ಕನ್ನಡಪ್ರಭ ವಾರ್ತೆ ನಂಜನಗೂಡು

ಬದುಕಿನ ಜಂಜಾಟಗಳಿಂದ ಮುಕ್ತರಾಗಲು ಬುದ್ಧ ತೋರಿದ ಧ್ಯಾನ, ಮೌನದ ಹಾದಿಯಲ್ಲಿ ಸಾಗಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂಬುದನ್ನು ನಾವೆಲ್ಲರೂ ಮನದಟ್ಟು ಮಾಡಿಕೊಳ್ಳಬೇಕಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಗೈಯಲ್ಲಿ ಎಲ್ಲವೂ ದೊರಕುವ ಕಾಲಘಟ್ಟದಲ್ಲಿ ನಾವಿದ್ದೇವೆ. ವೇಗದ ಬದುಕಿನಲ್ಲಿ ತಾಳ್ಮೆ, ಸಮಾಧಾನ, ಸಂಯಮ, ಸಹನೆ ಎಂಬುದು ದೂರದ ಮಾತಾಗಿದೆ. ಪರಿಣಾಮ ನಾವೆಲ್ಲರೂ ಒತ್ತಡದ ಜೀವನಶೈಲಿಯಿಂದ ಬಳಲುತ್ತಿದ್ದೇವೆ. ಈ ಎಲ್ಲ ಜಂಜಾಟಗಳಿಂದ ಮುಕ್ತರಾಗಲು ಬುದ್ಧ ತೋರಿದ ಧ್ಯಾನ, ಮೌನದ ಹಾದಿಯಲ್ಲಿ ಸಾಗುವ ಮೂಲಕ ಅವರ ಸಾಮಾಜಿಕ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂಬುದನ್ನು ಅರಿಯಬೇಕು ಎಂದರು.

ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ ಮಾತನಾಡಿ, ಧ್ಯಾನ, ಮೌನ, ಆನಂದ ಅನುದಿನದ ಪರಿಕ್ರಮವಾಗಬೇಕೆಂಬುದೇ ಭಗವಾನ್ ಬುದ್ಧರ ಬೋಧನೆಯ ಮೂಲ ಆಶಯವಾಗಿತ್ತು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜ್ಞಾನವಿರುತ್ತದೆ. ಆ ಜ್ಞಾನ ಸುಜ್ಞಾನವಾಗಿ ಧ್ಯಾನ ಸ್ಥಿತಿಗೆ ಮರಳಬೇಕು. ಧ್ಯಾನದಿಂದ ಮೌನ ಸಂಪಾದಿಸಬೇಕು. ಮೌನದಿಂದ ಆನಂದವನ್ನು ಗಳಿಸಬೇಕು. ಈ ಸ್ಥಿತಿಗೆ ತಲುಪಿದಾಗ ನಮ್ಮ ಬೇಕು ಬೇಡಗಳ ಬಗ್ಗೆ ನಮಗೆ ಸ್ವಯಂ ಅರಿವಾಗುತ್ತದೆ ಎಂದರು.


ಮಾಜಿ ಶಾಸಕ ಕಳಲೆ ಎನ್. ಕೇಶವಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಹಸೀಲ್ದಾರ್ ಸ್ಮಿತಾ ರಾಮ್, ತಾಪಂ ಇಒ ಜೆರಾಲ್ಡ್ ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಕಾಂಗ್ರೆಸ್ ಎಸ್ಸಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಡ್ಯ ಜಯರಾಮ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ಮಡಿವಾಳ ಸಮಾಜ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಕೆ.ಎಂ. ಬಸವರಾಜು, ರಾಜೇಶ್, ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್, ನಾರಾಯಣ, ಸುರೇಶ್, ಬಸವಣ್ಣ, ಎಂ. ವಿಜಯಕುಮಾರ್, ಅಂಕಯ್ಯ, ವಾಸುದೇವಮೂರ್ತಿ, ಕುಮಾರಸ್ವಾಮಿ ಇದ್ದರು.