ಕನ್ನಡಪ್ರಭ ವಾರ್ತೆ ಕೋಲಾರಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ, ಗ್ಯಾಸ್ ಬೆಲೆ ೫೦ ರೂ. ಹೆಚ್ಚಳ ಮಾಡಿದೆ, ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಮಲತಾಯಿ ಧೋರಣೆ ತಾರತಮ್ಯ ಮಾಡುತ್ತಿರುವುದರ ವಿರುದ್ದ ರಾಜ್ಯ ಕಾಂಗ್ರೆಸ್ ಏ.೧೭ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹಾಗೂ ಮಾಜಿ ಎಂಎಲ್ಸಿ ನಾರಾಯಣಸ್ವಾಮಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಸಮೀಪದ ೧೦ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತನ್ನು ಸಂಘಟಿಸಿದೆ, ಪ್ರತಿ ಜಿಲ್ಲೆಗೆ ೧೦ ಬಸ್ಗಳನ್ನು ನೀಡಿದ್ದು ಕನಿಷ್ಠ ೫೦೦ ಮಂದಿ ಭಾಗವಹಿಸಲು ಆಹ್ವಾನಿಸಿದೆ, ಪ್ರತಿಭಟನೆಯಲ್ಲಿ ಕನಿಷ್ಟ ೫ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.ಬಿಜೆಪಿಗೆ ಕಪಾಳಮೋಕ್ಷ
ಹಾಲಿನ ದರ ೪ ರೂ. ಏರಿಕೆ ಮಾಡಿ ಹಾಲು ಉತ್ಪಾದಕರಾದ ರೈತರಿಗೆ ನೀಡುವುದನ್ನು ವಿರೋಧಿಸಿ ಬಿಜೆಪಿ ಪಕ್ಷವು ಜನಾಕ್ರೋಶ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಗ್ಯಾಸ್, ಡಿಸೇಲ್, ಪ್ರೆಟೋಲ್ ದರಗಳನ್ನು ಏರಿಕೆ ಮಾಡುವ ಮೂಲಕ ಕಪಾಳ ಮೋಕ್ಷ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗುರಿಯಾಗಿದೆ ಎಂದರು.ಇದೇ ರೀತಿ ಜೆಡಿಎಸ್ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎಂಬ ಘೋಷಣೆಯೊಂದಿಗೆ ಪ್ರತಿಭಟಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಂತರ ತಣ್ಣಗಾಯಿತು, ಕೇಂದ್ರ ಸರ್ಕಾರವು ಯಾವುದೇ ನೀರಾವರಿ ಯೋಜನೆ ಘೋಷಿಸಲಿಲ್ಲ, ಬರಗಾಲಕ್ಕೆ ಅನುದಾನ ನೀಡುವಲ್ಲಿಯೂ ಅನ್ಯಾಯ ಮಾಡಿದೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ನೀಡುವಲ್ಲಿಯೂ ವಂಚಿಸಿದೆ, ೧೫ನೇ ಹಣಕಾಸು ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಬೆಲೆ ಏರಿಕೆಗೆ ಕೇಂದ್ರ ಕಾರಣಡೀಸೆಲ್, ಪೆಟ್ರೋಲ್ ಕಡಿಮೆ ಬೆಲೆಗೆ ದೊರೆತರೂ ಸಹ ಕೇಂದ್ರ ಸರ್ಕಾರವು ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ವಿತರಿಸದೆ ಬೆಲೆ ಏರಿಕೆ ಮಾಡಿದೆ, ನಾವು ಹಾಲಿನ ಬೆಲೆ ಏರಿಕೆ ಮಾಡಿದರೂ ಅದನ್ನು ಉತ್ಪಾದಕನಾದ ರೈತರಿಗೆ ವಿತರಿಸುತ್ತಿದ್ದೇವೆ, ಮೋದಿ ಆಡಳಿತಕ್ಕೆ ಬಂದ ೧೦ ವರ್ಷಗಳಲ್ಲಿ ಬಡಜನತೆಯು ಬೆಲೆ ಏರಿಕೆಗಳಿಂದ ಕುಸಿದು ಹೋಗಿರುವುದು ಕಂಡು ಕಾಂಗ್ರೆಸ್ ಸಾರ್ವಜನಿಕರಿಗೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ, ಇದಕ್ಕಾಗಿ ೫೨ ಸಾವಿರ ಕೋಟಿ ಮೀಸಲಿಟ್ಟಿದೆ ಎಂದರು.
ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರೈತರ ಸಾಲ ಮನ್ನ ಮಾಡಲಿಲ್ಲ ಆದರೆ ಕೈಗಾರಿಕೋಧ್ಯಮಗಳಿಗೆ ೧೦೦ ಲಕ್ಷ ಕೋಟಿ ರು. ಸಾಲ ಮನ್ನ ಮಾಡಿದೆ ರೈತರಿಗೆ ಕನಿಷ್ಟ ೫ ಲಕ್ಷ ಕೋಟಿ ರೂ ಸಾಲ ಮನ್ನ ಮಾಡಲಿಕ್ಕೆ ಆಗದ ಬಿಜೆಪಿ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ೧೦೦ ಲಕ್ಷ ಕೋಟಿ ಸಾಲ ಮಾಡುವ ಮೂಲಕ ರೈತ ವಿರೋಧಿ ಧೋರಣೆ ನಿರೂಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸಲು ಹೋದವರ ಮೇಲೆ ಇ.ಡಿ ದಾಳಿ ಆದಾಯ ತೆರಿಗೆ ದಾಳಿ ಮಾಡಿಸುವ ಮೂಲಕ ಅಧಿಕಾರ ದುರ್ಬಳಿಸಿಕೊಂಡು ಹೆದರಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.ಹಾಲಿನ ಪ್ರೋತ್ಸಾಹ ಧನ
ಹಾಲಿನ ಪ್ರೋತ್ಸಾಹ ಧನ ತಾಂತ್ರಿಕ ದೋಷದಿಂದಾಗಿ ೩-೪ ತಿಂಗಳು ಬಾಕಿ ಇದ್ದು ನಂತರದಲ್ಲಿ ಹಂತ ಹಂತವಾಗಿ ವಿತರಣೆಗೆ ಕ್ರಮವಹಿಸಿದೆ, ನಮ್ಮ ಪಕ್ಷದಲ್ಲಿ ಯಾವೂದೇ ಬಣಗಳು ಇಲ್ಲ, ಭಿನ್ನಾಭಿಪ್ರಾಯಗಳು ಇಲ್ಲ ಎಂದರು,ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು. ಎಸ್.ಸಿ. ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್.ಟಿ. ಘಟಕದ ಅಧ್ಯಕ್ಷ ನಾಗರಾಜ್, ಹಿಂದುಳಿದ ವರ್ಗಗಳ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ರತ್ನಮ್ಮ, ಮುಖಂಡರಾದ ಸುದೀರ್, ವೆಂಕಟಪತಪ್ಪ, ಸಿ.ಸೋಮಶೇಖರ್, ತ್ಯಾಗರಾಜ್ ಇದ್ದರು.