- 2 ವರ್ಷದಲ್ಲಿ ಸಚಿವ ಎಸ್ಸೆಸ್ಸೆಂ, 1 ವರ್ಷದಲ್ಲಿ ಸಂಸದೆ ಡಾ.ಪ್ರಭಾರ ಕೊಡುಗೆ ಏನು-ಯಶವಂತರಾವ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ 2 ವರ್ಷ ಜಿಲ್ಲಾ ಮಂತ್ರಿಯಾಗಿ ಎಸ್.ಎಸ್.ಮಲ್ಲಿಕಾರ್ಜುನ, 1 ವರ್ಷ ಸಂಸದರಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳಾದರೂ ಏನು ಎಂಬುದನ್ನು ಸಾರ್ವಜನಿಕವಾಗಿ ಘೋಷಿಸಲಿ. ಕ್ಷೇತ್ರ ಅಭಿವೃದ್ಧಿಗೆ ಶಾಸಕ, ಸಚಿವ, ಸಂಸದರೆಂಬ ತ್ರಿಬಲ್ ಎಂಜಿನ್ ಕೊಡುಗೆ ಶೂನ್ಯವಾಗಿದೆ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯನ್ನು ಸಿಂಗಾಪುರ ಮಾಡುತ್ತೇವೆಂದು ಪಾಲಿಕೆಯ ಕಾಂಗ್ರೆಸ್ನ ಮಾಜಿ ಸದಸ್ಯರು, ದೂಡಾ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲಿ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆಯೆಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ದಾವಣಗೆರೆ ಡಿಸಿ ಕಚೇರಿ ಕಟ್ಟಿದ್ದು, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಅಭಿವೃದ್ಧಿಪಡಿಸಿದ್ದು, ದಾವಣಗೆರೆ ವಿ.ವಿ. ತಂದಿದ್ದು, ಜಿಲ್ಲಾ ಕೇಂದ್ರದ 104 ಪಾರ್ಕ್ಗಳನ್ನು ಅಭವೃದ್ಧಿಪಡಿಸಿದ್ದು, ರೈಲ್ವೆ ನಿಲ್ದಾಣ ನಿರ್ಮಾಣ, ಭದ್ರಾ ನಾಲೆ ಆಧುನೀಕರಣ, ಪಾಸ್ ಪೋರ್ಟ್ ಕಚೇರಿ ತಂದಿದ್ದು, ಕಾರ್ಮಿಕ ವಿಮಾ ಆಸ್ಪತ್ರೆಗೆ ₹13 ಕೋಟಿ ವೆಚ್ಚದಲ್ಲಿ ವಿಶೇಷ ಸೌಲಭ್ಯ ತಂದಿದ್ದು, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ಸರ್ಕಾರ ಎಂದು ಯಶವಂತ ರಾವ್ ತಿರುಗೇಟು ನೀಡಿದರು.25 ವರ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕೊಡುಗೆ ಏನೆಂದು ಕಾಂಗ್ರೆಸ್ಸಿಗರು ಪ್ರಶ್ನಿಸಿದ್ದಾರೆ. ನಮ್ಮ ಕೊಡುಗೆ ತಿಳಿಸಿದ್ವೇವೆ. ಕಳೆದ 2 ವರ್ಷದಲ್ಲಿ ಸಚಿವರು, ಶಾಸಕರು ಹಾಗೂ 1 ವರ್ಷದಿಂದ ಹಾಲಿ ಸಂಸದರ ಕೊಡುಗೆ ಏನೆಂದು ಸ್ಪಷ್ಟಪಡಿಸಿ. ಒಟ್ಟು 10 ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ 15 ಸಾವಿರ ಆಶ್ರಯ ಮನೆ ಕಟ್ಟಿದ್ದು, ಸಿಮೆಂಟ್ ರಸ್ತೆ ಮಾಡಿದ್ದು, ಗಾಜಿನ ಮನೆ ಕಟ್ಟಿದ್ದನ್ನೇ ತಿರುಗಾಮುರುಗಾ ಹೇಳುತ್ತಾರೆ. ಕಾಂಗ್ರೆಸಿಗರು ನಿಮ್ಮ ಸಚಿವರು 2 ವರ್ಷದಲ್ಲಿ ಏನು ಮಾಡಿದ್ದಾರೆಂಬ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ದಾವಣಗೆರೆ ಹಾಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ 25 ವರ್ಷ ಬಿಜೆಪಿ ಸಂಸದರು ಮಾಡಲಾಗದ ಕೆಲಸ ಕೇವಲ ಒಂದೇ ವರ್ಷದಲ್ಲಿ ಮಾಡಿದ್ದಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅಧಿಕಾರ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದೆ. ಈ ಬಗ್ಗೆ ದಾಖಲೆ ಸಮೇತ ಚರ್ಚೆಗೆ ನಾವು ಸಿದ್ಧರಿದ್ದೇವೆ. ನಿಮ್ಮ ಸಚಿವರ 2 ವರ್ಷದ ಅಧಿಕಾರದಲ್ಲಿ ಹಾಗೂ ನಿಮ್ಮ ಸಂಸದರ 1 ವರ್ಷದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆಂಬ ಬಗ್ಗೆ ಚರ್ಚೆಗೆ ಬನ್ನಿ ಎಂದು ಪುನರುಚ್ಛರಿಸಿದರು.ಪಕ್ಷದ ಮುಖಂಡರಾದ ಅಣಬೇರು ಜೀವನಮೂರ್ತಿ, ಕೊಂಡಜ್ಜಿ ಜಯಪ್ರಕಾಶ, ರಮೇಶ ನಾಯ್ಕ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ರಾಜು ನೀಲಗುಂದ, ಕಿಶೋರಕುಮಾರ ಇತರರು ಇದ್ದರು.
- - -(ಬಾಕ್ಸ್) * ಬಿಜೆಪಿ ಭ್ರಷ್ಟಾಚಾರ ವಿರುದ್ಧ ನೀವ್ಯಾಕೆ ಕ್ರಮ ಕೈಗೊಂಡಿಲ್ಲ? ದಾವಣಗೆರೆ: ಬಿಜೆಪಿ ಅಧಿಕಾರ ಅವಧಿಯಲ್ಲಿ ಎಲ್ಲ ಇಲಾಖೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನಿಮ್ಮದೇ ಸರ್ಕಾರ 2 ವರ್ಷದಿಂದ ಇದ್ದು ಯಾಕೆ ತನಿಖೆ ಮಾಡಿ, ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆಗರ್ಭ ಶ್ರೀಮಂತರು ಅಂತ ಒಪ್ಪುತ್ತೇವೆ. ಆದರೆ, ಯಾವಾಗಿನಿಂದ ಶ್ರೀಮಂತರಾದರು ಎಂಬುದನ್ನೂ ಕಾಂಗ್ರೆಸಿಗರು ಹೇಳಬೇಕಲ್ಲವೇ? ಯಾವಾಗಿನಿಂದ ಶ್ರೀಮಂತರಾದರು, ಅದಕ್ಕಿಂತ ಮುಂಚೆ ಏನಿದ್ದರು? ನಂತರ ಸಾವಿರಾರು ಕೋಟಿ ರು. ಎಲ್ಲಿಂದ ಬಂದಿತು ಎಂಬ ಬಗ್ಗೆಯೂ ನೀವು ಉತ್ತರಿಸಬೇಕಲ್ಲವೇ ಎಂದು ಪ್ರಶ್ನಿಸಿದರು.ಮಣಿಪಾಲ, ಉಡುಪಿಗೆ ಎನಪೋಯಾ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆಗೆ ದಾವಣಗೆರೆಯಿಂದ ನಿತ್ಯವೂ 10 ಬಸ್ ತುಂಬಾ ರೋಗಿಗಳು ಹೋಗುತ್ತಾರೆ. ದಾವಣಗೆರೆಯಲ್ಲಿ ಸರ್ಕಾರಿ ಹೈಟೆಕ್ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜನ್ನು ತರಲು ನಿಮ್ಮ ಕಾಂಗ್ರೆಸ್ ನಾಯಕರಿಂದ ಯಾಕೆ ಆಗಲಿಲ್ಲ? ಬಿಜೆಪಿ ಸರ್ಕಾರದಲ್ಲಿ ಅವುಗಳನ್ನು ತರಲು ಪ್ರಯತ್ನಿಸಿದ್ದಾಗ ಯಾಕೆ, ಯಾರು ಅಡ್ಡಿಪಡಿಸಿದ್ದರು ಎಂಬುದನ್ನೂ ಜನರಿಗೆ ನೀವು ತಿಳಿಸಬೇಕು ಎಂದು ಒತ್ತಾಯಿಸಿದರು.
