಮ್ಮ ಮನೆ ಮುಂದೆ ಐದು ದೀಪ ಹಚ್ಚಿ ಎಂದು ಮನವಿ ಮಾಡಿದ್ದಾರೆ.

ಪ್ರತಿ ಮನೆಗೂ ಮಂತ್ರಾಕ್ಷತೆ ನೀಡಿ ಈ ಅಕ್ಷತೆಯನ್ನ ರಾಮಮಂದಿರ ಉದ್ಘಾಟನೆ ದಿನದವರೆಗೂ ನಿಮ್ಮ ಮನೆಯಲ್ಲಿ ಇಟ್ಕೊಂಡು ಅಂದು ಊಟದಲ್ಲಿ ಈ ಮಂತ್ರಾಕ್ಷತೆಯನ್ನೂ ಹಾಕಿ ಊಟ ಮಾಡಿ ಎಂದು ಮನವಿ ಮಾಡಿದ್ದಾರೆ. 7 ಕೆಸಿಕೆಎಂ 1

ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನಲ್ಲಿ ಭಾನುವಾರ ಮನೆ ಮನೆಗೆ ತೆರಳಿ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆ ಹಂಚಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