ಕೇಂದ್ರದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : Jun 11, 2026, 01:45 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬುಧವಾರ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಿಂದ ಅಜಾದ್‌ ಪಾರ್ಕ್‌ ವೃತ್ತದ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಗಾಡಿ ಮೆರವಣಿಗೆ । ಕಾರಿಗೆ ಅಗ್ಗ ಕಟ್ಟಿ ಎಳೆದು ಆಕ್ರೋಶ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬುಧವಾರ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಿಂದ ಅಜಾದ್‌ ಪಾರ್ಕ್‌ ವೃತ್ತದ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಎತ್ತಿನಗಾಡಿ ಮೆರವಣಿಗೆ ನಡೆಸಲಾಯಿತು. ಜತೆಗೆ ಗ್ಲೂಕೋಸ್‌ ಬಾಟಲ್‌ನಲ್ಲಿ ಪೆಟ್ರೋಲ್‌ ತುಂಬಿ ಬೈಕ್‌ಗಳಿಗೆ ಹನಿ ಹನಿಯಾಗಿ ಪೆಟ್ರೋಲ್‌ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬ ಅಣಕು ಪ್ರದರ್ಶನ ನೀಡಲಾಯಿತು. ಇನ್ನೂ ಕಾರಿಗೆ ಅಗ್ಗ ಕಟ್ಟಿ ಎಳೆದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಒಂದು ಕಿ.ಮೀ ಗೂ ದೂರ ಪ್ರತಿಭಟನಾ ಜಾಥಾ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು, ಕೇಂದ್ರ ಸರ್ಕಾರ ನೀತಿ ವಿರುದ್ಧ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಕೇಂದ್ರ ಜನರ ರಕ್ತ ಹೀರುತ್ತಿದೆ: ತಮ್ಮಯ್ಯ

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ದೇಶದ ಎಲ್ಲರಿಗೂ ಅಚ್ಛೇದಿನ್‌ ಬರಲಿದೆ ಎಂದು ಹೇಳಿತ್ತು. ಆದರೆ, ಅಚ್ಛೇದಿನ್‌ ಬಂದಿದ್ದು, ಗುಜರಾತ್‌ನ ಕೆಲವು ಉದ್ಯಮಿಗಳಿಗೆ ಮಾತ್ರ. 13 ವರ್ಷ ಕಳೆದರೂ ಜನ ಸಾಮಾನ್ಯರಿಗೆ ಮಾತ್ರ ಅಚ್ಛೇದಿನ್‌ ಬಂದಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವಾಗ ಜನರಿಗೆ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ. ದೇಶಬಿಟ್ಟು ಓಡಿಹೋದ ವಿಜಯ್ ಮಲ್ಯ, ನೀರವ್‌ ಮೋದಿ ಅವರ ಸಾಲ ಮಾತ್ರ ಮನ್ನಾ ಮಾಡಲಾಗಿದೆ ಎಂದು ಕಿಡಿಕಾರಿದರು.

ಇಡೀ ದೇಶದಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ನೀಡಿದ್ದರಿಂದ ರಾಜ್ಯದ ಜನರು ಸ್ವಲ್ಪಮಟ್ಟಿಗೆ ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು.

ಬೆಲೆ ಏರಿಕೆ ಬಗ್ಗೆ ಬೂತ್‌ ಮಟ್ಟದ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರಿಗೆ ತಿಳಿಸಿ ಜಾಗೃತಿಗೊಳಿಸುವ ಕೆಲಸ ಮಾಡ ಬೇಕು. ಇನ್ನೂ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಎಸ್‌ಐಆರ್‌ನಿಂದ ಗೆದ್ದಿದ್ದಾರೆ. ಎಸ್‌ಐಆರ್‌ ಭೂತ ಪಶ್ಚಿಮ ಬಂಗಾಳದಲ್ಲಿ ನಿಲ್ಲಬೇಕು. ಕರ್ನಾಟಕ್ಕೆ ಬರುವುದಕ್ಕೆ ಅವಕಾಶ ನೀಡಬಾರದು ಎಂದರು.

ಬಿಜೆಪಿ ಹುನ್ನಾರ ಜನರಿಗೆ ತಿಳಿದಿದೆ: ಕೆಪೆಕ್‌ ಅಧ್ಯಕ್ಷ ಹರೀಶ್‌

ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನರ ಹಣವನ್ನು ಎರಡ್ಮೂರು ಮಂದಿ ಶ್ರೀಮಂತರ ಕೈಗೆ ಕೊಡಿಸುವ ಹುನ್ನಾರ ಮಾಡಿದೆ ಎಂದು ಕೆಪೆಕ್‌ ಅಧ್ಯಕ್ಷ ಬಿ.ಎಚ್.ಹರೀಶ್‌ ಆರೋಪಿಸಿದರು.

