ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕ ವಿನಯ್‌ ಹಾಗೂ ಮೊದಲನೇ ಆರೋಪಿ ಪವಿತ್ರಗೌಡ ಸಹಾಯಕ ಪವನ್‌ ಸೇರಿ ಐವರಿಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕ ವಿನಯ್‌ ಹಾಗೂ ಮೊದಲನೇ ಆರೋಪಿ ಪವಿತ್ರಗೌಡ ಸಹಾಯಕ ಪವನ್‌ ಸೇರಿ ಐವರಿಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.

ಹೈಕೋರ್ಟ್‌ಗೆ ಪ್ರತ್ಯೇಕ ನಾಲ್ಕು ಅರ್ಜಿ

ಪ್ರಕರಣ‌ಲ್ಲಿ ಒಂಬತ್ತನೇ ಆರೋಪಿ ವಿನಯ್‌, ಮೂರನೇ ಆರೋಪಿ ಪವನ್‌, ಚಿತ್ರದುರ್ಗದ ದರ್ಶನ್‌ ಅಭಿಮಾನಿ ಬಳಗದ ಅಧ್ಯಕ್ಷನಾಗಿರುವ ನಾಲ್ಕನೇ ಆರೋಪಿ ರಾಘವೇಂದ್ರ, ಐದನೇ ಆರೋಪಿ ನಂದೀಶ್‌, ಒಂಬತ್ತನೇ ಆರೋಪಿ ಧನರಾಜ್‌ಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ 2024ರ ಡಿ. 24ರಂದು ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಕಾಮಾಕ್ಷಿಪಾಳ್ಯ ಪೊಲೀಸರು (ಪ್ರಾಸಿಕ್ಯೂಷನ್) ಹೈಕೋರ್ಟ್‌ಗೆ ಪ್ರತ್ಯೇಕ ನಾಲ್ಕು ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರ ಪೀಠ ಈ ಅರ್ಜಿಗಳ ವಿಚಾರಣೆಯನ್ನು ಏ.11ರಂದು ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು. ಕಾಮಾಕ್ಷಿಪಾಳ್ಯ ಪೊಲೀಸರ ಪ್ರತ್ಯೇಕ ನಾಲ್ಕು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ. ಎಸ್.ರಾಚಯ್ಯ ಅವರ ಪೀಠ ಬುಧವಾರ ಆದೇಶ ಪ್ರಕಟಿಸಿದೆ. ಆದೇಶದ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಜೂ.11ರಂದು ದರ್ಶನ್‌ ಮತ್ತಿತರರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೂ.11ರಂದು ದರ್ಶನ್‌ ಮತ್ತಿತರರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಜೂ.22ರಿಂದ ದರ್ಶನ್‌, ನಟಿ ಪವಿತ್ರಾ ಗೌಡ ಹಾಗೂ ಅರ್ಜಿದಾರ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್‌ಗೆ ಅ. 30ರಂದು ಹೈಕೋರ್ಟ್‌ ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅ.14ರಂದು ವಿಚಾರಣಾಧೀನ ನ್ಯಾಯಾಲಯ ದರ್ಶನ್‌, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಜಾಮೀನು ನಿರಾಕರಿಸಿತ್ತು. ಎಂಟನೇ ಆರೋಪಿ ರವಿಶಂಕರ್‌ ಅಲಿಯಾಸ್‌ ರವಿ, 13ನೇ ಆರೋಪಿ ದೀಪಕ್‌ ಕುಮಾರ್‌ ಅಲಿಯಾಸ್‌ ದೀಪಕ್‌, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್‌ ನಾಯಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.

2024ರ ಡಿಸೆಂಬರ್‌ 13ರಂದು ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ, ಪ್ರದೋಷ್‌ ರಾವ್‌ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಿಗೇ 2024ರ ಡಿಸೆಂಬರ್‌ 24ರಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ಪವನ್‌, ವಿನಯ್‌ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿತ್ತು.

2025ರ ಆಗಸ್ಟ್‌ 14ರಂದು ಸುಪ್ರೀಂ ಕೋರ್ಟ್‌ 2ನೇ ಆರೋಪಿ ದರ್ಶನ್‌ 1ನೇ ಆರೋಪಿ ಪವಿತ್ರಾ ಗೌಡ, 11ನೇ ಆರೋಪಿ ಆರ್‌.ನಾಗರಾಜು, 7ನೇ ಆರೋಪಿ ಅನುಕುಮಾರ್‌ ಅಲಿಯಾಸ್‌ ಅನು, 12ನೇ ಆರೋಪಿ ಡ್ರೈವರ್‌ ಎಂ.ಲಕ್ಷ್ಮಣ್‌, 6ನೇ ಆರೋಪಿ ಜಗದೀಶ್‌ ಅಲಿಯಾಸ್‌ ಜಗ್ಗ, 14ನೇ ಆರೋಪಿ ಪ್ರದೋಷ್‌ ಎಸ್‌. ರಾವ್‌ ಅಲಿಯಾಸ್‌ ಪ್ರದೋಷ್‌ಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿತ್ತು. ಇದನ್ನು ಆಧರಿಸಿ ರಾಜ್ಯ ಸರ್ಕಾರ ಪವನ್‌, ವಿನಯ್‌ ಮತ್ತಿತರ ಜಾಮೀನು ರದ್ದತಿಗೆ ಮನವಿ ಮಾಡಿತ್ತು.