ಕಾಂಗ್ರೆಸ್ನಿಂದ ರಾಷ್ಟ್ರವ್ಯಾಪ್ತಿ ‘ಛಾತ್ರೋಂ ಕಿ ಗೂಂಜ್’ ಹೆಸರಲ್ಲಿ ಅಭಿಯಾನ
ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ನೀಟ್ ಪರೀಕ್ಷೆಯ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಈ ಸಮಾವೇಶವನ್ನು ನಡೆಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಸಜರಿತಾ ಲೈತ್ಫ್ಲಾಂಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಷ್ಟ್ರ ವ್ಯಾಪಿ ‘ಛಾತ್ರೋಂ ಕಿ ಗೂಂಜ್’ ಎಂಬ ಹೆಸರಿನಲ್ಲಿ ವಿದ್ಯಾರ್ಥಿ ಪರ ಆಂದೋಲನವನ್ನು ಆರಂಭಿಸಿದೆ. ಇದು ನೀಟ್ ಪರೀಕ್ಷಾ ಅಕ್ರಮಗಳು, ಪೇಪರ್ ಸೋರಿಕೆ, ನಿರುದ್ಯೋಗ ಮತ್ತು ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧದ ಅಭಿಯಾನವಾಗಿದೆ ಎಂದರು.ವ್ಯವಸ್ಥೆ ದುರ್ಬಲವಾಗಿರುವುದರಿಂದ ಪ್ರಶ್ನೆಪತ್ರಿಕೆ ಲೀಕ್ ಆಗಿವೆ. ಭಾರತದ ಯುವಜನತೆ ಕೇವಲ ಒಂದು ಪರೀಕ್ಷೆಯಿಂದ ಮಾತ್ರವಲ್ಲ, ಆಕಾಂಕ್ಷೆಗಳನ್ನು ನಿರಾಶೆಯಾಗಿ ಪರಿವರ್ತಿಸಿದ ದುರ್ಬಲ ಶಿಕ್ಷಣ ವ್ಯವಸ್ಥೆಯಿಂದಾಗಿ ಕಂಗೆಟ್ಟಿದ್ದಾರೆ ಎಂದರು.
ಮೇ ೩ರಂದು ನಡೆದ ಪರೀಕ್ಷೆಯನ್ನು ಬೃಹತ್ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳ ನಂತರ ಮೇ ೧೨ರಂದು ರದ್ದುಗೊಳಿಸಲಾಯಿತು. ಜೂ.೨೧ರಂದು ಮರುಪರೀಕ್ಷೆ ನಡೆಸಲಾಯಿತು. ಇದರಿಂದಾಗಿ ೨೨ ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಅನಿಶ್ಚಿತತೆಯಲ್ಲಿ ಸಿಲುಕಿದರು ಎಂದರು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ, ಮುದ್ರಣ, ಸಾರಿಗೆ, ಡಿಜಿಟಲ್ ಮೂಲಸೌಕರ್ಯ ಮತ್ತು ವೆಂಡರ್ ಒಪ್ಪಂದಗಳು ಸೇರಿದಂತೆ ಪರೀಕ್ಷಾ ವ್ಯವಸ್ಥೆಯ ಸಮಗ್ರ ಸುಧಾರಣೆಯಾಗಬೇಕು. ಮೊದಲಿನಂತೆಯೇ ನೀಟ್ ಪರೀಕ್ಷೆಯ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಬೇಕು ಎಂದರು.
ವಿದ್ಯಾರ್ಥಿಗಳ ಧ್ವನಿಯನ್ನು ಇನ್ಮುಂದೆ ಈ ಹದಗೆಟ್ಟ ವ್ಯವಸ್ಥೆಯಿಂದ ಮೌನಗೊಳಿಸಲು ಸಾಧ್ಯವಿಲ್ಲ. ಮುಂದೂಡಲ್ಪಟ್ಟ ಪ್ರತಿಯೊಂದು ಕನಸು, ಕಳೆದುಕೊಂಡ ಪ್ರತಿಯೊಂದು ಜೀವ ಮತ್ತು ’ಛಾತ್ರೋಂ ಕಿ ಗೂಂಜ್’ನಲ್ಲಿ ಎತ್ತಿದ ಪ್ರತಿಯೊಂದು ಧ್ವನಿಯು ಹೊಣೆಗಾರಿಕೆ, ಸುಧಾರಣೆ ಮತ್ತು ನ್ಯಾಯಕ್ಕಾಗಿ ಮಾಡಿದ ಕರೆಯಾಗಿದೆ ಎಂದರು.
---
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸಜರಿತಾ ಲೈತ್ಫ್ಲಾಂಗ್ ಮಾತನಾಡಿದರು.