ವೋಟ್ ಚೋರಿ ಎನ್ನುವ ವಿಷಯವನ್ನು ಕಾಂಗ್ರೆಸ್ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿತ್ತು. ಈಗ ಫಲಿತಾಂಶ ಬಂದ ತಕ್ಷಣ ಅವರಿಗೆ ಅರಿವಾಗಿದೆ. ಇವರ ಡೋಂಗಿತನ ಬಯಲಾಗಿದೆ.
ಧಾರವಾಡ:
ಬಿಹಾರ್ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಎನ್ನುವುದೇ ಇರುವುದಿಲ್ಲವೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಚೋರಿ ಎನ್ನುವ ವಿಷಯವನ್ನು ಕಾಂಗ್ರೆಸ್ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿತ್ತು. ಈಗ ಫಲಿತಾಂಶ ಬಂದ ತಕ್ಷಣ ಅವರಿಗೆ ಅರಿವಾಗಿದೆ. ಇವರ ಡೋಂಗಿತನ ಬಯಲಾಗಿದೆ. ಅಲ್ಲದೇ ಕುಡಿಯುವುದಕ್ಕೆ ನಾನು ಅನುಮತಿ ನೀಡುತ್ತೇನೆ ಎಂದಿದ್ದರು. ವಕ್ಫ್ ಬೋರ್ಡ್ ಸೇರಿದಂತೆ ಮನೆಗೊಂದು ಸರ್ಕಾರಿ ನೌಕರಿ ನೀಡುತ್ತೇನೆ ಎಂದಿದ್ದರು. ಒಂದು ರೀತಿಯಲ್ಲಿ ಇವರು ಮೂರ್ಖರು. ಮನೆಗೊಂದು ನೌಕರಿ ಕೊಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಮತ ಪಡೆಯುವುದಕ್ಕಾಗಿ ಏನು ಬೇಕಾದರೂ ಹೇಳಬಹುದು ಎನ್ನುವುದನ್ನು ಜನರು ಒಪ್ಪುವುದಿಲ್ಲ. ಕಾಂಗ್ರೆಸ್ನವರು ದೇಶವನ್ನು ಒಡೆಯುವ ಜತೆಗೆ ಹಾಳು ಮಾಡುತ್ತಿದ್ದಾರೆ. ಮಿಲಿಟರಿಯಲ್ಲಿ ಜಾತಿ ಹುಟ್ಟು ಹಾಕುತ್ತಿದ್ದಾರೆ. ಇಂತಹ ದೇಶದ್ರೋಹಿ ಮತ್ತು ಮಾನಸಿಕತೆ ಇರುವವರು ದೇಶದಲ್ಲಿಯೇ ಇರಬಾರದು. ಅದಕ್ಕಾಗಿಯೇ ಇಂದು ಜನರು ಬುದ್ಧಿ ಕಲಿಸಿದ್ದಾರೆ ಎಂದರು.
ಬಿಹಾರದಲ್ಲಿ ಜೆಡಿಯು, ಮಿತ್ರಪಕ್ಷಗಳ ಗೆಲುವು:
ಬಿಹಾರದಲ್ಲಿ ಜೆಡಿಯು ಮತ್ತು ಮಿತ್ರಪಕ್ಷಗಳ ಅಭೂತ ಪೂರ್ಣ ಗೆಲುವು ಜನತೆಯ ಗೆಲುವಾಗಿದ್ದು, ಇದು ಲೋಕತಂತ್ರ, ಸಂವಿಧಾನದ ಗೆಲವು ಎಂದು ಜನತಾದಳ (ಸಂಯುಕ್ತ) ಜೆಡಿಯು ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ನಿತೀಶ ಕುಮಾರ 20 ವರ್ಷಗಳಿಂದ ಬಿಹಾರದಲ್ಲಿ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು, ಲೋಕತಂತ್ರ ಮತ್ತು ಸಂವಿಧಾನದ ಗೆಲುವಾಗಿದೆ. ಮಹಿಳಾ ಸಬಲೀಕರಣ, ಮಕ್ಕಳ, ವಿದ್ಯಾರ್ಥಿಗಳ ಉನ್ನತಿಕರಣಕ್ಕಾಗಿ ಹಲವಾರು ಕಾರ್ಯಕ್ರಮ ಆಯೋಜಿಸಿ ಅಭಿವೃದ್ಧಿ ಪಥದತ್ತ ರಾಜ್ಯವನ್ನು ಕೊಂಡೊಯ್ದ ಪರಿಣಾಮವಾಗಿ ಜನ ಸಾಮಾನ್ಯರು ಅಭಿವೃದ್ಧಿ ಪರ ಗೆಲುವು ನೀಡಿದ್ದಾರೆ ಎಂದರು. ಕಾಂಗ್ರೆಸ್, ಆರ್ಜೆಡಿ ಇನ್ನಿತರೆ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಸುಳ್ಳು ಭರವಸೆಗಳಿಗೆ ಮಣೆ ಹಾಕದ ಜಾಗೃತ ಮತದಾರ ತಕ್ಕ ಪಾಠ ಕಲಿಸಿದ್ದಾರೆ. ಮತದಾರ ನೀಡಿದ ಈ ಗೆಲುವು ರಾಷ್ಟ್ರದ ಅಭಿವೃದ್ಧಿಯ ಸಂಕೇತ ಎಂದು ಕಮತರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.