ದಾದಾಗಿರಿ, ರೌಡಿಸಂ ಎಲ್ಲ ಆಟವನ್ನು ನಾವು ಬಲ್ಲೆವು. ನಿಮ್ಮ ಕಾಂಗ್ರೆಸ್ನ ಆಟ ನಮ್ಮ ಬಿಜೆಪಿ ಮುಖಂಡರು, ಕಾರ್ಯಕರ್ತರ ಬಳಿ ತೋರಿಸಬೇಡಿ. ನಾವು ಸತ್ಯದ ಪರ, ನಮ್ಮ ಹೋರಾಟ ಶತಃಸಿದ್ಧ. ಬಿಜೆಪಿ ಸರ್ಕಾರದಲ್ಲಿ, ಜಿ.ಎಂ. ಸಿದ್ದೇಶ್ವರರಿಂದ ಆದ ಕೆಲಸ ಕಾರ್ಯಗಳನ್ನು ಕಾಂಗ್ರೆಸ್ ತಮ್ಮದೆಂಬುದನ್ನು ಹೇಳುತ್ತಿರೋದು ನೋಡಿದರೆ, ಯಾರಿಗೋ ಮಗು ಹುಟ್ಟಿದರೆ, ಮತ್ತೆ ಯಾರೋ ಸಿಹಿ ಹಂಚಿದರು ಎಂಬ ಮಾತಿನಂತಿದೆ ಎಂದು ಯಶವಂತ ರಾವ್ ಜಾಧವ್ ಕಾಂಗ್ರೆಸ್ ಮುಖಂಡರನ್ನು ಕುಟುಕಿದರು.- - -
(ಬಾಕ್ಸ್) * ಬಿಜೆಪಿ ಸಾಧನೆಗಳಿವು - ಹಳೆ ಹೆರಿಗೆ ಆಸ್ಪತ್ರೆಯನ್ನು ₹11 ಕೋಟಿ ವೆಚ್ಚದಲ್ಲಿ 150 ಬೆಡ್ ಆಸ್ಪತ್ರೆಯಾಗಿಸಲಾಗಿದೆ.- ಆವರಗೊಳ್ಳದ ಬಳಿ ಕೇಂದ್ರೀಯ ವಿದ್ಯಾಲಯ, ಸಿಆರ್ಸಿ ಸೆಂಟರ್ ಸ್ಥಾಪಿಸಲಾಗಿದೆ.
- ಹರಿಹರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ₹20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.- ದಾವಣಗೆರೆ, ಜಗಳೂರು ತಾಲೂಕಿನ 22 ಕೆರೆಗಳ ಏತ ನೀರಾವರಿ ಯೋಜನೆ ತರಲಾಗಿದೆ.
- ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಇಂಡಿಯಾ ತರಲಾಗಿದೆ.- ಥೀಮ್ ಪಾರ್ಕ್, ಸ್ಮಾರ್ಟ್ ಸಿಟಿ ಯೋಜನೆ ದಾವಣಗೆರೆಗೆ ತರಲಾಗಿದೆ.
- ಜಿಲ್ಲಾಸ್ಪತ್ರೆಗೆ ಎನ್ಎಚ್ಎಂನಡಿ ₹34 ಕೋಟಿ ಬಿಡುಗಡೆ ಮಾಡಿಸಲಾಗಿದೆ.- ರಾಷ್ಟ್ರೀಯ ಆರೋಗ್ಯ ಮಿಷನ್ ಎನ್ಎಚ್ಎಂನಡಿ ಜಿಲ್ಲಾಸ್ಪತ್ರೆ ಆವರಣದಲ್ಲಿ ₹1 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
- ಹರಿಹರ ರೈಲ್ವೆ ನಿಲ್ದಾಣ ಅಮೃತ ಯೋಜನೆಗೆ ಸೇರ್ಪಡೆ,- ಹರಿಹರದಲ್ಲಿ ಅಮರಾವತಿ ಮೇಲ್ಸೇತುವೆ, ಬಾಡಾ ಕ್ರಾಸ್ ಬಳಿ ಅಂಡರ್ ಬಾಸ್ಗೆ ₹25 ಕೋಟಿ.
- ವೀರ ಮದಕರಿ ನಾಯಕ ವೃತ್ತದ ಹೊಂಡದಲ್ಲಿ ಪುಷ್ಕರಣಿ ನಿರ್ಮಾಣ- - - -26ಕೆಡಿವಿಜಿ1.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.