ಜನವಿರೋಧಿ ಕೇಂದ್ರ ಸರ್ಕಾರದ ಆಡಳಿತದಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಜನರು ಬದುಕುವುದು ಕಷ್ಟವಾಗಿದೆ. ಬಿಜೆಪಿ ನಾಯಕರ ಬಂಡಾವಳ ಶಾಹಿ ಪರ ಧೋರಣೆ ಜನರಿಗೆ ತಿಳಿದಿದ್ದು, ಬಡವರು, ಮಧ್ಯಮ ವರ್ಗದ ಪರವಾಗಿರುವುದು ಕಾಂಗ್ರೆಸ್‌ ಮಾತ್ರ ಅರ್ಥವಾಗಿದೆ.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್‌.ವಿಜಯ್ ಕುಮಾರ್‌, ಕೆಪಿಸಿಸಿ ವಕ್ತಾರ ದೇವರಾಜ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಸಿಡಿಎ ಮಾಜಿ ಅಧ್ಯಕ್ಷ ನಯಾಜ್‌, ಜಿಲ್ಲಾ ಕಾಂಗ್ರೆಸ್‌ ಯುವ ಮುಖಂಡ ಶಿವುಕುಮಾರ್‌ ಸೇರಿದಂತೆ ಮೊದಲಾದವರಿದ್ದರು.

--ಬಾಕ್ಸ್‌---

ಆಗದಿದ್ದರೆ ಬಿಟ್ಟುಕೊಡಿ: ತಮ್ಮಯ್ಯಕೇಂದ್ರ ಸರ್ಕಾರದಿಂದ ಬೇಲೂರಿನಿಂದ ಚಿಕ್ಕಮಗಳೂರು ರಸ್ತೆ ನಿರ್ಮಾಣ ಸಾಧ್ಯವಾಗದಿದ್ದರೆ ಬಿಟ್ಟುಕೊಡಿ ರಾಜ್ಯ ಸರ್ಕಾರದ ಅನುದಾನದಲ್ಲಿ ಮಾಡುತ್ತೇವೆ ಎಂದು ಶಾಸಕ ತಮ್ಮಯ್ಯ ಎಂದಿದ್ದಾರೆ.

ಬೇಲೂರಿನಿಂದ ಚಿಕ್ಕಮಗಳೂರು ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ 13 ವರ್ಷ ಬೇಕಾಗಿದೆ. ಈ ಹಿಂದಿನ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿತ್ತು, ಆದರೂ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿಂದ ರಸ್ತೆ ನಿರ್ಮಾಣ ಸಾಧ್ಯವಾಗದಿದ್ದರೆ ಬಿಟ್ಟುಕೊಡಿ, ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.---ಬಾಕ್ಸ್‌---

‘ಬಿಜೆಪಿ’ ಪದ ಬಳಸದ ಕೇಂದ್ರ ಸರ್ಕಾರವನ್ನು ಟೀಕಿಸಿದ ಶಾಸಕ ತಮ್ಮಯ್ಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬ್ಲಾಕ್‌ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಸುಮಾರು 13 ನಿಮಿಷ ಕೇಂದ್ರ ಸರ್ಕಾರದ ವಿರುದ್ಧ ಭಾಷಣ ಮಾಡಿದ ಶಾಸಕ ಎಚ್‌.ಡಿ.ತಮ್ಮಯ್ಯ, ತಮ್ಮ ಭಾಷಣದಲ್ಲಿ ಎಲ್ಲಿಯೂ ಅಪ್ಪಿತಪ್ಪಿ ಒಂದೇ ಒಂದು ಬಾರಿಯೂ ಬಿಜೆಪಿ ಪಕ್ಷದ ಹೆಸರನ್ನು ಬಳಸದೇ ಕೇವಲ ಎನ್‌ಡಿಎ ಮತ್ತು ಕೇಂದ್ರ ಸರ್ಕಾರ ಎಂದಷ್ಟೇ ಟೀಕಿಸಿ ಭಾಷಣ ಮಗಿಸಿದ್ದು ವಿಶೇಷವಾಗಿತ್ತು.3 ಫೋಟೋ ಬಳಸಿ

ಫೋಟೋ 1

ಚಿಕ್ಕಮಗಳೂರಿನ ಹನುಮಂತಪ್ಪ ಸರ್ಕಲ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್‌.ವಿಜಯ್ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಸಿಡಿಎ ಮಾಜಿ ಅಧ್ಯಕ್ಷ ನಯಾಜ್‌ ಮೊದಲಾದವರಿದ್ದರು.ಫೋಟೋ 2

ಬೆಲೆ ಏರಿಕೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಎತ್ತಿನಗಾಡಿ ಮೆರವಣಿಗೆ ನಡೆಸಿದ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು.

ಫೋಟೋ 3

ಪೆಟ್ರೋಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾರಿಗೆ ಅಗ್ಗಕಟ್ಟಿ ಎಳೆದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಕ ದ್ರವ್ಯ ಸೇವನೆಯಿಂದ ಜೀವಕ್ಕೆ ಹಾನಿ: ಪಿಎಸ್‌ಐ ಹೊಳೆಬಸಪ್ಪ ಸಲಹೆ
ಇನ್ನು ಕಾಯೋಕೆ ಆಗಲ್ಲ, ಬೇಗ ಮಿನಿಸ್ಟರ್ ಆಗಿ ಬನ್ನಿ