ಮನಗೂಳಿ ಪಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು

KannadaprabhaNewsNetwork | Published : Dec 31, 2023 1:30 AM

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.೭ ರ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.೨೭ ರಂದು ಜರುಗಿದ ಉಪಚುನಾವಣೆಯ ಮತಎಣಿಕೆ ಶನಿವಾರ ಸ್ಥಳೀಯ ತಹಸೀಲ್ದಾರ ಕಚೇರಿಯಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಪತ್ತೆಶಾ ಮಕಾನದಾರ ಗೆಲವು ಪಡೆದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.೭ ರ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.೨೭ ರಂದು ಜರುಗಿದ ಉಪಚುನಾವಣೆಯ ಮತಎಣಿಕೆ ಶನಿವಾರ ಸ್ಥಳೀಯ ತಹಸೀಲ್ದಾರ ಕಚೇರಿಯಲ್ಲಿ ನಡೆಯಿತು. ಕಾಂಗ್ರೆಸ್‌ನ ಸಲೀಂ ೨೪೪, ಜೆಡಿಎಸ್‌ನ ಸಾಹೇಬಪಾಜ್ಯಾ ತೆಲಸಂಗ ೧೨೨, ಬಿಜೆಪಿಯ ಬಸಗೊಂಡಪ್ಪ ಮುತ್ತಪ್ಪನವರ ೬ ಹಾಗೂ ಪಕ್ಷೇತರ ಅಭ್ಯರ್ಥಿ ವಾಹಿದಾಬಾನು ಆಲಮೇಲ ೯೩ ಮತಗಳನ್ನು ಪಡೆದರು. ಒಟ್ಟು ೪೬೭ ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ೨ ಮತಗಳು ನೋಟಾಗೆ ಚಲಾವಣೆಯಾಗಿವೆ. ೨೪೪ ಮತಗಳನ್ನು ಪಡೆದು ಕಾಂಗ್ರೆಸ್‌ನ ಸಲೀಂ ವಿಜೇತರಾದರು ಎಂದು ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿ.ಬಿ.ಪಾಟೀಲ ತಿಳಿಸಿದರು. ಮತಎಣಿಕೆ ಕಾರ್ಯ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಶೀರಸ್ತೆದಾರ್‌ ಎ.ಎಚ್.ಬಳೂರಗಿ, ರಿಸಿಕೇತ ಇಂಗಳೆ, ಪ್ರವೀಣ ಲಮಾಣಿ, ಅನಿಲ ಅವಟಿ ಇದ್ದರು.

ಸಂಭ್ರಮಾಚರಣೆ: ಚುನಾವಣೆಯಲ್ಲಿ ಗೆಲುವಿಗೆ ಮಿನಿವಿಧಾನಸೌಧ ಮುಂಭಾಗ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪರಸ್ಪರ ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜೇತ ಸಲೀಂ ಪತ್ತೆಶಾ ಮಕಾನದಾರ ವಿಜಯಪುರಕ್ಕೆ ತೆರಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ, ಸಿಹಿ ಹಂಚಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಗುಜಗೊಂಡ, ಪಪಂ ಸದಸ್ಯ ಡಾ.ಎಂ.ಡಿ.ಮೇತ್ರಿ, ಪ್ರದೀಪ ಜಾನಕರ, ಮುಖಂಡ ಮಲ್ಲನಗೌಡ ಬಿರಾದಾರ, ರಾಜೇಂದ್ರಗೌಡ ಪಾಟೀಲ ಇತರರು ಇದ್ದರು. ನಂತರ ಮನಗೂಳಿ ಪಟ್ಟಣದಲ್ಲಿ ವಿಜಯೋತ್ಸವ ಜರುಗಿತು.