ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಪತ್ತೆಶಾ ಮಕಾನದಾರ ಗೆಲವು ಪಡೆದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.೭ ರ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.೨೭ ರಂದು ಜರುಗಿದ ಉಪಚುನಾವಣೆಯ ಮತಎಣಿಕೆ ಶನಿವಾರ ಸ್ಥಳೀಯ ತಹಸೀಲ್ದಾರ ಕಚೇರಿಯಲ್ಲಿ ನಡೆಯಿತು. ಕಾಂಗ್ರೆಸ್ನ ಸಲೀಂ ೨೪೪, ಜೆಡಿಎಸ್ನ ಸಾಹೇಬಪಾಜ್ಯಾ ತೆಲಸಂಗ ೧೨೨, ಬಿಜೆಪಿಯ ಬಸಗೊಂಡಪ್ಪ ಮುತ್ತಪ್ಪನವರ ೬ ಹಾಗೂ ಪಕ್ಷೇತರ ಅಭ್ಯರ್ಥಿ ವಾಹಿದಾಬಾನು ಆಲಮೇಲ ೯೩ ಮತಗಳನ್ನು ಪಡೆದರು. ಒಟ್ಟು ೪೬೭ ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ೨ ಮತಗಳು ನೋಟಾಗೆ ಚಲಾವಣೆಯಾಗಿವೆ. ೨೪೪ ಮತಗಳನ್ನು ಪಡೆದು ಕಾಂಗ್ರೆಸ್ನ ಸಲೀಂ ವಿಜೇತರಾದರು ಎಂದು ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿ.ಬಿ.ಪಾಟೀಲ ತಿಳಿಸಿದರು. ಮತಎಣಿಕೆ ಕಾರ್ಯ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಶೀರಸ್ತೆದಾರ್ ಎ.ಎಚ್.ಬಳೂರಗಿ, ರಿಸಿಕೇತ ಇಂಗಳೆ, ಪ್ರವೀಣ ಲಮಾಣಿ, ಅನಿಲ ಅವಟಿ ಇದ್ದರು.ಸಂಭ್ರಮಾಚರಣೆ: ಚುನಾವಣೆಯಲ್ಲಿ ಗೆಲುವಿಗೆ ಮಿನಿವಿಧಾನಸೌಧ ಮುಂಭಾಗ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪರಸ್ಪರ ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜೇತ ಸಲೀಂ ಪತ್ತೆಶಾ ಮಕಾನದಾರ ವಿಜಯಪುರಕ್ಕೆ ತೆರಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ, ಸಿಹಿ ಹಂಚಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಗುಜಗೊಂಡ, ಪಪಂ ಸದಸ್ಯ ಡಾ.ಎಂ.ಡಿ.ಮೇತ್ರಿ, ಪ್ರದೀಪ ಜಾನಕರ, ಮುಖಂಡ ಮಲ್ಲನಗೌಡ ಬಿರಾದಾರ, ರಾಜೇಂದ್ರಗೌಡ ಪಾಟೀಲ ಇತರರು ಇದ್ದರು. ನಂತರ ಮನಗೂಳಿ ಪಟ್ಟಣದಲ್ಲಿ ವಿಜಯೋತ್ಸವ ಜರುಗಿತು.