ದಾವಣಗೆರೆ: ಜೆಡಿಎಸ್ ಪಕ್ಷದ ಮುಖಂಡ ಟಿ.ಅಸ್ಗರ್ ಕೊಲೆ ಯತ್ನ ಪ್ರಕಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕಿ ಸವಿತಾ ಮಲ್ಲೇಶ್ ನಾಯ್ಕರನ್ನು ಪೊಲೀಸರು ಬಂಧಿಸಿದ್ದಾರೆ.
ಮುಸುಕುಧಾರಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಟಿ.ಅಸ್ಗರ್ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಾಣಾಪಾಯದಿಂದ ಅಸ್ಗರ್ ಪಾರಾಗಿದ್ದರು. ಆದರೆ, ತಮಗೆ ಈಗಲೂ ಪ್ರಾಣ ಭೀತಿ ಇದ್ದು, ಸೂಕ್ತ ರಕ್ಷಣೆ ನೀಡಬೇಕು. ತಮ್ಮ ಕೊಲೆಗೆ ಯತ್ನಿಸಿದವರನ್ನು ಬಂಧಿಸಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಅಸ್ಗರ್ ಸೇರಿದಂತೆ ಕುಟುಂಬ ಸದಸ್ಯರು, ಬಂಧು-ಬಳಗದವರು ಪ್ರತಿಭಟಿಸಿದ್ದರು.
ಹಣಕಾಸು ವಿಚಾರಕ್ಕೆ ಟಿ.ಅಸ್ಗರ್ ಹಾಗೂ ಖಾಲಿದ್ ಪೈಲ್ವಾನ್ ಎಂಬಾತನ ಮಧ್ಯೆ ವೈಷಮ್ಯವಿತ್ತು. ಖಾಲಿದ್ ಪೈಲ್ವಾನ್ ವಿರುದ್ಧ ಅಸ್ಗರ್ ಕೊಲೆ ಯತ್ನದ ಆರೋಪ ದಾಖಲಾಗಿತ್ತು. ಅಸ್ಗರ್ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಮುಖ ಆರೋಪಿ ಖಾಲಿದ್ ಪೈಲ್ವಾನ್ ತಲೆ ಮರೆಸಿಕೊಂಡಿದ್ದ. ಆರೋಪಿ ಖಾಲಿದ್ ಪೈಲ್ವಾನ್ಗೆ ಆಶ್ರಯ ಕಲ್ಪಿಸಿ, ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ ಮಾಯಕೊಂಡ ಕಾಂಗ್ರೆಸ್ ನಾಯಕಿ ಸವಿತಾ ಬಾಯಿ ಮಲ್ಲೇಶ ನಾಯ್ಕಗೆ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.ಮಾಯಕೊಂಡ ಕಾಂಗ್ರೆಸ್ ಪಕ್ಷದ ಸವಿತಾ ಬಾಯಿ ಮಲ್ಲೇಶ ನಾಯ್ಕಗೆ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾಯಕೊಂಡ ಕ್ಷೇತ್ರದ ಟಿಕೆಟ್ಗೆ ಸವಿತಾಬಾಯಿ ದೆಹಲಿ ಮಟ್ಟದವರೆಗೂ ಪ್ರಯತ್ನ ನಡೆಸಿದ್ದರು. ಕಡೇ ಘಳಿಗೆಯಲ್ಲಿ ಮತ್ತೊಬ್ಬ ಆಕಾಂಕ್ಷಿ ಕೆ.ಎಸ್.ಬಸವಂತಪ್ಪಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆಗ ಪಕ್ಷೇತರರಾಗಿ ಸ್ಪರ್ಧಿಸಿ ಸೋಲನುಭವಿಸಿದ್ದ ಸವಿತಾ ಬಾಯಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಿದ್ದರು.
ಖಾಲಿದ್-ಸವಿತಾಬಾಯಿ ಪಾತ್ರದ ತನಿಖೆ ಆಗಲಿ
ಕಾಂಗ್ರೆಸ್ ಪಕ್ಷದ ಸವಿತಾ ಬಾಯಿ ಬಂಧನದ ಸುದ್ದಿ ಮಾಧ್ಯಮಗಳಿಂದ ನನ್ನ ಗಮನಕ್ಕೆ ಬಂದಿದೆ. ಸವಿತಾ ಬಾಯಿ ಹಾಗೂ ಖಾಲಿದ್ ಪೈಲ್ವಾನ್ ಮಧ್ಯೆ ಏನು ಸಂಬಂಧವಿದೆಯೆಂಬ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಖಾಲಿದ್ಗೆ ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಕಳೆದ ಅ.22ರಂದು ಸಾಜಿದ್ ಬಳಿ 2 ಲಕ್ಷ ರು. ಹಫ್ತಾ ಕೇಳಿದ್ದ. ಸಾಜಿದ್ಗೆ ಕಾನೂನು ಕ್ರಮ ಕೈಗೊಳ್ಳಲು ನಾನು ಸಲಹೆ ನೀಡಿದ್ದೆ. ಅ.24ರಂದು ಖಾಲಿದ್ ನನಗೆ ಕೊಲೆ ಬೆದರಿಕೆ ಹಾಕಿದ್ದ. ಈ ಬಗ್ಗೆ ನಾನು ಆಜಾದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಅವತ್ತೇ ಪೊಲೀಸರು ಖಾಲೀದ್ಗೆ ಕರೆಸಿಕೊಂಡು, ತಕ್ಕ ಬುದ್ಧಿವಾದ ಹೇಳಿದ್ದರೆ ಹೀಗೆಲ್ಲಾ ಆತ ಮಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಬಾಷಾ ನಗರ 6ನೇ ಕ್ರಾಸ್ನಲ್ಲಿ ಖಾಲಿದ್, ಇರ್ಫಾನ್ ಎಂಬಾತ ತಲ್ವಾರ್, ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಈವರೆಗೂ ಪ್ರಮುಖ ಆರೋಪಿಗಳನ್ನೇ ಪೊಲೀಸರು ಬಂಧಿಸಿಲ್ಲ. ಇರ್ಫಾನ್ ಸಹ ನೆಟೋರಿಯಲ್ ರೌಡಿಯಾಗಿದ್ದು, ಅನೇಕ ಸಮಾಜಘಾತುಕ ಕೃತ್ಯಗಳಲ್ಲೂ ಭಾಗಿಯಾಗಿದ್ದಾನೆ. ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಗೂಂಡಾಗಿರಿ ವಾತಾವರಣವಿದೆ. ನನ್ನ ಕೊಲೆಗೆ ಸಂಚು ರೂಪಿಸಿದ್ದವರ ವಿರುದ್ಧ ಕಾನೂನು ಕ್ರಮ ಆಗಬೇಕು. ರೌಡಿಸಂ ವಿರುದ್ಧದ ನನ್ನ ಕೂಗಿಗೆ ಶಕ್ತಿ ಸಿಗಬೇಕು ಎಂದು ಟಿ.ಅಸ್ಗರ್ ಒತ್ತಾಯಿಸಿದ್ದಾರೆ.